ರಾಜ್ಯ

ಬಂಧನದಿಂದ ತಪ್ಪಿಸಿಕೊಳ್ಳಲು ತಾನು ಸತ್ತಿರುವುದಾಗಿ ಕಥೆ ಕಟ್ಟಿದ್ದ ರೌಡಿ ಶೀಟರ್‌ ಬಂಧಿಸಿದ ಸಿಸಿಬಿ ಪೊಲೀಸರು!

Ramyashree GN

ಬೆಂಗಳೂರು: ಬಂಧನದಿಂದ ತಪ್ಪಿಸಿಕೊಳ್ಳಲು ಎರಡು ವರ್ಷಗಳ ಕಾಲ ತಾನು ಸತ್ತಿರುವುದಾಗಿ ಬಿಂಬಿಸಿಕೊಂಡಿದ್ದ ರೌಡಿ ಶೀಟರ್ ಒಬ್ಬನನ್ನು ಬಂಧಿಸಿರುವುದಾಗಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಬೆಂಗಳೂರಿನ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿರುವ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ ಎಂಬಾತನನ್ನು ಸಿಟಿ ಸೆಂಟ್ರಲ್ ಕ್ರೈಂ ಬ್ರಾಂಚ್ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಕಾಡುಬೀಸನಹಳ್ಳಿ ಮತ್ತು ರಾಜಾನುಕುಂಟೆಯಲ್ಲಿ ನಡೆದ ಎರಡು ಕೊಲೆ ಪ್ರಕರಣಗಳಲ್ಲಿ ಆರೋಪಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡು ವರ್ಷಗಳಿಂದ ನಾಪತ್ತೆಯಾಗಿದ್ದು, ಪೊಲೀಸರು ಆತನ ಬಗ್ಗೆ ವಿಚಾರಿಸಿದಾಗ ಆತ ಬದುಕಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ. ಆರೋಪಿಯ ಸ್ನೇಹಿತರು ಮತ್ತು ಸಂಬಂಧಿಕರಿಗೂ ಆತ ಸಾವಿಗೀಡಾಗಿದ್ದಾನೆ ಎಂದು ತಿಳಿಸಲಾಗಿದೆ.

ಆರೋಪಿ ಮೃತಪಟ್ಟಿದ್ದಾನೆ ಎಂಬುದಕ್ಕೆ ಕುಟುಂಬ ಸದಸ್ಯರು ದಾಖಲೆಗಳನ್ನು ಸಹ ಪಡೆದಿದ್ದರು. ಈ ಹೇಳಿಕೆಗಳ ಬಗ್ಗೆ ಅನುಮಾನಗೊಂಡ ಪೊಲೀಸರು ತನಿಖೆ ನಡೆಸಿದಾಗ ಆತ ಇನ್ನೂ ಜೀವಂತವಾಗಿರುವುದು ತಿಳಿದುಬಂದಿದೆ.

ಆರೋಪಿ ರೌಡಿಶೀಟರ್ ನಿರಂತರವಾಗಿ ಸ್ಥಳದಿಂದ ಸ್ಥಳಕ್ಕೆ ಫಲಾಯನ ಮಾಡುತ್ತಾ ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದ. ಆದರೆ, ಸಿಸಿಬಿ ತಂಡ ಇದೀಗ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

SCROLL FOR NEXT