ರಾಜ್ಯ

ವಿಜಯನಗರ: ಹಂಪಿ ದೇವಸ್ಥಾನದ ಕಲ್ಲಿನ ಕಂಬ ವಿರೂಪ ಪ್ರಕರಣ; ಗುಮಾಸ್ತ ಅಮಾನತು

Ramyashree GN

ವಿಜಯನಗರ: ಯುನೆಸ್ಕೋ ಪಾರಂಪರಿಕ ತಾಣವಾದ ಹಂಪಿಯಲ್ಲಿರುವ ಐತಿಹಾಸಿಕ ವಿರೂಪಾಕ್ಷ ದೇವಾಲಯದೊಳಗಿನ ಕಲ್ಲಿನ ಕಂಬವನ್ನು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ದೇವಾಲಯದ ಗುಮಾಸ್ತರನ್ನು ಅಮಾನತುಗೊಳಿಸಿದ್ದಾರೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.

ಇದಕ್ಕೂ ಮುನ್ನ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಅಧಿಕಾರಿಗಳು ದತ್ತಿ ಇಲಾಖೆಗೆ ನೋಟಿಸ್ ಜಾರಿ ಮಾಡಿ ಈ ಸಂಬಂಧ ವಿವರಣೆ ಕೇಳಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ದತ್ತಿ ಇಲಾಖೆ ಸಹಾಯಕ ಆಯುಕ್ತರು ಹಂಪಿ ದೇವಸ್ಥಾನದ ಗುಮಾಸ್ತರಾದ ಬಿ.ಜಿ. ಶ್ರೀನಿವಾಸ್ ಎಂಬುವವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಮೊಳೆ ಹೊಡೆಯುವ ಸಲುವಾಗಿ ಕಂಬವೊಂದರ ಮೇಲೆ ಕೊರೆಯುವ ಯಂತ್ರವನ್ನು ಬಳಸಲಾಗಿದೆ. ದೇವಾಲಯದ ಗರ್ಭಗುಡಿಯ ಬಳಿ ಎರಡು ಕಂಬಗಳ ನಡುವೆ ಗೇಟ್ ಜೋಡಿಸಲು ಮೊಳೆ ಹೊಡೆಯಲಾಗಿದೆ. ಆದರೆ, ಈ ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನ ದತ್ತಿ ಇಲಾಖೆಯು ಎಎಸ್‌ಐನಿಂದ ಒಪ್ಪಿಗೆ ಪಡೆದಿರಲಿಲ್ಲ.

ದತ್ತಿ ಇಲಾಖೆಗೆ ದೇವಸ್ಥಾನದಲ್ಲಿ ಪೂಜೆ ನೆರವೇರಿಸಲು ಮಾತ್ರ ಜವಾಬ್ದಾರಿ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹಂಪಿ ದೇವಸ್ಥಾನವು ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿರುವ ಕಾರಣ ಎಎಸ್‌ಐ ತಂಡವು ಈ ಹಾನಿಯನ್ನು ಗಮನಿಸಿದೆ. ಪಾರಂಪರಿಕ ಸ್ಮಾರಕಗಳಿಗೆ ಸಣ್ಣಪುಟ್ಟ ಹಾನಿಯಾದರೂ, ಅದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ಎಎಸ್‌ಐ ಅಧಿಕಾರಿಗಳು ತಿಳಿಸಿದ್ದಾರೆ.

ಕಂಬವನ್ನು ವಿರೂಪಗೊಳಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸ್ಥಳೀಯರು, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

SCROLL FOR NEXT