ರಾಜ್ಯ

ರೈತರಿಗೆ ಮದುವೆಗೆ ಹೆಣ್ಣು ಸಿಗದ ಸಮಸ್ಯೆ: ಮೈಸೂರಿನಿಂದ ಆದಿಚುಂಚನಗಿರಿ ಮಠಕ್ಕೆ ಪಾದಯಾತ್ರೆ

Sumana Upadhyaya

ಮೈಸೂರು: ಇತ್ತೀಚಿನ ವರ್ಷಗಳಲ್ಲಿ ಕೃಷಿ ಕೆಲಸ ಮಾಡುವ ಯುವ ರೈತರಿಗೆ ಮದುವೆಯಾಗಲು ಹೆಣ್ಣು ಸಿಗುವುದಿಲ್ಲ ಎಂಬ ಮಾತನ್ನು ಎಲ್ಲ ಕಡೆ ಕೇಳುತ್ತೇವೆ. ಮೈಸೂರು ಮತ್ತು ಮಂಡ್ಯ ಗ್ರಾಮಾಂತರ ಭಾಗದಲ್ಲಿ ಹಲವು ರೈತ ಯುವಕರು ವಧು ಹುಡುಕಲು ಪರದಾಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ ಸದಸ್ಯರು ಮೈಸೂರಿನಿಂದ ಆದಿಚುಚುನಗಿರಿ ಮಠದವರೆಗೆ ಪಾದಯಾತ್ರೆ ನಡೆಸಲು ಮುಂದಾಗಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ವೇದಿಕೆ ಅಧ್ಯಕ್ಷೆ ಯಮುನಾ ಎಚ್‌ಆರ್‌, ಮಹಿಳೆಯರು ಮತ್ತು ಅವರ ಕುಟುಂಬದವರು ಗ್ರಾಮೀಣ ಜೀವನವನ್ನು ಅಳವಡಿಸಿಕೊಳ್ಳಲು ಮತ್ತು ಕೃಷಿ ಕೆಲಸ ಮಾಡಲು ಹಿಂಜರಿಯುತ್ತಿರುವುದನ್ನು ನೋಡುತ್ತಿರುವಾಗ ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಹಳ್ಳಿ ಜೀವನ, ಕೃಷಿ ಕೆಲಸದ ಬಗ್ಗೆ ಇಂದಿನ ಯುವತಿಯರು ಮತ್ತು ಅವರ ಪೋಷಕರಿಗಿರುವ ತಪ್ಪು ಭಾವನೆ, ಅಸಡ್ಡೆ ದೂರವಾಗಬೇಕೆಂಬುದು ನಮ್ಮ ಉದ್ದೇಶ ಎಂದರು.

ರೈತರಿಗೆ ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ ಎಂಬ ಸಮಸ್ಯೆ ಹೊಸದೇನಲ್ಲ. ಗ್ರಾಮೀಣ ಜೀವನಕ್ಕೆ ಹೊಂದಿಕೊಳ್ಳಲು ಇಷ್ಟಪಡದ ಹೆಚ್ಚಿನ ಮಹಿಳೆಯರು ರೈತ ವರನನ್ನು ಮದುವೆಯಾಗಲು ನಿರ್ಲಕ್ಷ್ಯ ಮನೋಭಾವವನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು.

ಈ ಬಗ್ಗೆ ಅರಿವು ಮೂಡಿಸಲು ಡಿಸೆಂಬರ್ 8, 9 ಮತ್ತು 10 ರಂದು ಮೈಸೂರಿನಿಂದ ಮೂರು ದಿನಗಳ ಕಾಲ ಈ ಪಾದಯಾತ್ರೆ ನಡೆಸುತ್ತಿದ್ದೇವೆ. ಪಾದಯಾತ್ರೆಯಲ್ಲಿ ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ಎಂದು ಮತ್ತು ಧರ್ಮಸ್ಥಳದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸುತ್ತೇವೆ ಎಂದರು.

SCROLL FOR NEXT