ರಾಜ್ಯ

ಗದಗ ಮೃಗಾಲಯದಲ್ಲಿ ಅಳಿವಿನಂಚಿನಲ್ಲಿರುವ 'ಯೂರೇಷಿಯನ್ ಗ್ರಿಫನ್ ರಣಹದ್ದು' ಸಾವು

Manjula VN

ಗದಗ: ಅದು ವಿದೇಶಿ ಅತಿಥಿ. ಸಾವಿರಾರು ಕಿ.ಮಿ ಕ್ರಮಿಸಿಕೊಂಡು ದೂರದ ದೇಶದಿಂದ ಕರ್ನಾಟಕಕ್ಕೆ ಬಂದಿತ್ತು. ಹಿಂದೆಯೂ ಬಂದಿರಬಹುದು. ಆದರೆ, ಈ ಬಾರಿ ರಾಜ್ಯಕ್ಕೆ ಬಂದಿದ್ದ ಈ ಅತಿಥಿ ನಿರ್ಜಲೀಕರಣದಿಂದ ಸಾವನ್ನಪ್ಪಿದೆ.

ಯೂರೇಷಿಯನ್ ಗ್ರಿಫನ್ ರಣಹದ್ದು ಅಳಿವಿನಂಚಿನಲ್ಲಿರುವ ಪಕ್ಷಿಯಾಗಿದ್ದು, ಈ ಪಕ್ಷಿಯು ಕಲಘಟಗಿ ಪಟ್ಟಣದ ಹೊರವಲದ ಜೈ ಹಿಂದ್ ಡಾಬಾ ಬಳಿಯ ಹೊಲವೊಂದರಲ್ಲಿ ನಿತ್ರಾಣಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಗ್ರಿಫನ್ ರಣಹದ್ದು 93–122 ಸೆ.ಮೀ ಉದ್ದ, 2.3ರಿಂದ 2.8 ಮೀ.ರಷ್ಟು ಅಗಲವಾದ ರೆಕ್ಕೆಗಳು ಹಾಗೂ ಸುಮಾರು 10 ಕೆ.ಜೀ ತೂಕ ಹೊಂದಿತ್ತು. ನಿರ್ಜಲೀಕರಣದಿಂದಾಗಿ ಮೇಲೆದ್ದು ಹಾರಲು ಆಗದೇ ಗಿಡವೊಂದರ ಕೆಳಗೆ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ್ದ ಡಾಬಾ ಕೆಲಸಗಾರರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ಕೂಡಲೇ ಸ್ಥಳಕ್ಕಾಗಮಿಸಿದ ಕಲಘಟಗಿ ಉಪ ವಲಯ ಅರಣ್ಯಾಧಿಕಾರಿ ರಮೇಶ ಕಡೇಮನಿ ಹಾಗೂ ಸಿಬ್ಬಂದಿ ಧಾರವಾಡ ಪಶು ಚಿಕಿತ್ಸಾಲಯದಲ್ಲಿ ಆರೈಕೆ ನೀಡಿಸಿದ್ದರು. ನಂತರ ವೈದರ ಸಲಹೆ ಮೇರೆಗೆ ಗದಗ ಜಿಲ್ಲೆ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯಕ್ಕೆ ದಾಖಲಿಸಿದ್ದರು. ಎರಡು ದಿನಗಳ ಕಾಲ ಚಿಕಿತ್ಸೆಯನ್ನೂ ನೀಡಲಾಗಿತ್ತು. ಮೊದಲ ದಿನ ಚೇತರಿಕೆ ಕಂಡಿದ್ದ ರಣಹದ್ದು, ನೀರು ಆಹಾರ ಸೇವಲು ಆರಂಭಿಸಿತ್ತು. ಆದರೆ ಮೂರು ದಿನಗಳ ಬಳಿಕ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದೆ.

ಯುರೇಷಿಯನ್ ಗ್ರಿಫನ್ ರಣಹದ್ದು ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಕಂಡುಬರುವ ಅಪರೂಪದ ಪಕ್ಷಿ. ದಕ್ಷಿಣ ಭಾರತದಲ್ಲಿ ಇದರ ಅಸ್ತಿತ್ವ ತುಂಬಾ ವಿರಳವಾಗಿದ್ದರೂ ವಲಸೆ ಹೋಗುವ ಸಂದರ್ಭದಲ್ಲಿ ಆಗಾಗೊಮ್ಮೆ ಕಂಡು ಬರುತ್ತದೆ. ಈ ರಣಹದ್ದುಗಳು ಕೆಲವೊಮ್ಮೆ ನಿರ್ಜಲೀಕರಣದಿಂದಾಗಿ ನೆಲಕ್ಕೆ ಬೀಳುತ್ತವೆ. ಕೇರಳ, ಮಹಾರಾಷ್ಟ್ರ ಮತ್ತು ಕರ್ನಾಟಕದ ಭಾಗಗಳಲ್ಲಿ ಇಂತಹ ಪ್ರಕರಣಗಳ ಉಲ್ಲೇಖ ಕೂಡ ಆಗಿವೆ. ಅದೇ ರೀತಿ ಕಲಘಟಗಿಯಲ್ಲಿ ಯುರೇಷಿಯನ್ ಗ್ರಿಫನ್ ಪತ್ತೆ ಆಗಿತ್ತಾದರೂ ಅನಾರೋಗ್ಯದಿಂದ ಮೃತಪಟ್ಟಿರುವುದಕ್ಕೆ ಪಕ್ಷಿಪ್ರಿಯರು ಕಂಬನಿ ಮಿಡಿದಿದ್ದಾರೆ.

SCROLL FOR NEXT