ರಾಜ್ಯ

ಕಂಬಳ ಯಶಸ್ಸು ಬಳಿಕ ಕಡಲೆಕಾಯಿ ಪರಿಷೆಗೆ ಬೆಂಗಳೂರು ಸಜ್ಜು!

Manjula VN

ಬೆಂಗಳೂರು: ಕಂಬಳ ಯಶಸ್ಸಿನ ಬಳಿಕ ಸಿಲಿಕಾನ್ ಸಿಟಿ ಮತ್ತೊಂದು ಸಾಂಸ್ಕೃತಿ ಕಾರ್ಯಕ್ರಮಕ್ಕೆ ಸಜ್ಜುಗೊಳ್ಳುತ್ತಿದೆ. ಡಿಸೆಂಬರ್ 2-4 ರವರೆಗೆ ಮಲ್ಲೇಶ್ವರಂನಲ್ಲಿ ಮತ್ತು ಡಿಸೆಂಬರ್ 11-13 ರವರೆಗೆ ಬಸವನಗುಡಿಯಲ್ಲಿ ಪ್ರಸಕ್ತ ಸಾಲಿನ ಕಡಲೆಕಾಯಿ ಪರಿಷೆಯನ್ನು ವೈಭವದಿಂದ ಆಚರಿಸಲು ನಿರ್ಧರಿಸಲಾಗಿದೆ.

ಈ ಬಾರಿಯ ಕಡಲೆಕಾಯಿ ಪರಿಷೆಯನ್ನು ಶೂನ್ಯ ತ್ಯಾಜ್ಯ, ಪ್ಲಾಸ್ಟಿಕ್ ಮುಕ್ತದೊಂದಿಗೆ ಪರಿಸರ ಸ್ನೇಹಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಪರಿಷೆಯಲ್ಲಿ ಪಾಲ್ಗೊಳ್ಳುವ ಮಾರಾಟಗಾರರು ಕನಿಷ್ಠ 1 ಅಥವಾ 2 ರೂ ವೆಚ್ಚದಲ್ಲಿ ಬಟ್ಟೆ ಚೀಲಗಳನ್ನು ನೀಡಲು ನಿರ್ಧರಿಸಿದ್ದಾರೆ.

ಇದಕ್ಕಾಗಿ ಬಿಬಿಎಂಪಿಯೊಂದಿಗೆ ಸುಮಾರು 17 ಸಕ್ರಿಯ ನಾಗರೀಕ ಗುಂಪುಗಳು ಕೈಜೋಡಿಸಿವೆ. ಹಸಿರುದಳ, ಸಾಹಸ್, SWMRT, ಇಂಡಿಯನ್ ಪ್ಲಾಗರ್ಸ್ ಆರ್ಮಿ ಮತ್ತು ಬ್ಯೂಟಿಫುಲ್ ಭಾರತ್‌ನಂತಹ ಗುಂಪುಗಳು ಪರಿಷೆಯನ್ನು ಪರಿಸರ ಸ್ನೇಹಿಯಾಗಿಸಲು ಮತ್ತು ಪ್ಲಾಸ್ಟಿಕ್‌ನ ಅವಲಂಬನೆಯನ್ನು ಕಡಿಮೆ ಬಿಬಿಎಂಪಿಯೊಂದಿಗೆ ಜೋಡಿಸಿ ಕೆಲಸ ಮಾಡುತ್ತಿವೆ.

ಭಾರತೀಯ ಪ್ಲಾಗರ್ಸ್ ಆರ್ಮಿಯ ಸಂಸ್ಥಾಪಕ ರಾಜ್ ಅವರು ಮಾತನಾಡಿ, ಬೆಂಗಳೂರಿನಾದ್ಯಂತ 12 ದೇಣಿಗೆ ಕೇಂದ್ರಗಳನ್ನು ರಚಿಸಿದ್ದೇವೆ. ದೇಣಿಗೆ ನೀಡಲು ಇಚ್ಛಿಸುವವರು ಬಟ್ಟೆ ಚೀಲಗಳು ಅಥವಾ ಸೀರೆಗಳು, ಬೆಡ್‌ಶೀಟ್‌ಗಳು, ಪರದೆಗಳು ಮತ್ತು ಇತರೆ ಬಟ್ಟೆಗಳನ್ನು ದಾನ ಮಾಡುವ ಮೂಲಕ ಕೊಡುಗೆ ನೀಡಬಹುದು. ನಗರದಲ್ಲಿ ಸುಮಾರು 10 ಟೈಲರಿಂಗ್ ಇನ್‌ಸ್ಟಿಟ್ಯೂಟ್‌ಗಳನ್ನು ಕೂಡ ಸ್ಥಾಪಿಸಲಾಗಿದೆ, ಈ ಸಂಸ್ಥೆಗಳು ದೊಡ್ಡ ಬಟ್ಟೆಗಳಿಂದ ಮಧ್ಯಮ ಗಾತ್ರದ ಬಟ್ಟೆಯ ಚೀಲಗಳನ್ನು ಸಿದ್ಧಪಡಿಸುತ್ತವೆ ಎಂದು ಹೇಳಿದ್ದಾರೆ.

ಪರಿಷೆಯಲ್ಲಿ ಬಿಎಂಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್, ದಯಾನಂದ ಸಾಗರ್ ವಿಶ್ವವಿದ್ಯಾಲಯ, ಸೇಂಟ್ ಜೋಸೆಫ್ ವಿಶ್ವವಿದ್ಯಾಲಯ ಮತ್ತು ಕ್ರೈಸ್ಟ್ ಯೂನಿವರ್ಸಿಟಿಯಂತಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಭಾಗವಹಿಸುತ್ತಿದ್ದು, ಬಟ್ಟೆ ಚೀಲಗಳ ಬಳಕೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿದ್ದಾರೆ.

SCROLL FOR NEXT