ಬೆಂಗಳೂರು: ಸಾಮಾನ್ಯವಾಗಿ ಆನೆಗಳು ಎದುರಾದರೆ ಜನರು ಪಟಾಕಿ ಸಿಡಿಸುವ ಮೂಲಕ ಅಥವಾ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಓಡಿಸುವ ಕೆಲಸ ಮಾಡುತ್ತಾರೆ. ಆದರೆ ನಗರದಲ್ಲಿ ಬುಧವಾರ ಕಂಡಿದ್ದು ಬೇರೆಯದ್ದೇ ದೃಶ್ಯ.
ವಿಧಾನಸೌಧದ ಎದುರು ಆನೆಗಳ ಹಿಂಡಿನೊಂದಿಗೆ ಬೆಂಗಳೂರಿಗರು ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಕಂಡು ಬಂದಿತ್ತು. ಆದರೆ, ಈ ಆನೆಗಳು ನಿಜವಾದ ಗಡಪಡೆಯಲ್ಲ. ಲಂಟಾನಾ ಮರಗಳಿಂದ ಮಾಡಲ್ಪಟ್ಟ ಆನೆಗಳಾಗಿವೆ.
ನಿನ್ನೆಯಷ್ಟೇ ಈ ಆನೆಗಳನ್ನು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಅವರು ಅನಾವರಣಗೊಳಿಸಿದರು.
ಮಾನವ-ಪ್ರಾಣಿ ಸಹಬಾಳ್ವೆ ಮತ್ತು ಸಂಘರ್ಷದ ಕುರಿತು ಜಾಗೃತಿ ಮೂಡಿಸಲು 2024 ರ ಜನವರಿ 15 ರಿಂದ ಫೆಬ್ರವರಿ 15 ರವರೆಗೆ ಬೆಂಗಳೂರಿನಾದ್ಯಂತ 150 ಲಂಟಾನಾ ಆನೆಗಳ ಪ್ರದರ್ಶನಕ್ಕೆ ಪೂರ್ವಭಾವಿಯಾಗಿ ಮುಂದಿನ ಐದು ದಿನಗಳ ಕಾಲ ಅವುಗಳನ್ನು ಪ್ರದರ್ಶಿಸಲಾಗುತ್ತಿದೆ.
ಇದನ್ನೂ ಓದಿ: 8 ವಲಯಗಳಿಂದಲೂ ಸಾಥ್ ನೀಡಿ 'ಬೆಂಗಳೂರು ಹಬ್ಬ' ಯಶಸ್ಸುಗೊಳ್ಳುವಂತೆ ಮಾಡಿ: ಅಧಿಕಾರಿಗಳಿಗೆ ಬಿಬಿಎಂಪಿ ಸೂಚನೆ
ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಸೋಲಿಗ, ಬೆಟ್ಟ ಕುರುಂಬ ಮತ್ತು ಪಣಿಯನ್ ಬುಡಕಟ್ಟು ಸಮುದಾಯದ ಕುಶಲಕರ್ಮಿಗಳು ಲಂಟಾನ ಮರದ ದಿಮ್ಮಿಗಳನ್ನು ಬಳಸಿ ಆನೆಗಳು ಮತ್ತು ಇತರ ಪ್ರಾಣಿಗಳನ್ನು ಕೆತ್ತಲು ಹೆಸರುವಾಸಿಯಾಗಿದ್ದಾರೆ.
ರಿಯಲ್ ಎಲಿಫೆಂಟ್ ಕಲೆಕ್ಟಿವ್, ಎನ್ಜಿಒ, ಯುಕೆ ಚಾರಿಟಿ ಎಲಿಫೆಂಟ್ ಫ್ಯಾಮಿಲಿ ಸಹಭಾಗಿತ್ವದಲ್ಲಿ ಈ ಲಂಟಾನಾ ಆನೆಗಳನ್ನು ತಯಾರಿಸುತ್ತದೆ.
ಮೂರು ರಾಜ್ಯಗಳ ಸುಮಾರು 150 ಆದಿವಾಸಿಗಳು ಲಂಟಾನಾ ಆನೆಗಳು ಮತ್ತು ಇತರ ವಸ್ತುಗಳನ್ನು ತಯಾರಿಸುವಲ್ಲಿ ತೊಡಗಿಸಿಕೊಂಡಿದ್ದಾರೆ.