ರಾಜ್ಯ

ಮಾಜಿ ಸಚಿವ ಹೆಚ್ ಡಿ ರೇವಣ್ಣ ಆಪ್ತನ ಮೇಲೆ ಅನಾಮಿಕ ದುಷ್ಕರ್ಮಿಗಳಿಂದ ದಾಳಿ ಯತ್ನ

Srinivas Rao BV

ಹಾಸನ: ಜೆಡಿಎಸ್ ನ ರಾಷ್ಟ್ರಾಧ್ಯಕ್ಷ ಹೆಚ್ ಡಿ ದೇವೇಗೌಡ ತವರಿನಲ್ಲಿ ಹೆಚ್ ಡಿ ರೇವಣ್ಣ ಅವರ ಆಪ್ತರ ಮೇಲೆ ನಿರಂತರ ದಾಳಿ ಯತ್ನಗಳು ನಡೆಯುತ್ತಿವೆ.

ರೇವಣ್ಣ ಆಪ್ತ ಅಶ್ವತ್ಥ್ ಗೌಡ ಮೇಲೆ ಹೊಳೆನರಸಿಪುರದಿಂದ 7 ಕಿ.ಮೀ ದೂರದಲ್ಲಿ ಸೂರನಹಳ್ಳಿ ಎಂಬ ಪ್ರದೇಶದಲ್ಲಿ ದಾಳಿ ಯತ್ನ ನಡೆದಿದೆ. ಈ ಘಟನೆ ನಡೆದಾಗ ಅಶ್ವತ್ಥ್ ಗೌಡ ರೇವಣ್ಣ ಅವರನ್ನು ಮನೆಗೆ ಬಿಟ್ಟು ತಮ್ಮ ಊರು ಚೆನ್ನರಾಯಪಟ್ಟಣಕ್ಕೆ ವಾಪಸ್ ತೆರಳುತ್ತಿದ್ದರು. ಮಂಗಳವಾರ ರಾತ್ರಿ 8 ಗಂಟೆಗೆ ಈ ಘಟನೆ ನಡೆದಿದೆ.

ದ್ವಿಚಕ್ರ ವಾಹನದಲ್ಲಿ ಆಗಮಿಸಿದ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ ವಿಂಡ್ ಶೀಲ್ಡ್ ನ್ನು ಪುಡಿಮಾಡಿದ್ದಾರೆ. ಅಶ್ವತ್ಥ್ ಗೌಡ ಘಟನೆಯಲ್ಲಿ ಪವಾಡ ಸದೃಶ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾರೆ.  ದುಷ್ಕರ್ಮಿಗಳು ದ್ವಿಚಕ್ರವಾಹನದಲ್ಲಿ ಅಶ್ವತ್ಥ್ ಅವರನ್ನು 2 ಕಿ.ಮೀ ವರೆಗೆ ಹಿಂಬಾಲಿಸಿದ್ದಾರೆ. 

ಅಶ್ವಥ್ ಗೌಡ ಚನ್ನರಾಯಪಟ್ಟಣ ಠಾಣೆಗೆ ತೆರಳಿ ನಾಲ್ವರು ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಘಟನೆಯ ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು. 

ಆರೋಪಿಗಳ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ. ಮಾಜಿ ಸಚಿವ ಎಚ್.ಡಿ.ರೇವಣ್ಣ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು. ಹೆಚ್.ಡಿ.ರೇವಣ್ಣ ಅವರ ಆಪ್ತರಲ್ಲಿ ಒಬ್ಬರಾದ ಕೃಷ್ಣೇಗೌಡ ಅವರನ್ನು ಎರಡು ತಿಂಗಳ ಹಿಂದೆ ಕೈಗಾರಿಕಾ ಬೆಳವಣಿಗೆ ಕೇಂದ್ರ ಹಾಸನದಲ್ಲಿ ಕೊಚ್ಚಿ ಕೊಲೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

SCROLL FOR NEXT