ರಾಜ್ಯ

ವರ್ತೂರು ಕೆರೆಯಲ್ಲಿ ಮೀನುಗಳ ಮಾರಣಹೋಮ: ದುರ್ನಾತಕ್ಕೆ ಸ್ಥಳೀಯರು ಕಂಗಾಲು!

Manjula VN

ಬೆಂಗಳೂರು: ಕಲುಷಿತ ನೀರಿನಿಂದಾಗು ವರ್ತೂರು ಕೆರೆಯಲ್ಲಿ ಸಾವಿರಾರು ಮೀನುಗಳು ಸಾವನ್ನಪ್ಪಿದ್ದು, ಪರಿಣಾಮ ಕೆರೆಯ ನೀರಿನಿಂದ ದುರ್ನಾತ ಬರಲು ಆರಂಭವಾಗಿದೆ. ಇದರಿಂದ ಸ್ಥಲೀಯ ನಿವಾಸಿಗಳು ಕಂಗಾಲಾಗಿದ್ದಾರೆ.

ವರ್ತೂರು ನಿವಾಸಿ, ವರ್ತೂರು ರೈಸಿಂಗ್‌ನ ಸದಸ್ಯ ಜಗದೀಶ್‌ ರೆಡ್ಡಿ ಮಾತನಾಡಿ, ಕೆರೆಯಲ್ಲಿ ಮೀನುಗಳು ಸತ್ತು 10 ದಿನಗಳು ಕಳೆಯುತ್ತಿವೆ. ನೀರಿನಲ್ಲಿ ತೇಲುತ್ತಿದ್ದ ಸಾವಿರಾರು ಸತ್ತ ಮೀನುಗಳು ಇದೀಗ ತಳ ಸೇರಿವೆ. ಇದರಿಂದ ಕೆರೆಯ ಸುತ್ತಮುತ್ತಲಿರುವ ಬಳಗೆರೆ, ಸಿದ್ದಾಪುರ, ವರ್ತೂರು ಸುತ್ತಮುತ್ತಲು ದುರ್ವಾಸನೆ ಬರುತ್ತಿದೆ ಎಂದು ಹೇಳಿದ್ದಾರೆ.

ಮಳೆಯಿಂದ ಚರಂಡಿ ನೀರು ಕೆರೆಗೆ ಹರಿದು ಹೋಗುತ್ತಿರುವ ಕುರಿತು ಅಕ್ಟೋಬರ್ 10 ರಂದೇ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಅಕ್ಟೋಬರ್ 17 ರಂದು ಕೆರೆಯಲ್ಲಿ ಸಾವಿರಾರು ಸತ್ತ ಮೀನುಗಳು ತೇಲುತ್ತಿರುವುದು ಕಂಡು ಬಂದಿತ್ತು. ಕೆರ ರಕ್ಷಣೆಯ ಹೊಣೆ ಹೊತ್ತಿರುವ ಬಿಡಿಎ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು ಎಂದು ತಿಳಿಸಿದ್ದಾರೆ.

ಬಿಡಿಎ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಸ್.ಎಸ್.ಅರವಿಂದ್ ಮಾತನಾಡಿ, ಸತ್ತ ಮೀನುಗಳನ್ನು ತೆರವುಗೊಳಿಸಲು ಕಾರ್ಮಿಕರನ್ನು ನಿಯೋಜಿಸಲಾಗಿತ್ತು. ಕೆರೆಯ ನೀರನ್ನು ಹೊರಹಾಕಿ, ದೊಡ್ಡ ಹೊಂಡವನ್ನು ಅಗೆದು ಸತ್ತ ಮೀನುಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಗಿತ್ತು. ಇದೀಗ ತಳಭಾಗದಲ್ಲಿ ಸೇರಿದ್ದ ಸತ್ತ ಮೀನುಗಳಿಂದ ದುರ್ನಾತ ಬರುತ್ತಿರಬಹುದು. ಈ ದುರ್ವಾಸಣೆ ಇನ್ನೂ ಕೆಲ ದಿನಗಳ ಕಾಲ ಇರುತ್ತದೆ ಎಂದು ಹೇಳಿದ್ದಾರೆ.

ಭವಿಷ್ಯದಲ್ಲಿ ಚರಂಡಿ ನೀರು ಕೆರೆಗೆ ಸೇರದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಸ್ತುತ ಎದುರಾಗಿದ್ದ ಸಮಸ್ಯೆಗಳನ್ನು ಸರಿಪಡಿಸಲಾಗಿದೆ. ಇನ್ನೂ ಕೆಲವು ಕಾರ್ಯಗಳು ಬಾಕಿ ಉಳಿದಿದ್ದು, ಅವುಗಳನ್ನೂ ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು. ಮಣ್ಣನ್ನು ಈಗಲೇ ಬಲಪಡಿಸದೇ ಹೋದಲ್ಲಿ ಭಾರೀ ಮಳೆಯಾದಾಗ ಮಣ್ಣಿನ ಸವೆತಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.

SCROLL FOR NEXT