ರಾಜ್ಯ

ಶಕ್ತಿ ಯೋಜನೆ ಎಫೆಕ್ಟ್: ದಸರಾಗೆ ಹರಿದುಬಂದ ಜನ ಸಾಗರ, 10 ಲಕ್ಷ ಜನರಿಂದ ಜಂಬೂ ಸವಾರಿ ವೀಕ್ಷಣೆ

Lingaraj Badiger

ಮೈಸೂರು: ರಾಜ್ಯದಲ್ಲಿ ಭೀಕರ ಬರಗಾಲದ ನಡುವೆಯೇ ವಿಶ್ವವಿಖ್ಯಾತ ಮೈಸೂರು ದಸರಾ ಅದ್ಧೂರಿಯಾಗಿ ನೆರವೇರಿದ್ದು, ಸಾಂಪ್ರದಾಯಿಕ ದಸರಾದ ಗ್ರ್ಯಾಂಡ್ ಫಿನಾಲೆ ಜಂಬೂಸವಾರಿ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧೆಡೆಯಿಂದ ಸುಮಾರು 10 ಲಕ್ಷಕ್ಕೂ ಹೆಚ್ಚು ಮಂದಿ ಆಗಮಿಸಿದ್ದರು.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಡುವ ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ನೆರವಿನಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ರಾಜ್ಯದ 221 ತಾಲ್ಲೂಕುಗಳಲ್ಲಿನ ಬರ ಪರಿಸ್ಥಿತಿಯು ನಾಡಹಬ್ಬದ ಉತ್ಸಾಹವನ್ನು ಕುಗ್ಗಿಸಲಿಲ್ಲ.

ಸುಡುವ ಬಿಸಿಲಿನ ನಡುವೆಯೇ ಬೆಳಗ್ಗೆಯಿಂದಲೇ ಲಕ್ಷಾಂತರ ಜನ ಜಂಬೂ ಸವಾರಿ ಮೆರವಣಿಗೆ ಸಾಗುವ ಹಾದಿಯಲ್ಲಿ ಜಮಾಯಿಸಿದ್ದರು. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು. ಜಂಬೂಸವಾರಿಯಲ್ಲಿ 49 ಸ್ತಬ್ಧಚಿತ್ರಗಳು, ವಿವಿಧ ಕಲಾತಂಡಗಳು ಭಾಗಿಯಾಗಿದ್ದವು. ಮೆರವಣಿಗೆಯು ವಿವಿಧ ಜಿಲ್ಲೆಗಳ ಸಾಂಸ್ಕೃತಿಕ ಪರಂಪರೆ, ಐತಿಹಾಸಿಕ ಉಲ್ಲೇಖಗಳು ಮತ್ತು ಇತರ ಪ್ರಮುಖ ವೈಶಿಷ್ಟ್ಯಗಳನ್ನು ಪ್ರದರ್ಶಿಸಲಾಯಿತು.

ಈ ವೇಳೆ ರಾಜ್ಯ ಸರ್ಕಾರದ ಖಾತ್ರಿ ಯೋಜನೆಗಳನ್ನು ಸಹ ಪ್ರದರ್ಶಿಸಲಾಯಿತು. ಮೈಸೂರಿನ ಪ್ರಮುಖ ಬೀದಿಗಳಲ್ಲಿ ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಮೆರವಣಿಗೆಯಲ್ಲಿ ಸುಮಾರು 3,000 ಕಲಾವಿದರೊಂದಿಗೆ 140 ಸಾಂಸ್ಕೃತಿಕ ತಂಡಗಳು ಬೀದಿಗಳಲ್ಲಿ ಪ್ರದರ್ಶನ ನೀಡಿದವು.

SCROLL FOR NEXT