ರಾಜ್ಯ

ಹುಲಿ ಉಗುರು ಪ್ರಕರಣ: ವರ್ತೂರು ಸಂತೋಷ್​ಗೆ ಜಾಮೀನು ಮಂಜೂರು!

Vishwanath S

ಬೆಂಗಳೂರು: ಹುಲಿ ಉಗುರು ಧರಿಸಿದ್ದ ಪ್ರಕರಣ ಸಂಬಂಧ ಬಂಧನಕ್ಕೀಡಾಗಿದ್ದ 'ಬಿಗ್​ ಬಾಸ್​ ಕನ್ನಡ' ರಿಯಾಲಿಟಿ ಶೋ ಸ್ಪರ್ಧಿ ವರ್ತೂರು ಸಂತೋಷ್​ ಗೆ ಜಾಮೀನು ಮಂಜೂರಾಗಿದೆ. 

ಬೆಂಗಳೂರಿನ 2ನೇ ಎಸಿಜೆಎಂ ನ್ಯಾಯಾಲಯ ಜಾಮೀನು ನೀಡಿದೆ. ನಾಲ್ಕು ಸಾವಿರ ರೂಪಾಯಿ ನಗದು ಭದ್ರತೆ ಅಥವಾ ಒಬ್ಬರ ಶ್ಯೂರಿಟಿ ಒದಗಿಸುವಂತೆ ಷರತ್ತು ಹಾಕಲಾಗಿದೆ. ಇಂದು ಸಂಜೆ ವೇಳೆಗೆ ವರ್ತೂರು ಸಂತೋಷ್ ಬಿಡುಗಡೆ ಆಗುವ ಸಾಧ್ಯತೆ ಇದೆ.

ವರ್ತೂರು ಸಂತೋಷ್​ ಹಳ್ಳಿಕಾರ್​ ತಳಿಯ ಹಸುಗಳ ಸಂರಕ್ಷಣೆ ಮಾಡುವ ಮೂಲಕ ಖ್ಯಾತಿ ಗಳಿಸಿದ್ದರು. ಅದೇ ಆಧಾರದಲ್ಲಿ ಅವರು ಬಿಗ್​ ಬಾಸ್​ಗೆ ಆಯ್ಕೆಯಾಗಿದ್ದರು. ಇನ್ನು ಬಿಗ್ ಬಾಸ್ ಮನೆಯಲ್ಲಿ ಸಂತೋಷ್ ಧರಿಸಿದ್ದ ಹುಲಿ ಉಗುರಿನ ಲಾಕೆಟ್​ ವೈರಲ್ ಆಗಿತ್ತು. ಹೀಗಾಗಿ ಅರಣ್ಯಾಧಿಕಾರಿಗಳು ಅಕ್ಟೋಬರ್ 22ರ ರಾತ್ರಿ ಬಿಗ್​ ಬಾಸ್​ ಮನೆಗೆ ಹೋಗಿ ಅವರನ್ನು ಬಂಧಿಸಿದ್ದರು. ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ವರ್ತೂರ್ ಸಂತೋಷ್ ಪ್ರಕರಣ ಬೆನ್ನಲ್ಲೇ ರಾಜ್ಯಾದ್ಯಂತ ಹುಲಿ ಉಗುರು ಪ್ರಕರಣ ಸದ್ದು ಮಾಡಿತ್ತು. ಹಲವು ಸಿನಿಮಾ ನಟರು, ರಾಜಕೀಯ ನಾಯಕರು ಹುಲಿ ಉಗುರು ಧರಿಸಿರುವ ಫೋಟೋಗಳು ವೈರಲ್ ಆಗಿದ್ದು ಅವರ ಮನೆ ಮೇಲೆ ಅರಣ್ಯಾಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿ ಲಾಕೆಟ್ ಗಳನ್ನು ವಶಕ್ಕೆ ಪಡೆದಿದ್ದಾರೆ.

SCROLL FOR NEXT