ಬೆಂಗಳೂರು: ವನ್ಯಜೀವಿಗಳಿಗೆ ಸಂಬಂಧಿಸಿದ ವಸ್ತುಗಳನ್ನು ಹೊಂದಿರುವವರು ಎರಡು ತಿಂಗಳೊಳಗೆ ಅವುಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು ಎಂದು ಕರ್ನಾಟಕ ಅರಣ್ಯ ಸಚಿವ ಈಶ್ವರ್ ಖಂಡ್ರೆ ಶನಿವಾರ ಹೇಳಿದ್ದಾರೆ.
'ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿ ವರ್ತೂರು ಸಂತೋಷ್ ಅವರ ಬಂಧನಕ್ಕೂ ಮುನ್ನ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಬಗ್ಗೆ ಯಾವುದೇ ಸಾರ್ವಜನಿಕ ಜಾಗೃತಿ ಇರಲಿಲ್ಲ. ಈ ಬೆಳವಣಿಗೆಯ ನಂತರ, ಜನರಿಗೆ ಕಾನೂನಿನ ಬಗ್ಗೆ ತಿಳುವಳಿಕೆ ಬಂದಿದೆ. ಹೀಗಾಗಿ, ಅಂತಹ ವಸ್ತುಗಳನ್ನು ಸರ್ಕಾರಕ್ಕೆ ಒಪ್ಪಿಸಲು ಎರಡು ತಿಂಗಳ ಕಾಲಾವಕಾಶ ನೀಡಲಾಗಿದೆ' ಎಂದು ಹೇಳಿದರು.
ಈ ಅವಧಿ ಮುಗಿದ ನಂತರ ಸರ್ಕಾರ ಈ ಬಗ್ಗೆ ಸುತ್ತೋಲೆ ಹೊರಡಿಸಲಿದೆ. 1972ರಲ್ಲಿ ವನ್ಯಜೀವಿ (ಸಂರಕ್ಷಣಾ) ಕಾಯ್ದೆಯನ್ನು ಜಾರಿಗೆ ತಂದಾಗ, ತಮ್ಮ ಬಳಿಯಲ್ಲಿರುವ ವನ್ಯಜೀವಿ ಸಂಬಂಧಿತ ವಸ್ತುಗಳನ್ನು ಘೋಷಿಸಲು ಮತ್ತು ಕಾನೂನುಬದ್ಧವಾಗಿ ತಮ್ಮ ಬಳಿ ಇಟ್ಟುಕೊಳ್ಳಲು ಜನರಿಗೆ ಅವಕಾಶ ನೀಡಲಾಯಿತು ಎಂದು ಸಚಿವರು ಹೇಳಿದರು.
'ಆದರೆ, ಕಾನೂನನ್ನು 2003 ಮತ್ತು 2022 ರಲ್ಲಿ ತಿದ್ದುಪಡಿ ಮಾಡಲಾಗಿದೆ. ವನ್ಯಜೀವಿ (ಸಂರಕ್ಷಣಾ) ಕಾಯ್ದೆಯ 2022ರ ತಿದ್ದುಪಡಿಯ ಪ್ರಕಾರ, ವನ್ಯಜೀವಿಗಳಿಗೆ ಸಂಬಂಧಿಸಿದ ವಸ್ತುಗಳನ್ನು ಇಟ್ಟುಕೊಳ್ಳುವುದು, ಅವುಗಳನ್ನು ಧರಿಸುವುದು, ಅವುಗಳನ್ನು ಬಳಸುವುದು ಮತ್ತು ಸಂಗ್ರಹಿಸುವುದು ಮತ್ತು ಸಾಗಿಸುವುದು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುತ್ತದೆ' ಎಂದು ಅವರು ಹೇಳಿದರು.
ಇದನ್ನೂ ಓದಿ: ನಕಲಿ ಉಗುರನ್ನೂ ಧರಿಸುವುದು ಬೇಡ.. ಸರ್ಕಾರಕ್ಕೆ ಮರಳಿಸಲು ಕೊನೆಯ ಅವಕಾಶದ ಕಾನೂನು ಬಗ್ಗೆ ಚರ್ಚೆ: ಸಚಿವ ಈಶ್ವರ್ ಖಂಡ್ರೆ
ಬಿಗ್ ಬಾಸ್ ಕನ್ನಡ ಸ್ಪರ್ಧಿ ವರ್ತೂರು ಸಂತೋಷ್ಗೆ ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಜಾಮೀನು ಮಂಜೂರಾಗಿದೆ. ಈ ಹಿಂದೆ ನ್ಯಾಯಾಲಯ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಬೆಳಗಾವಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ನಿವಾಸದಲ್ಲಿ ಶುಕ್ರವಾರ ಅಧಿಕಾರಿಗಳು ಶೋಧ ನಡೆಸಿದರು. ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದಕ್ಕೂ ಮುನ್ನ, ನಟ ಹಾಗೂ ಬಿಜೆಪಿ ರಾಜ್ಯಸಭಾ ಸದಸ್ಯ ಜಗ್ಗೇಶ್, ನಟ ದರ್ಶನ್, ನಟ ಮತ್ತು ರಾಜಕಾರಣಿ ನಿಖಿಲ್ ಕುಮಾರಸ್ವಾಮಿ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮತ್ತು ಇತರರ ಮನೆಗಳಲ್ಲಿ ಶೋಧ ನಡೆಸಲಾಗಿತ್ತು.
ಇದನ್ನೂ ಓದಿ: ಕಾನೂನಿಗೆ ಮೀರಿದವರು ಯಾರೂ ಇಲ್ಲ, ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ: ಈಶ್ವರ್ ಖಂಡ್ರೆ
ಹುಲಿ ಉಗುರಿನ ಪೆಂಡೆಂಟ್ ಹಾಕಿದ್ದ ಆರೋಪದ ಮೇಲೆ ಕಳಸ ಉಪವಿಭಾಗದ ಉಪ ಮೀಸಲು ಅರಣ್ಯಾಧಿಕಾರಿ ದರ್ಶನ್ ಅವರ ವಿರುದ್ಧ ದೂರು ದಾಖಲಾಗಿದ್ದು, ಅವರನ್ನು ಅಮಾನತುಗೊಳಿಸಲಾಗಿದೆ.