ರಾಜ್ಯ

ಬೆಂಗಳೂರು-ಮೈಸೂರು ಹೈ​ವೇನಲ್ಲಿ ಪೊಲೀಸರ ಕ್ರಮ ಯಶಸ್ವಿ: ಅಪಘಾತ, ಸಾವುಗಳ ಸಂಖ್ಯೆಯಲ್ಲಿ ಭಾರಿ ಇಳಿಕೆ!

Ramyashree GN

ಬೆಂಗಳೂರು: ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿ ಹಲವಾರು ಕ್ರಮಗಳನ್ನು ಅಳವಡಿಸಿಕೊಂಡ ನಂತರ, ಸಾವಿನ ಸಂಖ್ಯೆ ಕಡಿಮೆಯಾಗಿದೆ. ಮೇ ತಿಂಗಳಲ್ಲಿ ಸಾವಿನ ಸಂಖ್ಯೆ 29 ಆಗಿತ್ತು, ಇದು ಆಗಸ್ಟ್‌ನಲ್ಲಿ 6ಕ್ಕೆ ಇಳಿದಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್ ಕುಮಾರ್ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, 'ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಭವಿಸುತ್ತಿದ್ದ ಸಾವು-ನೋವುಗಳನ್ನು ಕಡಿಮೆ ಮಾಡಲು ನಮ್ಮ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಸಾವಿನ ಸಂಖ್ಯೆ ಮೇ ತಿಂಗಳಲ್ಲಿ 29, ಜೂನ್‌ನಲ್ಲಿ 28, ಜುಲೈನಲ್ಲಿ 8 ಮತ್ತು ಆಗಸ್ಟ್‌ನಲ್ಲಿ 6ಕ್ಕೆ ಇಳಿದಿದೆ ಎಂದರು.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅನ್ನು ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತವಾಗಿ ಉದ್ಘಾಟಿಸಿದಾಗಿನಿಂದ, ಅಪಘಾತಗಳ ಸಂಖ್ಯೆ ಹೆಚ್ಚಾಯಿತು ಮತ್ತು ಅನೇಕ ಪ್ರಯಾಣಿಕರು ಹೆದ್ದಾರಿಯಲ್ಲಿ ಸಾವಿಗೀಡಾಗಿದ್ದರು. ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದ ಪೊಲೀಸ್ ಅಧಿಕಾರಿಗಳು ಜೂನ್‌ನಲ್ಲಿ ಈ ಯೋಜನೆಯನ್ನು ಪರಿಶೀಲಿಸಿದರು ಮತ್ತು ಅಪಘಾತಗಳನ್ನು ತಡೆಯಲು ಹಲವಾರು ಕ್ರಮಗಳನ್ನು ಕೈಗೊಂಡರು.

ಗಂಟೆಗೆ 100 ಕಿಮೀ ವೇಗವನ್ನು ಮೀರುವವರಿಗೆ ದಂಡ ವಿಧಿಸುವುದು ಮತ್ತು ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು, ಕ್ವಾಡ್ರಿಸೈಕಲ್‌ಗಳು ಮತ್ತು ಕೃಷಿ ವಾಹನಗಳ ಪ್ರವೇಶವನ್ನು ನಿಷೇಧಿಸಿದ್ದು ಪ್ರಮುಖ ಕ್ರಮಗಳಲ್ಲಿ ಒಂದಾಗಿದೆ. ಹೆದ್ದಾರಿಯಲ್ಲಿ ಗರಿಷ್ಠ ವೇಗವು ಕೇವಲ ಗಂಟೆಗೆ 100 ಕಿಮೀ ಮತ್ತು ಇತರರಿಗೆ ಗಂಟೆಗೆ 80 ಕಿಮೀ ಆಗಿತ್ತು. ಆದರೆ, ಗರಿಷ್ಠ ಸಂಖ್ಯೆಯ ಅಪಘಾತಗಳು ಮಿತಿಮೀರಿದ ವೇಗದಿಂದಾಗಿ ಉಂಟಾಗುತ್ತಿದ್ದವು. ವಾಹನಗಳು ಗಂಟೆಗೆ 160 ಕಿಮೀ ವೇಗದಲ್ಲಿ ಚಲಿಸುತ್ತಿದ್ದವು. 

ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತದ ಪ್ರಮಾಣವನ್ನು ಕಡಿಮೆ ಮಾಡಿದ ತಂಡಕ್ಕೆ ಅಲೋಕ್ ಕುಮಾರ್ ಧನ್ಯವಾದ ಅರ್ಪಿಸಿದರು ಮತ್ತು ಇಷ್ಟಕ್ಕೆ ಸಮಾಧಾನ ಪಟ್ಟುಕೊಂಡು ಸುಮ್ಮನೆ ಕೂರುವಂತಿಲ್ಲ ಎಂದು ಹೇಳಿದರು.

SCROLL FOR NEXT