ರಾಜ್ಯ

ದೇಶದ್ಯಾಂತ ಮುಂಗಾರು ಕಣ್ಣಮುಚ್ಚಾಲೆ; ಗಗನಕ್ಕೇರುತ್ತಿದೆ ಅಕ್ಕಿ ಬೆಲೆ: ಸಿದ್ದರಾಮಯ್ಯ ಸರ್ಕಾರದ ಅನ್ನಭಾಗ್ಯಕ್ಕೆ ಕುತ್ತು!

Shilpa D

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷೆ ಗ್ಯಾರಂಟಿಗಳಲ್ಲಿ ಅನ್ನಭಾಗ್ಯ ಯೋಜನೆ ಕೂಡ ಒಂದು. ರಾಜ್ಯದ ಬಿಪಿಎಲ್‌ ಕಾರ್ಡ್‌ದಾರರಿಗೆ ತಲಾ 10 ಕೆಜಿ ಅಕ್ಕಿ ನೀಡುವ ಭರವಸೆಯನ್ನು ಈಡೇರಿಸಲು ಸಿದ್ದರಾಮಯ್ಯ ನೇತೃತ್ವ ಸರ್ಕಾರ ಮುಂದಾಗಿದೆ. ಆದರೆ, ಅನ್ನಭಾಗ್ಯ ಯೋಜನೆ ಜಾರಿಗೆ ಹಲವು ವಿಘ್ನಗಳು ಎದುರಾಗಿವೆ. ಆಹಾರ ಸಂಗ್ರಹಣೆ ತಜ್ಞರು ಪ್ರಮುಖವಾಗಿ ಎರಡು ಗಂಭೀರ ತೊಡಕುಗಳು ಅನ್ನಭಾಗ್ಯ ಯೋಜನೆಗೆ ಎದುರಾಗಿವೆ ಎಂದು ತಿಳಿಸಿದ್ದಾರೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಅಕ್ಕಿ ಬೆಲೆಗಳು ಭಾರೀ ಏರಿಕೆಯಾಗಿದೆ. ಮತ್ತು ಖಾರಿಫ್ ಬೆಳೆ ಇಳುವರಿಯು ಗಣನೀಯ ಮಟ್ಟದಲ್ಲಿ ಕುಸಿಯುತ್ತಿದೆ.  ಪಂಜಾಬ್ ಮತ್ತು ಹರಿಯಾಣದಲ್ಲಿ ಪ್ರವಾಹ ಮತ್ತು ದೇಶದ ಹಲವು ಭಾಗಗಳಲ್ಲಿ ಮಾನ್ಸೂನ್ ವಿಫಲವಾಗಿದ್ದು, ಅಕ್ಕಿ ಪೂರೈಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಈ ಎರಡು ಸಮಸ್ಯೆಗಳ ಜೊತೆ ಮತ್ತೊಂದು ಸಮಸ್ಯೆ ಏನೆಂದರೆ ಭತ್ತವನ್ನು ಹೆಚ್ಚು ಬೆಳೆಯುವ ತೆಲಂಗಾಣ, ಒಡಿಶಾ ಮತ್ತು ಛತ್ತೀಸ್‌ಗಢ ರಾಜ್ಯಗಳು ಪಾರ್ಬಾಯಿಲ್ಡ್‌ ಅಕ್ಕಿಯನ್ನು ಉತ್ಪಾದಿಸುತ್ತವೆ. ಈ ಅಕ್ಕಿ ಕರ್ನಾಟಕಕ್ಕೆ ಸೂಕ್ತವಲ್ಲ. ಈ ವರ್ಷದ ಕೊನೆಯಲ್ಲಿ ನಿರೀಕ್ಷಿತ ಪ್ರಮಾಣದ ಭತ್ತದ ಇಳುವರಿ ಬರುತ್ತದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದ್ದರೂ ಆಹಾರ ಸಂಗ್ರಹಣೆ ತಜ್ಞರು ಭತ್ತದ ಇಳುವರಿ ಕುಂಠಿತಗೊಳ್ಳಬಹುದು ಎಂದು ಹೇಳುತ್ತಿದ್ದಾರೆ. ಭಾರತೀಯ ಆಹಾರ ನಿಗಮದ ಮಾಜಿ ಅಧ್ಯಕ್ಷ ಡಿವಿ ಪ್ರಸಾದ್‌ ಅವರು, ಈ ವರ್ಷ ಗೋಧಿಯ ಉತ್ಪಾದನೆ ಕೂಡ ಕುಂಠಿತಗೊಳ್ಳುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಗೋಧಿ ಇಳುವರಿ ಭಾಗಶಃ 8 ರಿಂದ 10 ಮಿಲಿಯನ್‌ ಟನ್‌ಗಳಷ್ಟು ಕುಂಠಿತಗೊಳ್ಳಲಿದೆ ಎಂದು ಹೇಳಿದ್ದಾರೆ.

ಅನಿಯಮಿತ ಮಳೆಯಿಂದ ಸಮಸ್ಯೆ ಆಗಿದೆ. ಕರ್ನಾಟಕದಂತೆ, ಭಾರತದಾದ್ಯಂತ ಮುಂಗಾರು ಮಳೆ ಸಮಸ್ಯೆ ಉಂಟಾಗಿದೆ, ಹೀಗಾಗಿ ಅಕ್ಕಿ ಉತ್ಪಾದನೆಯು ಹಿಂದಿನ ವರ್ಷಗಳ ವಾರ್ಷಿಕ ಸರಾಸರಿಗಿಂತ ಕಡಿಮೆಯಿರುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದರಿಂದ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ. ಭತ್ತವು ಪ್ರಾಥಮಿಕವಾಗಿ ಖಾರಿಫ್ ಬೆಳೆ ಮತ್ತು ಮಳೆಯ ಮೇಲೆ ಅವಲಂಬಿತವಾಗಿದೆ. ಕಡಿಮೆ ಉತ್ಪಾದನೆ ಎಂದರೆ ಬೆಲೆ ಏರುತ್ತದೆ. ಇದು ಕರ್ನಾಟಕದ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ ಎಂದು ಅವರು ಹೇಳಿದರು.

ಕರ್ನಾಟಕವು ದೇಶೀಯ ಅಥವಾ ಅಂತರಾಷ್ಟ್ರೀಯ ಮಾರುಕಟ್ಟೆಯಿಂದ ಖರೀದಿಸುವುದನ್ನು ಆಯ್ಕೆ ಮಾಡಬೇಕಾಗುತ್ತದೆ , ಆದರೆ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಇದು ಕೂಡ ಸಮಸ್ಯೆ ತಂದೊಡ್ಡುತ್ತಿದೆ.

ಕಾಂಗ್ರೆಸ್ ಸರ್ಕಾರವು ಅಕ್ಕಿಯನ್ನು ಸಂಗ್ರಹಿಸಲು ಮೂಲಗಳನ್ನು ಹುಡುಕುತ್ತಿದೆ ಎಂದು ತಜ್ಞರು ಹೇಳುತ್ತಾರೆ . ಸಂಗ್ರಹಣೆ ಸಮಸ್ಯೆಯನ್ನು ಪರಿಹರಿಸುವಲ್ಲಿ ಗಂಭೀರ ಅಡೆತಡೆಗಳು ಮತ್ತು ನಿರ್ಬಂಧಗಳಿವೆ. ಅಕ್ಕಿಯ ಲಭ್ಯತೆಯು ಸಮಸ್ಯೆಯಾಗದಿದ್ದರೂ, ವೆಚ್ಚವು ಎಫ್‌ಸಿಐ ಬೆಲೆಗಿಂತ ಗಣನೀಯವಾಗಿ ಹೆಚ್ಚಾಗಿರುತ್ತದೆ. ಹೀಗಾಗಿ  ಹಣಕಾಸಿನ ಸವಾಲು ಎದುರಾಗಲಿದೆ.

ನಗದು ವರ್ಗಾವಣೆ ಯೋಜನೆ:

ರಾಜ್ಯ ಸರ್ಕಾರವು ಅಕ್ಕಿ ಪೂರೈಕೆಗೆ ಬದಲಾಗಿ ನಗದು ವರ್ಗಾವಣೆ ಯೋಜನೆಯನ್ನು ಈಗಾಗಲೇ ಪರಿಚಯಿಸಿದೆ.   ಇದನ್ನು ಮುಂದುವರಿಸುವ ಅಥವಾ ಅಕ್ಕಿ ಬದಲು, ರಾಗಿ ಅಥವಾ ಜೋಳ ನೀಡುವ ಆಯ್ಕೆ ಹೊಂದಿದೆ.

ಆದರೆ ರಾಜ್ಯ ಸರ್ಕಾರ ಈ ಸವಾಲಿಗೆ ಎದೆಗುಂದಲಿಲ್ಲ. ನಾವು ನಮ್ಮ ಭರವಸೆಯನ್ನು ಉಳಿಸಿಕೊಳ್ಳುತ್ತೇವೆ, ನಮಗೆ ಒಂದು ವಾರದ ಸಮಯ ನೀಡಿ, ನಾವು ಅಕ್ಕಿ ಖರೀದಿಸಿ ಅದನ್ನು ತಲುಪಿಸುತ್ತೇವೆ ಎಂದು ಸಚಿನ ಕೆ.ಎಚ್ ಮುನಿಯಪ್ಪ ಹೇಳಿದ್ದಾರೆ.

ಎಲ್ಲ ಬಗೆಯ ಅಕ್ಕಿಗಳ ಬೆಲೆಯಲ್ಲಿ ಶೇ.20ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಇಡ್ಲಿ-ದೋಸೆ ಅಕ್ಕಿ ಕೆಜಿಗೆ 30 ರೂ. ಇತ್ತು. ಈಗ ಸಗಟು ದರದಲ್ಲಿ ಕೆಜಿಗೆ 40 ರೂ. ಆಗಿದೆ. ಕಳೆದ ವರ್ಷ ಸೋನಾ ಮಸೂರಿ 40 ರೂ. ಮತ್ತು ಈಗ 54 ರೂ ಆಗಿದೆ ಎಂದು ಎಫ್‌ಕೆಸಿಸಿಐನ ರಮೇಶ್ ಚಂದ್ರ ಲಹೋಟಿ ಹೇಳಿದ್ದಾರೆ.

SCROLL FOR NEXT