ರಾಜ್ಯ

ನಿಜಗುಣಾನಂದ ಸ್ವಾಮೀಜಿಗೆ ಜೀವ ಬೆದರಿಕೆ: ಕ್ರಮ ಕೈಗೊಳ್ಳುವ ಭರವಸೆ ನೀಡಿದ ಸತೀಶ್ ಜಾರಕಿಹೊಳಿ

Shilpa D

ಬೆಳಗಾವಿ :ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಅವರಿಗೆ ಜೀವ ಬೆದರಿಕೆ ಪತ್ರ ಬಂದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರುತ್ತೇನೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಬೈಲೂರು ನಿಷ್ಕಲ ಮಂಟಪಕ್ಕೆ ಬುಧವಾರ ಭೇಟಿ ನೀಡಿ, ಶ್ರೀಗಳೊಂದಿಗೆ ಚರ್ಚಿಸಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

‘ಸಮಾಜ ಪರಿವರ್ತನೆ ಮಾಡುವವರಿಗೆ, ಪ್ರಗತಿಪರ ಚಿಂತಕರಿಗೆ ಜೀವ ಬೆದರಿಕೆಗಳು ಬರುತ್ತಲೇ ಇವೆ. ಆದರೆ, ನನಗೆ ಮಾತ್ರ ಯಾವುದೇ ಜೀವ ಬೆದರಿಕೆ ಬಂದಿಲ್ಲ. ಜೀವ ಬೆದರಿಕೆಗಳು ಬಂದಾಗ ಸರ್ಕಾರ ತನ್ನ ಕರ್ತವ್ಯ ಮಾಡಲಿದೆ’ ಎಂದರು.

‘ಸಮಾಜದಲ್ಲಿ ತಿದ್ದುವಂಥ ಕೆಲಸ ಮಾಡುವವರಿಗೆ ಈ ರೀತಿಯ ಪರಿಸ್ಥಿತಿ ಎದುರಾಗುವುದು ಸಹಜವಾಗಿದೆ. ನಾವು ಜಾಗೃತರಾಗಬೇಕು. ಹೋರಾಟ ಮುಂದುವರಿಸಬೇಕು. ನಿಜಗುಣಾನಂದ ಸ್ವಾಮೀಜಿ ಬಸವ ತತ್ವಗಳನ್ನು ಮನೆ, ಮನೆಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ನಾವು  ಕೂಡ ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವಗಳನ್ನು ಮನೆ, ಮನೆಗೆ ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ. ಅವರ ಹೋರಾಟ, ನಮ್ಮ ಹೋರಾಟ ಒಂದೇ ಆಗಿದೆ. ಆದ್ದರಿಂದ ನಾನು ಪದೇಪದೇ ಶ್ರೀಗಳನ್ನು‌ ಭೇಟಿ ಆಗುತ್ತೇನೆ’ ಎಂದು ಸಚಿವ ಹೇಳಿದರು.

ರಚನಾತ್ಮಕ ಮತ್ತು ಪ್ರಗತಿಪರ ಕಾರ್ಯಗಳಲ್ಲಿ ತೊಡಗಿರುವ ಜನರು ಇಂತಹ ಸಂದರ್ಭಗಳಿಗೆ ವಿಚಲಿತರಾಗದೆ ತಮ್ಮ ಪ್ರಯತ್ನವನ್ನು ಮುಂದುವರೆಸಬೇಕು ಎಂದ ಅವರು, ಬಸವಣ್ಣನವರ ವಿಚಾರಧಾರೆಗಳು ಮತ್ತು ಕಾರ್ಯಗಳು ಮನೆಮನೆಗೆ ತಲುಪಲು ನಿಷ್ಕಲಮಂಟಪ ಸ್ವಾಮೀಜಿ ಶ್ರಮಿಸುತ್ತಿದ್ದಾರೆ.

SCROLL FOR NEXT