ರಾಜ್ಯ

ಬೆಂಗಳೂರು: 21 ವರ್ಷದ ಯುವಕನನ್ನು ಕತ್ತು ಸೀಳಿ ಕೊಲೆ ಮಾಡಿದ್ದ ಮೂವರು ಪೊಲೀಸರ ಮುಂದೆ ಶರಣು

Ramyashree GN

ಬೆಂಗಳೂರು: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ 21 ವರ್ಷದ ಯುವಕನ ಕತ್ತು ಸೀಳಿ ಕೊಲೆ ಮಾಡಿದ್ದ ಮೂವರು ಆರೋಪಿಗಳು ಸೋಮವಾರ ಸಂಪಿಗೆಹಳ್ಳಿ ಪೊಲೀಸರ ಮುಂದೆ ಶರಣಾಗಿದ್ದಾರೆ. 

ಮೃತನನ್ನು ಆರ್‌ಕೆ ಹೆಗಡೆ ನಗರದ ವೆಲ್ಡರ್ ಕೆಲಸ ಮಾಡುತ್ತಿದ್ದ ಫಾರೂಕ್ ಖಾನ್ ಎಂದು ಗುರುತಿಸಲಾಗಿದೆ. ಆರೋಪಿಗಳಾದ ಸುಹೇಲ್, ಮುಬಾರಕ್ ಮತ್ತು ಅಲಿ ಅಕ್ರಂ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಾದ ಮೂವರು ಮತ್ತು ಮೃತರು ಸ್ನೇಹಿತರಾಗಿದ್ದು, ಆರೋಪಿಗಳು ಭಾನುವಾರ ಮಧ್ಯಾಹ್ನ ಖಾನ್ ಮನೆಗೆ ತೆರಳಿ ನವಾಜ್ ಎಂಬುವರಿಗೆ ಸೇರಿದ ಆಟೋರಿಕ್ಷಾದಲ್ಲಿ ಆತನನ್ನು ಕರೆದೊಯ್ದಿದ್ದಾರೆ. ಅಂದಿನಿಂದ ಖಾನ್ ಮನೆಗೆ ಹಿಂತಿರುಗಿರಲಿಲ್ಲ. ಹೀಗಾಗಿ ಆತನ ಸಹೋದರ ಶಬ್ಬೀರ್ ಅಹಮದ್ ಖಾನ್ ಸೋಮವಾರ ಬೆಳಗ್ಗೆ ದೂರು ದಾಖಲಿಸಲು ಸಂಪಿಗೆಹಳ್ಳಿ ಠಾಣೆಗೆ ತೆರಳಿದ್ದರು. ಅಷ್ಟೊತ್ತಿಗಾಗಲೇ ಆರೋಪಿಗಳು ಪೊಲೀಸ್ ಠಾಣೆಗೆ ಬಂದು ಶರಣಾಗಲು ಮುಂದಾಗಿದ್ದು, ತಾವೇ ಖಾನ್ ನನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಖಾನ್ ಆರೋಪಿಗಳನ್ನು ನಿಂದಿಸಿದ್ದರು ಮತ್ತು ಅವರು ಮಾದಕ ವ್ಯಸನಿಗಳೆಂದು ಅವರ ಇತರ ಸ್ನೇಹಿತರಿಗೆ ತಿಳಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.

'ಇದರಿಂದ ಕೋಪಗೊಂಡಿದ್ದ ಆರೋಪಿಗಳು ಖಾನ್ ಅವರನ್ನು ರಿಕ್ಷಾದಲ್ಲಿ ಅರ್ಕಾವತಿ ಲೇಔಟ್‌ಗೆ ಕರೆದೊಯ್ದಿದ್ದರು. ಅಲ್ಲಿ ಇದೇ ವಿಷಯಕ್ಕೆ ಅವರ ನಡುವೆ ವಾಗ್ವಾದ ನಡೆದಿದ್ದು, ನಂತರ ಆರೋಪಿಗಳು ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದಾರೆ. ಆರೋಪಿಗಳು ಶವವನ್ನು ಚರಂಡಿಗೆ ಎಸೆದಿದ್ದರು' ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT