ರಾಜ್ಯ

ಮಹಾನಗರಗಳಲ್ಲಿ ಹೊಸ ಇಂಜಿನಿಯರಿಂಗ್ ಕಾಲೇಜುಗಳನ್ನು ನಿಷೇಧಿಸಿ: ಎಐಸಿಟಿಇಗೆ ಸುಧಾಕರ್ ಪತ್ರ

Lingaraj Badiger

ಬೆಂಗಳೂರು: ರಾಜ್ಯದಲ್ಲಿ ಇಂಜಿನಿಯರಿಂಗ್ ಕಾಲೇಜುಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿದ್ದು, ಮಹಾನಗರಗಳಲ್ಲಿ ಮೂರು ವರ್ಷಗಳ ಕಾಲ ಹೊಸ ಇಂಜಿನಿಯರಿಂಗ್ ಕಾಲೇಜುಗಳನ್ನು ನಿಷೇಧಿಸುವ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(ಎಐಸಿಟಿಇ) ಅಧ್ಯಕ್ಷರಿಗೆ ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್ ಅವರು ಪತ್ರ ಬರೆದಿದ್ದಾರೆ.

ಇಂಜಿನಿಯರಿಂಗ್ ಕಾಲೇಜುಗಳ ಅನುಮತಿಗೆ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸುವಂತೆ ಹಾಗೂ ಖಾಸಗಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಸಂಸ್ಥೆಗಳ ಬೆಳವಣಿಗೆಯನ್ನು ನಿಯಂತ್ರಿಸುವಂತೆ ಉನ್ನತ ಶಿಕ್ಷಣ ಸಚಿವರು ಎಐಸಿಟಿಇ ಮನವಿ ಮಾಡಿದ್ದಾರೆ.

2ನೇ ಹಾಗೂ 3ನೇ ಹಂತದ ನಗರಗಳಲ್ಲಿ ತಾಂತ್ರಿಕ ಶಿಕ್ಷಣ ನೀಡುತ್ತಿರುವ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಬಹುತೇಕ ಅಧ್ಯಾಪಕರು ಕಾಲೇಜು ತೊರೆಯುತ್ತಿದ್ದಾರೆ ಮತ್ತು ಗ್ರಾಮೀಣ ವ್ಯಾಪ್ತಿಯ ಕಾಲೇಜುಗಳು ಬಾಗಿಲು ಮುಚ್ಚುತ್ತಿವೆ. ವಿಶೇಷವಾಗಿ ರಾಜ್ಯದ ಖಾಸಗಿ ವಿಶ್ವವಿದ್ಯಾಲಯಗಳು ಐಟಿ-ಸಂಬಂಧಿತ ಕೋರ್ಸ್‌ಗಳಲ್ಲಿ ಗಣನೀಯವಾಗಿ ಸೀಟು ಹೆಚ್ಚಳ ಮಾಡಿವೆ. ಇದರಿಂದ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಇದನ್ನು ನಿಯಂತ್ರಿಸಬೇಕು ಎಂದು AICTEಗೆ ಸುಧಾಕರ್ ಅವರು ಕೇಳಿಕೊಂಡಿದ್ದಾರೆ.

ಇದೇ ಪರಿಸ್ಥಿತಿ ಮುಂದುವರಿದರೆ, ಕ್ರಮೇಣ ಗ್ರಾಮೀಣ ಪ್ರದೇಶದ ಎಲ್ಲಾ ಉತ್ತಮ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು ಉಳಿಯುವುದಿಲ್ಲ. ಇದು ಮಹಾನಗರಗಳ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.

ಇನ್ನು ಸಚಿವರ ಪತ್ರಕ್ಕೆ ಉತ್ತರ ನೀಡಿರುವ ಎಐಸಿಟಿಇ ಅಧ್ಯಕ್ಷ ಟಿಜಿ ಸೀತಾರಾಮ್ ಅವರು, ಇಂಜಿನಿಯರಿಂಗ್ ಕೋರ್ಸ್‌ಗಳನ್ನು ನೀಡುತ್ತಿರುವ ರಾಜ್ಯದ ಖಾಸಗಿ ವಿಶ್ವವಿದ್ಯಾಲಯಗಳು ಎಐಸಿಟಿಇ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ್ದಾರೆ.

"ಕೌನ್ಸಿಲ್, ಖಾಸಗಿ ಇಂಜಿನಿಯರಿಂಗ್ ಕಾಲೇಜ್ ಗಳ ಮೇಲೆ ನಿಯಂತ್ರಣಗಳನ್ನು ಚಲಾಯಿಸಲು ಸಾಧ್ಯವಿಲ್ಲ. AICTE ತನ್ನ ಅನುಮೋದಿತ ಸಂಸ್ಥೆಗಳಿಗೆ ಕೋರ್ ಇಂಜಿನಿಯರಿಂಗ್ ಅಡಿಯಲ್ಲಿ ಕೋರ್ಸ್‌ಗಳನ್ನು ಬಂದ್ ಮಾಡಲು ಅಥವಾ ಕೋರ್ಸ್‌ಗಳನ್ನು ಪ್ರಾರಂಭಿಸಲು ಅನುಮತಿ ನೀಡುತ್ತಿಲ್ಲ” ಎಂದು ಅವರು ತಿಳಿಸಿದ್ದಾರೆ.

SCROLL FOR NEXT