ರಾಜ್ಯ

ವಿಶ್ವ ಹೃದಯ ದಿನ: ಸ್ವಸ್ಥ ಹೃದಯ ಆರೋಗ್ಯಯುತ ಬದುಕಿನ ಕೀಲಿಕೈ- ಸಿಎಂ ಸಿದ್ದರಾಮಯ್ಯ

Nagaraja AB

ಬೆಂಗಳೂರು: ಇಂದು ವಿಶ್ವ ಹೃದಯ ದಿನ. ಹಠಾತ್ ಹೃದಯಾಘಾತದಿಂದ ಸಂಭವಿಸುತ್ತಿರುವ ಸಾವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳು, ಆಹಾರ ಪದ್ಧತಿ, ಆರೋಗ್ಯಕರ ಜೀವನ ನಿರ್ವಹಣೆ ಸೇರಿದಂತೆ ಇನ್ನಿತರೆ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಈ ದಿನ ಅರಿವು ಮೂಡಿಸಲಾಗುತ್ತಿದೆ. 

ಜಗತ್ತಿನಲ್ಲಿ 18 ಲಕ್ಷಕ್ಕೂ ಅಧಿಕ ಮಂದಿ ಪ್ರತಿವರ್ಷ ಹೃದಯ ಸಂಬಂಧೀ ಸಮಸ್ಯೆಗಳಿಂದ ಸಾವನ್ನಪ್ಪುತ್ತಿದ್ದಾರೆ ಎಂಬುದು ಕಳವಳಕಾರಿ ಸಂಗತಿಯಾಗಿದ್ದು, ಹೃದ್ರೋಗ ಹಾಗೂ ಹೃದಯ ರಕ್ತನಾಳಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವ ಹಾಗೂ ಹೃದಯದ ಆರೋಗ್ಯದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಪ್ರತಿವರ್ಷ ಸೆಪ್ಟೆಂಬರ್‌ 29 ರಂದು ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ. 

1978ರಲ್ಲಿ ವರ್ಲ್ಡ್ ಹಾರ್ಟ್ ಫೆಡರೇಶನ್ ಸ್ಥಾಪನೆಯಾಯಿತು. ಇದರ ವಾರ್ಷಿಕೋತ್ಸವದ ಅಂಗವಾಗಿ ಸೆಪ್ಟೆಂಬರ್ 29ರಂದು ವಿಶ್ವ ಹೃದಯ ದಿನವನ್ನು ಆರಂಭಿಸಲಾಗಿತ್ತು. 1999ರಲ್ಲಿ ಮೊದಲ ವಿಶ್ವ ಹೃದಯ ದಿನವನ್ನು ಆಚರಿಸಲಾಯಿತು. ಡಬ್ಲ್ಯೂಎಚ್‌ಎಫ್ ಪ್ರಕಾರ ವಿಶ್ವಾದ್ಯಂತ ಈ ಕಾಯಿಲೆಯಿಂದ 20.5 ಮಿಲಿಯನ್‌ಗಿಂತಲೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಹೃದ್ರೋಗ ಎಂಬುದು ಈಗೀಗ ಸಾಮಾನ್ಯವಾಗುತ್ತಿದೆ. ಹೀಗಾಗಿ ಹೃದಯದ ಕಾಳಜಿ ವಹಿಸುವುದು ಬಹಳ ಅಗತ್ಯ. ಇದೇ ಸಲುವಾಗಿ ವಿಶ್ವ ಹೃದಯ ದಿನ ಆಚರಿಸಲಾಗುತ್ತದೆ.

ವಿಶ್ವ ಹೃದಯ ದಿನದ ಅಂಗವಾಗಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ವಸ್ಥ ಹೃದಯ ಆರೋಗ್ಯಯುತ ಬದುಕಿನ ಕೀಲಿಕೈ. ಆರೋಗ್ಯಕ್ಕೆ ಪುಷ್ಟಿ ನೀಡುವಂತಹ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಿ, ಮಾನಸಿಕ ಮತ್ತು ದೈಹಿಕ ಒತ್ತಡಗಳ ನಿಯಂತ್ರಣಕ್ಕಾಗಿ ಇರುವ ಸರಳ ಮಾರ್ಗಗಳನ್ನು ಅನುಸರಿಸಿ, ನಿಯಮಿತವಾಗಿ ಹೃದಯ ತಪಾಸಣೆ ಮಾಡಿಸಿ. ನೀವು ನಿಮ್ಮ ಹೃದಯದ ಕಾಳಜಿ ವಹಿಸಿದರೆ, ಹೃದಯ ನಿಮ್ಮ ದೇಹದ ಕಾಳಜಿ ವಹಿಸುತ್ತದೆ. ಮರೆಯದಿರಿ, ಹೃದಯ ಹಗುರಾಗಿದ್ದರೆ ಬದುಕು ಸುಂದರ ಎಂದಿದ್ದಾರೆ.

SCROLL FOR NEXT