ರಾಜ್ಯ

ಹೂಡಿಕೆ ನೆಪದಲ್ಲಿ 854 ಕೋಟಿ ರೂ. ಮೊತ್ತದ ಸೈಬರ್ ವಂಚನೆ ಕೇಸ್, ಆರು ಮಂದಿ ಬಂಧನ

Nagaraja AB

ಬೆಂಗಳೂರು: ನಗರದ ಪೊಲೀಸರು 854 ಕೋಟಿ ರೂಪಾಯಿ ಮೊತ್ತದ ಸೈಬರ್ ವಂಚನೆ ಹಗರಣವನ್ನು ಭೇದಿಸಿದ್ದಾರೆ ಮತ್ತು ಹೂಡಿಕೆ ಯೋಜನೆಯ ನೆಪದಲ್ಲಿ ಭಾರತದಾದ್ಯಂತ ಸಾವಿರಾರು ಸಂತ್ರಸ್ತರಿಗೆ ವಂಚಿಸಿದ ಆರು ಜನರನ್ನು ಬಂಧಿಸಿದ್ದಾರೆ. ವಂಚಿಸಿದ ಒಟ್ಟು ಮೊತ್ತದಲ್ಲಿ ಐದು ಕೋಟಿ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಆರೋಪಿ ತಂಡವು ವಾಟ್ಸಾಪ್ ಮತ್ತು ಟೆಲಿಗ್ರಾಂ ಮೂಲಕ ಸಂತ್ರಸ್ತರಿಗೆ ಆಮಿಷವೊಡ್ಡಿತ್ತು. ಆರಂಭದಲ್ಲಿ, ಅವರು ದಿನಕ್ಕೆ 1,000 ರಿಂದ 5,000 ರೂಪಾಯಿಗಳನ್ನು ಲಾಭವಾಗಿ ಗಳಿಸುತ್ತಾರೆ ಎಂಬ ನೆಪದಲ್ಲಿ 1,000 ರಿಂದ 10,000 ರವರೆಗೆ ಸಣ್ಣ ಮೊತ್ತವನ್ನು ಹೂಡಿಕೆ ಮಾಡಲು ಹೇಳಲಾಗಿತ್ತು. ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾವಿರಾರು ಸಂತ್ರಸ್ತರು ಒಂದು ಲಕ್ಷದಿಂದ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿದ್ದಾರೆ. ಸಂತ್ರಸ್ತರು ಹೂಡಿಕೆ ಮಾಡಿದ ಹಣವನ್ನು ಆನ್‌ಲೈನ್ ಪಾವತಿಗಳ ಮೂಲಕ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಳ್ಳಲಾಗಿದೆ. ಆದಾಗ್ಯೂ, ಹೂಡಿಕೆ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ, ಸಂತ್ರಸ್ತರು ಮೊತ್ತವನ್ನು ಹಿಂಪಡೆಯಲು ಪ್ರಯತ್ನಿಸಿದಾಗ, ಅವರು ಯಾವುದೇ ಮರುಪಾವತಿಯನ್ನು ಪಡೆಯಲಿಲ್ಲ ಎಂದು ಅವರು ಹೇಳಿದರು.

ಮೊತ್ತವನ್ನು ಸಂಗ್ರಹಿಸಿದ ನಂತರ, ಆರೋಪಿಗಳು ಕ್ರೋಢೀಕೃತ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಕ್ರಿಪ್ಟೋ (ಬಿನಾನ್ಸ್), ಗೇಟ್‌ವೇ, ಗೇಮಿಂಗ್ ಆ್ಯಪ್ ಮೂಲಕ ಒಟ್ಟು 854 ಕೋಟಿ ರೂಪಾಯಿಗಳನ್ನು ವಿವಿಧ ಆನ್‌ಲೈನ್ ಪಾವತಿ ವಿಧಾನಗಳಲ್ಲಿ  ವಂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

SCROLL FOR NEXT