ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ
ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ 
ರಾಜ್ಯ

ಸಚಿವೆ ಹೆಬ್ಬಾಳ್ಕರ್ ವಿರುದ್ಧ ವಿವಾದಾತ್ಮಕ ಹೇಳಿಕೆ: ಸಂಜಯ್ ಪಾಟೀಲ್ ನಿವಾಸದ ಎದುರು ಕಾಂಗ್ರೆಸ್‌ ಪ್ರತಿಭಟನೆ

Manjula VN

ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರು ಬೆಳಗಾವಿಯಲ್ಲಿ ಭಾನುವಾರ ಪ್ರತಿಭಟನೆ ನಡೆಸಿದ್ದು, ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.

ಬೆಳಗಾವಿಯ ಆದರ್ಶ ನಗರದಲ್ಲಿರುವ ಸಂಜಯ್ ಪಾಟೀಲ್ ನಿವಾಸದ ಎದುರು ಕೆಪಿಸಿಸಿ ಸದಸ್ಯೆ ಆಯಿಷಾ ಸನದಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಸಂಜಯ್ ಅವರ ಭಾವಚಿತ್ರಕ್ಕೆ ಹೂವಿನ ಹಾರ, ಬಳೆ ಇಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಶನಿವಾರ ಮಾತನಾಡಿದ್ದ ಸಂಜಯ್ ಪಾಟೀಲ್ ಅವರು, ಬಿಜೆಪಿಗೆ ಹೆಚ್ಚುತ್ತಿರುವ ಮಹಿಳೆಯರ ಬೆಂಬಲವನ್ನು ಕಂಡು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ನಿದ್ರೆ ಬರುತ್ತಿಲ್ಲ. ಉತ್ತಮ ನಿದ್ರೆಗೆ ಒಂದು ಪೆಕ್ ಎಕ್ಸ್'ಟ್ರಾ ಹಾಕಬೇಕಾಗುತ್ತದೆ ಎಂದು ಹೇಳಿದ್ದರು. ಈ ಹೇಳಿಕೆಯ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ತೀವ್ರವಾಗಿ ಕಿಡಿಕಾರಿದ್ದರು. ಇದು ಕೊಳಕು ಹೇಳಿಕೆಯಷ್ಟೇ ಅಲ್ಲ, ಮಹಿಳೆಯರಿಗೆ ತೋರಿದ ಅಗೌರವವಾಗಿದೆ. ಮಹಿಳೆಯರನ್ನು ಗೌರವಿಸುವುದರಲ್ಲಿ ನಿಜವಾದ ಹಿಂದೂ ಸಂಸ್ಕೃತಿ ಅಡಗಿದೆ, ಆದರೆ ಪಾಟೀಲ್ ಬಿಜೆಪಿಯ ನಿಜವಾದ ಸಂಸ್ಕೃತಿಯನ್ನು ತೋರಿಸಿದ್ದಾರೆ ಎಂದು ಹೇಳಿದ್ದರು.

ಸಂಜಯ್ ಅವರ ಹೇಳಿಕೆಯನ್ನು ಕಾಂಗ್ರೆಸ್‌ ಕಾರ್ಯಕರ್ತರು ಖಂಡಿಸಿದ್ದು, ಸಂಜಯ್ ಪಾಟೀಲ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರತಿಭಟನೆಯ ವಿಡಿಯೋ ಮಾಡುತ್ತಿದ್ದ ಸಂಜಯ್ ಅವರ ಕಾರು ಚಾಲಕನನ್ನು ಪ್ರತಿಭಟನಾಕಾರರು ಇದೇ ವೇಳ ತರಾಟೆಗೆ ತೆಗೆದುಕೊಂಡಿದರು.

ಪ್ರತಿಭಟನೆ ಹಿನ್ನೆಲೆ, ಸಂಜಯ್ ನಿವಾಸ ಬಳಿ ಪೊಲೀಸ್‌ ಭದ್ರತೆ ನಿಯೋಜಿಸಲಾಗಿತ್ತು. ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್ ತೆರಳಿ, ಪ್ರತಿಭಟನಾಕಾರರ ಮನವೊಲಿಸಲು ಯತ್ನನಿಸಿದರು. ಆದರೆ, ಸಂಜಯ್ ಕ್ಷಮೆಯಾಚಿಸಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಪಟ್ಟು ಹಿಡಿದಿದ್ದರು.

ಬಳಿಕ ಪಾಟೀಲ್ ಅವರು ಗಂಡಸಾಗಿದ್ದರೆ ಮನೆಯಿಂದ ಹೊರಗೆ ಬರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಬಳಿಕ ಪೊಲೀಸರು ಮನವೊಲಿಸುವಲ್ಲಿ ಸಫಲರಾದರು. ಪೊಲೀಸರ ಮನವಿ ಮೇರೆಗೆ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.

SCROLL FOR NEXT