ಗೋಳಗುಮ್ಮಟ
ಗೋಳಗುಮ್ಮಟ 
ರಾಜ್ಯ

ವಿಜಯಪುರ: ಐತಿಹಾಸಿಕ ಸ್ಮಾರಕಕ್ಕಿಲ್ಲ 'ಲೈಟ್ನಿಂಗ್‌ ಅರೆಸ್ಟರ್‌ ವ್ಯವಸ್ಥೆ'; ಸಿಡಿಲು ಬಡಿದು ಮೆಹತರ್‌ ಮಹಲ್‌ ಮಿನಾರ್‌ಗೆ ಹಾನಿ!

Manjula VN

ವಿಜಯಪುರ: ಇಲ್ಲಿನ ಜುಮ್ಮಾ ಮಸೀದಿ ರಸ್ತೆಯಲ್ಲಿರುವ ಆದಿಲ್‌ ಶಾಹಿ ಅರಸರ ಕಾಲದ ಐತಿಹಾಸಿಕ ಸ್ಮಾರಕ ಮೆಹತರ್‌ ಮಹಲ್‌ಗೆ ಗುರುವಾರ ಸಂಜೆ ಸಿಡಿಲು ಬಡಿದು, ಮಿನಾರ್‌ನ ಗೋಪುರಕ್ಕೆ ಹಾನಿಯಾಗಿದ್ದು, ಈ ಘಟನೆಯ ಬೆನ್ನಲ್ಲೇ ವಿಜಯಪುರದ ಯಾವುದೇ ಪುರಾತನ ಸ್ಮಾರಕಗಳಲ್ಲಿ ಲೈಟ್ನಿಂಗ್‌ ಅರೆಸ್ಟರ್‌ ವ್ಯವಸ್ಥೆ ಇಲ್ಲದಿರುವುದು, ಕಾರ್ಯನಿರ್ವಹದೇ ಇರುವ ಮಾಹಿತಿ ಬೆಳಕಿಗೆ ಬಂದಿದೆ.

ಸಿಡಿಲಿನ ಬಡಿತಕ್ಕೆ ಗೋಪುರಕ್ಕೆ ಅಷ್ಟೇ ಅಲ್ಲದೆ, ಮಹಲ್‌ ಎದುರು ರಸ್ತೆಯಲ್ಲಿ ನಿಲ್ಲಿಸಿದ್ದ ಒಂದು ಕಾರು, ಎರಡು ಬೈಕುಗಳೂ ಕೂಡ ಜಖಂಗೊಂಡಿದೆ. ಈ ಸಂದರ್ಭದಲ್ಲಿ ಸ್ಥಳದಲ್ಲಿ ಯಾರೂ ಇರದ ಕಾರಣ ಭಾರೀ ಅನಾಹುತ ತಪ್ಪಿದೆ.

ಹಾನಿಗೊಳಗಾಗಿರುವ ಸ್ಮಾರಕದಲ್ಲಿ ಲೈಟ್ನಿಂಗ್‌ ಅರೆಸ್ಟರ್‌ ವ್ಯವಸ್ಥೆ ಅಳವಡಿಸಿರಲಿಲ್ಲ ಎಂಬುದನ್ನು ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ಎಎಸ್‌ಐ) ಅಧಿಕಾರಿ ಒಪ್ಪಿಕೊಂಡಿದ್ದಾರೆ.

ಗೋಳಗುಮ್ಮಟ ಮತ್ತು ಇಬ್ರಾಹಿಂ ರೋಜಾ ಸೇರಿದಂತೆ ಹೆಚ್ಚಿನ ಪ್ರಾಚೀನ ಸ್ಮಾರಕಗಳಲ್ಲಿ ಲೈಟ್ನಿಂಗ್‌ ಅರೆಸ್ಟರ್‌ ವ್ಯವಸ್ಥೆ ಇಲ್ಲ ಎಂದು ಹೇಳಿದ್ದಾರೆ.

10 ವರ್ಷಗಳ ಹಿಂದೆ ವಿಜಯಪುರದಲ್ಲಿ ಎಎಸ್‌ಐ ವ್ಯಾಪ್ತಿಯಲ್ಲಿ ಬರುವ ಶೇ.90ರಷ್ಟು ಸ್ಮಾರಕಗಳಲ್ಲಿ ಎಎಸ್‌ಐ ಲೈಟ್ನಿಂಗ್‌ ಅರೆಸ್ಟರ್‌ ವ್ಯವಸ್ಥೆ ಅಳವಡಿಸಿತ್ತು. ಆದರೆ, ಇದರ ತಾಮ್ರದ ತಂತಿಗಳನ್ನು ಕದ್ದೊಯ್ದಿದ್ದಾರೆ. ಇದರಿಂದ ಯಂತ್ರಗಳ ಕಾರ್ಯನಿರ್ವಹಣೆ ಸ್ಥಗಿತಗೊಂಡಿದೆ. ವಿಜಯದಲ್ಲಿ 81 ಸ್ಮಾರಕಗಳು ಎಎಸ್ಐ ವ್ಯಾಪ್ತಿಗೆ ಬರುತ್ತಿದೆ ಎಂದು ತಿಳಿಸಿದ್ದಾರೆ.

ಸ್ಮಾರಕಗಳಿಗೆ ಹಾನಿಯುಂಟು ಮಾಡುವಷ್ಟು ಅಬ್ಬರ ಸಿಡಿಲು ವಿಜಯಪುರದಲ್ಲಿ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಘಟನೆ ಬಳಿಕ ಉನ್ನತಾಧಿಕಾರಿಗಳಿಗೆ ಸಂದೇಶ ರವಾನಿಸಲಾಗಿದೆ. ಸ್ಮಾರಕಗಳಿಗೆ ಲೈಟ್ನಿಂಗ್‌ ಅರೆಸ್ಟರ್‌ ವ್ಯವಸ್ಥೆ ಅಳವಡಿಸುವಂತೆ ಮನವಿ ಮಾಡಿದ್ದೇವೆಂದು ಹೇಳಿದ್ದಾರೆ.

ಅತಿ ಎತ್ತರದ ಸ್ಮಾರಕಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಈ ವರ್ಷ, ಕನಿಷ್ಠ ಹತ್ತು ಸ್ಮಾರಕಗಳಲ್ಲಿ ಲೈಟ್ನಿಂಗ್‌ ಅರೆಸ್ಟರ್‌ ವ್ಯವಸ್ಥೆ ಅಳವಡಿಸಲಾಗುತ್ತಿದೆ. ಇತರ ಸ್ಮಾರಕಗಳಿಗೆ ಹಂತ ಹಂತವಾಗಿ ಅಳವಡಿಸಲಾಗುವುದು. ಏತನ್ಮಧ್ಯೆ, ತಾಮ್ರದ ಪಟ್ಟಿಯನ್ನು ಕದಿಯದಂತೆಯೂ ಜನರಿಗೆ ಮನವಿ ಮಾಡಿದ್ದಾರೆ.

ಇದೇ ವೇಳೆ ಹಾನಿಗೊಳಗಾದ ಸ್ಮಾರಕದ ರಚನೆಯು ಮತ್ತಷ್ಟು ಹಾನಿಗೊಳಗಾಗದಂತೆ ತಡೆಯಲು ಸ್ಕ್ಯಾಫೋಲ್ಡಿಂಗ್ ಅನ್ನು ಹಾಕಲಾಗುತ್ತದೆ. ನಂತರ ಹಾನಿಗೊಳಗಾದ ಭಾಗವನ್ನು ಮೂಲ ರಚನೆಯಂತೆಯೇ ಪುನಃಸ್ಥಾಪಿಸಲು ಸಾಧ್ಯತೆ ಕುರಿತು ಅನ್ವೇಷಿಸಲಾಗುವುದು ಎಂದು ಹೇಳಿದರು.

SCROLL FOR NEXT