ಪ್ರಾತಿನಿಧಿಕ ಚಿತ್ರ 
ರಾಜ್ಯ

ಬೆಂಗಳೂರಿನಲ್ಲಿ ಮೂರು ಪ್ರತ್ಯೇಕ ರಸ್ತೆ ಅಪಘಾತ; ಮೂವರ ದುರ್ಮರಣ, ಐವರಿಗೆ ಗಾಯ!

ಹಿಟ್ ಅ್ಯಂಡ್ ರನ್ ಪ್ರಕರಣದಲ್ಲಿ, ವೇಗವಾಗಿ ಬಂದ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 32 ವರ್ಷದ ವ್ಯಕ್ತಿ ಸಾವನ್ನಪ್ಪಿ, ಮೂವರು ಗಾಯಗೊಂಡಿದ್ದಾರೆ.

ಬೆಂಗಳೂರು: ನಗರದಲ್ಲಿ ವಿವಿಧೆಡೆ ಶನಿವಾರ ರಾತ್ರಿಯಿಂದ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿ, ಐವರಿಗೆ ಗಾಯವಾಗಿರುವ ಘಟನೆ ನಡೆದಿದೆ.

ಹಿಟ್ ಅ್ಯಂಡ್ ರನ್ ಪ್ರಕರಣದಲ್ಲಿ, ವೇಗವಾಗಿ ಬಂದ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 32 ವರ್ಷದ ವ್ಯಕ್ತಿ ಸಾವನ್ನಪ್ಪಿ, ಮೂವರು ಗಾಯಗೊಂಡಿದ್ದಾರೆ.

ಬೆಂಗಳೂರು-ಹೊಸೂರು ಮುಖ್ಯರಸ್ತೆಯಲ್ಲಿರುವ ಬೊಮ್ಮಸಂದ್ರದ ರಾಯಲ್ ಎನ್‌ಫೀಲ್ಡ್ ಶೋರೂಂ ಬಳಿ ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ.

ಮೃತ ವ್ಯಕ್ತಿಯನ್ನು ಪ್ರಕಾಶ್ ಎಂದು ಗುರುತಿಸಲಾಗಿದ್ದು, ಅವರ ಪತ್ನಿ ಮಹಾದೇವಿ (27) ಮತ್ತು ಪುತ್ರ ಅಕುಲ್ (10) ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದಾರೆ. ಆನೇಕಲ್ ನಲ್ಲಿ ಕುಟುಂಬ ವಾಸವಾಗಿತ್ತು. ಮತ್ತೋರ್ವ ವಾಹನ ಚಾಲಕ ಪ್ರಭು (32) ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಧ್ಯಾಹ್ನ 2:45 ಕ್ಕೆ ಪ್ರಕಾಶ್ ಮತ್ತು ಅವರ ಕುಟುಂಬ ದೇವಸ್ಥಾನದಿಂದ ಮನೆಗೆ ಮರಳುತ್ತಿದ್ದಾಗ ಬೊಮ್ಮಸಂದ್ರದ ಬಳಿ ವೇಗವಾಗಿ ಬಂದ ಲಾರಿ ದ್ವಿಚಕ್ರ ವಾಹನದ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಮತ್ತೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತೀವ್ರ ಗಾಯಗೊಂಡ ಪ್ರಕಾಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ದಾರಿಹೋಕರು ಮಹಾದೇವಿ ಮತ್ತು ಅಕುಲ್ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಮತ್ತೋರ್ವ ವಾಹನ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಇವರು ನೀಡಿದ ದೂರಿನ ಮೇರೆಗೆ ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಾಲಕ ಮತ್ತು ವಾಹನವನ್ನು ಪತ್ತೆಹಚ್ಚಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

ಮತ್ತೊಂದು ಘಟನೆ ಹೊಸೂರು ರಸ್ತೆಯ ಸಿಂಗಸಂದ್ರ ಮೇಲ್ಸೇತುವೆ ಬಳಿ ನಡೆದಿದೆ. ದುರಸ್ತಿ ಕಾರನ್ನು ಟೋಯಿಂಗ್ ಮಾಡುವ ವೇಳೆ ಸರಕ ಸಾಗಾಣಿಕೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಟೋಲ್ ಪ್ಲಾಜಾದ 47 ವರ್ಷದ ಸಿಬ್ಬಂದಿ ಮೃತಪಟ್ಟಿದ್ದಾನೆ. ಘಟನೆಯ್ಲಿ ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ. ಮೃತ ವ್ಯಕ್ತಿಯನ್ನು ಗೊಲ್ಲಹಳ್ಳಿ ನಿವಾಸಿ ಮಂಜುನಾಥ್ (47) ಎಂದು ಗುರ್ತಿಸಲಾಗಿದೆ. ಗಾಯಗೊಂಡಿರುವ ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾತ್ರಿ 11:30 ಕ್ಕೆ ದುರ್ಘಟನೆ ಸಂಭವಿಸಿದೆ. ಟೋಲ್ ಪ್ಲಾಜಾ ಸಿಬ್ಬಂದಿಗಳಾಗಿದ್ದ ಮಂಜುನಾಥ್, ರಾಧಾಕೃಷ್ಣನ್ ಮತ್ತು ಸತೀಶ್ ಅವರು ಫ್ಲೈಓವರ್ ಮೇಲೆ ಕೆಟ್ಟುಹೋದ ಕಾರನ್ನು ಎಳೆಯುತ್ತಿದ್ದಾಗ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಣ್ಣ ಮತ್ತು ಸತೀಶ್ ಕಾರನ್ನು ಟೋಯಿಂಗ್ ಮಾಡುತ್ತಿದ್ದು, ಮಂಜುನಾಥ ಟ್ರಾಫಿಕ್ ನಿಭಾಯಿಸುತ್ತಿದ್ದಾಗ ವೇಗವಾಗಿ ಬಂದ ಸರಕು ಸಾಗಣೆ ವಾಹನವು ಬ್ಯಾರಿಕೇಡ್'ಗೆ ಗುದ್ದಿ, ಮಂಜುನಾಥ್ ಅವರ ಮೇಲೆ ಹರಿದಿದೆ. ಬಳಿಕ ಕಾರಿಗೂ ಡಿಕ್ಕಿ ಹೊಡೆದಿದೆ. ಪರಿಣಾಮ ಮಂಜುನಾಥ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ರಾಧಾಕೃಷ್ಣನ್ ಮತ್ತು ಸತೀಶ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಆಗಸ್ಟ್ 10ರಂದು ಮಗಳ ಮದುವೆ ಇರುವ ಹಿನ್ನೆಲೆಯಲ್ಲಿ ಬಂಧು-ಮಿತ್ರರಿಗೆ ಆಮಂತ್ರಣ ಪತ್ರಿಕೆ ಕೊಡುವ ಸಲುವಾಗಿ ಮಂಜುನಾಥ್ ಅವರು ರಾತ್ರಿಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಮೂರನೇ ಘಟನೆ ಶನಿವಾರ ರಾತ್ರಿ ಕೆಎಸ್‌ಆರ್‌ಟಿಸಿ ಬಸ್ ಟರ್ಮಿನಲ್ 2ಎ ನಲ್ಲಿರುವ ಗಣೇಶ ದೇವಸ್ಥಾನದ ಬಳಿ ನಡೆದಿದೆ. ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ 25 ವರ್ಷದ ಅಪರಿಚಿತ ಯುವಕ ಮೃತಪಟ್ಟಿದ್ದಾನೆ.

ಉಪ್ಪಾರಪೇಟೆ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾತ್ರಿ 9:30ರ ಸುಮಾರಿಗೆ ರಸ್ತೆ ದಾಟುತ್ತಿದ್ದಾಗ ಕೆಎಸ್‌ಆರ್‌ಟಿಸಿ ಬಸ್ ಪಾದಚಾರಿ ವ್ಯಕ್ತಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಗೆ ರೂ.10 ಕೋಟಿ: ಸುರಂಗ ರಸ್ತೆ ಯೋಜನೆಯಿಂದ 'ಸಸ್ಯೋದ್ಯಾನ'ದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ- ಡಿಕೆ ಶಿವಕುಮಾರ್

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

SCROLL FOR NEXT