ರಾಜ್ಯ

ಇಂದು ಬಳ್ಳಾರಿ ಸೆಂಟ್ರಲ್ ಜೈಲಿಗೆ ನಟ ದರ್ಶನ್ ಶಿಫ್ಟ್: ಸುತ್ತಮುತ್ತ ಹೈ ಅಲರ್ಟ್; ರಾತ್ರಿಯಿಂದ ಕಾದು ಕುಳಿತಿರುವ ಅಭಿಮಾನಿಗಳು!

ದರ್ಶನ್ ರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವಂತೆ ನಿನ್ನೆ ಕೋರ್ಟ್ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ.

ಬೆಂಗಳೂರು/ಬಳ್ಳಾರಿ: ಬೆಂಗಳೂರಿನ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಯಮ ಮೀರಿ ನಟ ದರ್ಶನ್ ವಿಶೇಷ ಆತಿಥ್ಯ ಪಡೆಯುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಇಂದು ಬುಧವಾರ ಅವರನ್ನು ಬಳ್ಳಾರಿ ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಲು ಸಿದ್ಧತೆಗಳು ನಡೆಯುತ್ತಿವೆ.

ದರ್ಶನ್ ರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವಂತೆ ನಿನ್ನೆ ಕೋರ್ಟ್ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ. ಅತ್ಯಂತ ಹಳೆಯ ಜೈಲುಗಳಲ್ಲಿ ಒಂದಾಗಿರುವ ಬಳ್ಳಾರಿ ಜೈಲಿನಲ್ಲಿ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಇದೆ. ಹೀಗಾಗಿ ಮುಂದೆ ನ್ಯಾಯಾಲಯದ ವಿಚಾರಣೆಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಒಳಪಡಿಸಲಾಗುತ್ತದೆ.

ಇಂದು ಮಧ್ಯಾಹ್ನ 1 ಗಂಟೆಗೆ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗುವ ಸಾಧ್ಯತೆಯಿದೆ. ಕೋರ್ಟ್ ಎಲ್ಲಾ ಸದಸ್ಯರನ್ನೂ ಬೇರೆ ಬೇರೆ ಗ್ಯಾಂಗ್ ಗೆ ವರ್ಗಾಯಿಸಲು ಆದೇಶ ನೀಡಿದೆ. ದರ್ಶನ್ ಮಾತ್ರ ಬಳ್ಳಾರಿಗೆ ಶಿಫ್ಟ್ ಆಗಲಿದ್ದಾರೆ.

ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ, ಅನುಕುಮಾರ್, ದೀಪಕ್ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರಲಿದ್ದಾರೆ. ಪವನ್, ರಾಘವೇಂದ್ರ, ನಂದೀಶ್ ಮೈಸೂರು ಜೈಲಿಗೆ, ಜಗದೀಶ್, ಲಕ್ಷ್ಮಣ್ ಶಿವಮೊಗ್ಗ ಜೈಲು, ಧನರಾಜ್ ಧಾರವಾಡ, ವಿನಯ್ ವಿಜಯಪುರ, ಪ್ರದೂಶ್ ಬೆಳಗಾವಿ, ನಾಗರಾಜ್ ಕಲಬುರಗಿ ಜೈಲಿಗೆ ವರ್ಗಾವಣೆಯಾಗಲಿದ್ದಾರೆ.

ಕಾದು ಕುಳಿತ ಅಭಿಮಾನಿಗಳು: ನಟ ದರ್ಶನ್ ಗೆ ರಾಜ್ಯಾದ್ಯಂತ ಅದರಲ್ಲೂ ಹಳೆ ಮೈಸೂರು, ಮಂಡ್ಯ ಭಾಗದಲ್ಲಿ, ಉತ್ತರ ಕರ್ನಾಟಕ ಭಾಗಗಳಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುತ್ತಿದ್ದಾರೆ ಎಂಬ ಸುದ್ದಿ ಬರುತ್ತಿದ್ದಂತೆ ಅವರನ್ನು ನೋಡುವ ತವಕದಿಂದ ಜೈಲಿನ ಸುತ್ತಮುತ್ತ ಅಭಿಮಾನಿಗಳು ರಾತ್ರಿಯಿಂದಲೇ ಕಾದು ಕುಳಿತಿದ್ದಾರೆ. ತಮ್ಮ ನೆಚ್ಚಿನ ನಟನನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಬೇಕೆಂದು ಮಕ್ಕಳು, ಹಿರಿಯರು ಕಾದು ಕುಳಿತಿದ್ದು ಅವರನ್ನು ಕರೆತರುವುದನ್ನೇ ಕಾಯುತ್ತಿದ್ದಾರೆ.

ಬಳ್ಳಾರಿ ಜೈಲು: ಬಳ್ಳಾರಿ ಸೆಂಟ್ರಲ್ ಜೈಲು ಹದಿನಾರು ಎಕರೆ ವಿಸ್ತೀರ್ಣ ಹೊಂದಿದೆ. ಅಲ್ಲದೇ ಬಿಗಿ ಭದ್ರತೆಯನ್ನೂ ಹೊಂದಿದೆ. ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗುತ್ತಿರುವ ಬಗ್ಗೆ ಅಲ್ಲಿನ ಜೈಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅಧಿಕಾರಿಗಳು ಬಳ್ಳಾರಿ ಕಾರಾಗೃಹದ ವಿಶೇಷ ಭದ್ರತಾ ವಿಭಾಗದ ಸೆಲ್‌ನಲ್ಲಿ ದರ್ಶನ್‌ನ್ನು ಇರಿಸಲಿದ್ದಾರೆ. ದರ್ಶನ್‌ನನ್ನು ವಿಶೇಷ ಭದ್ರತಾ ವಿಭಾಗದ ಹದಿನೈದನೇ ಸೆಲ್‌ನಲ್ಲಿ ಇರಿಸಲಿದ್ದಾರೆ. ಈ ಜೈಲ್‌ನಲ್ಲಿ ಒಟ್ಟು ಹದಿನೈದು ಸೆಲ್‌ಗಳಿದ್ದು, ಜೈಲಾಧಿಕಾರಿಗಳು ದರ್ಶನ್‌ಗೆ ಕೊನೆಯ ಭಾಗದ ಸೆಲ್ ನೀಡಲಿದ್ದಾರೆ.

ಜೈಲಿನ ಬಳಿ ಅಭಿಮಾನಿಗಳು

ಜೈಲಿನ ಸುತ್ತಮುತ್ತ ಬಿಗಿ ಭದ್ರತೆ: ಬಳ್ಳಾರಿ ಜೈಲು ಅಧಿಕಾರಿಗಳು, ಜೈಲಿನ ವಿಐಪಿ ಸೆಲ್​ಗಳ ಅಂತಿಮ ಹಂತದ ಪರಿಶೀಲನೆ ನಡೆಸಿದರು. ಅಲ್ಲದೇ ಜೈಲಿನ ಸಿಸಿ ಕ್ಯಾಮರಾಗಳನ್ನು ಸಹ ಪರಿಶೀಲಿಸಿದರು. ಜೈಲಿನ ಸುತ್ತ ಫುಲ್​ ಟೈಟ್ ಸೆಕ್ಯೂರಿಟಿ ಇದೆ. ದರ್ಶನ್ ಭದ್ರತೆಗೆ ಈಗಾಗಲೇ ಮೂವರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬಾಡಿವೋರ್ನ್ ಕ್ಯಾಮೆರಾ ಹಾಗೂ ಸಿಸಿಟಿವಿಯಲ್ಲಿ ಕಣ್ಗಾವಲಿರುವ ಸೆಲ್‌ನಲ್ಲಿ ದರ್ಶನ್ ಇರಲಿದ್ದಾರೆ. ಭದ್ರತೆಗೆ ನಿಯೋಜನೆಯಾಗುವ ಸಿಬ್ಬಂದಿಗೆ ಬಾಡಿವೋರ್ನ್ ಕ್ಯಾಮೆರಾ ಕಡ್ಡಾಯವಾಗಿರಲಿದೆ. ಬಳ್ಳಾರಿ ಜೈಲಿನಲ್ಲಿ ಸೂಪರ್ಡೆಂಟ್ ಸೇರಿ ಒಟ್ಟು ನೂರು ಮಂದಿ ಸಿಬ್ಬಂದಿ, ಅಧಿಕಾರಿಗಳಿದ್ದಾರೆ.

ಇಂದು ಕೋರ್ಟ್ ನ್ಯಾಯಾಂಗ ಬಂಧನ ಅವಧಿ ಮುಕ್ತಾಯ: ನ್ಯಾಯಾಲಯ ಇಂದೂ ಕೂಡಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸುವ ಸಾಧ್ಯತೆಯಿದೆ. ಇದರಿಂದಾಗಿ ದರ್ಶನ್ ಬಳ್ಳಾರಿ ಜೈಲಿನಲ್ಲಿ ಕಳೆಯುವುದು ಬಹುತೇಕ ನಿಶ್ಚಿತವಾಗಿದೆ. ಅಲ್ಲದೆ ಅವರ ವಿರುದ್ಧ ಈಗ ಹೊಸದಾಗಿ ಎರಡು ಪ್ರಕರಣ ದಾಖಲಾಗಿದ್ದು, ಅದರ ವಿಚಾರಣೆಯೂ ನಡೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT