ಈಜಿಪುರ ಮೇಲ್ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿರುವುದು. 
ರಾಜ್ಯ

ಈಜಿಪುರ ಮೇಲ್ಸೇತುವೆ ಕಾಮಗಾರಿಗೆ ಮತ್ತೆ ಗ್ರಹಣ: BBMP ಅಸಹಕಾರದಿಂದ ಕಾಮಗಾರಿ ಸ್ಥಗಿತ; ಗುತ್ತಿಗೆದಾರ ಆರೋಪ

ಮೇ ತಿಂಗಳ ಬಾಕಿ ಬಿಲ್‌ಗಳ ಜೊತೆಗೆ ಇದುವರೆಗೆ ಕೈಗೊಂಡ ಕಾಮಗಾರಿಗೆ ಸಂಸ್ಥೆಯು 11.5 ಕೋಟಿ ರೂ. ಬಿಲ್ ಮಾಡಿದೆ. ಒಟ್ಟಾರೆಯಾಗಿ 18 ಕೋಟಿ ರೂ. ಬಾಕಿ ಉಳಿದಿದ್ದು, ಬಿಲ್‌ಗಳನ್ನು ತೆರವುಗೊಳಿಸಲು ಬಿಬಿಎಂಪಿ ಸಹಕರಿಸದ ಕಾರಣ ಕಾಮಗಾರಿಗೆ ತೊಂದರೆಯಾಗುತ್ತಿದೆ.

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ 2ನೇ ಅತಿ ಉದ್ದದ ಈಜಿಪುರ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಹಿಡಿದಿರುವ ಗ್ರಹಣ ಬಿಡುವ ಲಕ್ಷಣಗಳೇ ಕಾಣುತ್ತಿಲ್ಲ. ಕಾಮಗಾರಿ ಪುನರಾರಂಭಗೊಂಡ 3 ವಾರಗಳ ಬಳಿಕ ಮತ್ತೆ ಕೆಲಸ ಸ್ಥಗಿತಗೊಂಡಿದೆ. ಇದಕ್ಕೆ ಬಿಬಿಎಂಪಿ ಅಧಿಕಾರಿಗಳು ಅಸಹಕಾರವೇ ಕಾರಣ ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ.

ಗುತ್ತಿಗೆ ಪಡೆದಿರುವ ಹೊಸ ಏಜೆನ್ಸಿ ಬಿಎಸ್‌ಸಿಪಿಎಲ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ ಕಾರ್ಮಿಕರು ಪಾಲಿಕೆ ವಿರುದ್ಧ ಆರೋಪ ಮಾಡಿದ್ದಾರೆ.

ಬನ್ನೇರುಘಟ್ಟ ರಸ್ತೆ ಬಳಿಯ ಸಕಲವಾರ ಕಾಸ್ಟಿಂಗ್ ಪ್ಲಾಂಟ್‌ನಲ್ಲಿ ಬಿದ್ದಿರುವ 50 ಭಾಗಗಳನ್ನು ಬಿಬಿಎಂಪಿ ಹಸ್ತಾಂತರಿಸಿಲ್ಲ ಎಂದು ಕಾರ್ಮಿಕರು ತಿಳಿಸಿದ್ದಾರೆ. ಇದಲ್ಲದೆ, ಮೇ ತಿಂಗಳಿನಲ್ಲಿ ನಡೆಸಲಾಗಿರುವ ಕಾಮಗಾರಿಗೆ ಪಾಲಿಕೆ ಇನ್ನೂ ಪಾವತಿ ಮಾಡಿಲ್ಲ. ರೂ.7.01 ಕೋಟಿ ಗಳನ್ನು ಪಾಲಿಕೆ ಪಾವತಿ ಮಾಡಬೇಕು ಎಂದು ಹೇಳಿದ್ದಾರೆ.

ಒಪ್ಪಂದದ ಪ್ರಕಾರ ಪಾಲಿಕೆ ಯೋಜನಾ ವಿಭಾಗದ ಎಂಜಿನಿಯರ್‌ಗಳು ಕೋಲ್ಕತ್ತಾದ ಪ್ಲಾಂಟ್‌ಗೆ ಭೇಟಿ ನೀಡಿ, ಫ್ಲೈಓವರ್‌ನಲ್ಲಿ ಪಿಲ್ಲರ್ ಕಾಮಗಾರಿಗೆ ಬಳಸಲಾಗುವ ಬೇರಿಂಗ್‌ಗಳನ್ನು ಪರಿಶೀಲಿಸಬೇಕು. ಈಗಾಗಲೇ ಕೆಲ ಕೋಟಿ ಮೌಲ್ಯದ ಸಾಮಾಗ್ರಿಗಳು ನಗರಕ್ಕೆ ಬಂದಿವೆ. ಆದರೆ, ಬಿಬಿಎಂಪಿ ಸಹಕಾರ ನೀಡುತ್ತುಲ್ಲ. ಬಿಲ್ ಗಳನ್ನು ತೆರವುಗೊಳಿಸುತ್ತಿಲ್ಲ ಎಂದು ಬಿಎಸ್‌ಸಿಪಿಎಲ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ ಆರೋಪಿಸಿದೆ.

ಮೇ ತಿಂಗಳ ಬಾಕಿ ಬಿಲ್‌ಗಳ ಜೊತೆಗೆ ಇದುವರೆಗೆ ಕೈಗೊಂಡ ಕಾಮಗಾರಿಗೆ ಸಂಸ್ಥೆಯು 11.5 ಕೋಟಿ ರೂ. ಬಿಲ್ ಮಾಡಿದೆ. ಒಟ್ಟಾರೆಯಾಗಿ 18 ಕೋಟಿ ರೂ. ಬಾಕಿ ಉಳಿದಿದ್ದು, ಬಿಲ್‌ಗಳನ್ನು ತೆರವುಗೊಳಿಸಲು ಬಿಬಿಎಂಪಿ ಸಹಕರಿಸದ ಕಾರಣ ಕಾಮಗಾರಿಗೆ ತೊಂದರೆಯಾಗುತ್ತಿದೆ ಎಂದು ಬಿಎಸ್‌ಸಿಪಿಎಲ್‌ನ ಹಿರಿಯ ಎಂಜಿನಿಯರ್‌ ಹೇಳಿದ್ದಾರೆ.

ಈ ಹಿಂದಿನ ಗುತ್ತಿಗೆದಾರರಾದ ಸಿಂಪ್ಲೆಕ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಸಂಸ್ಥೆ ‘ಕಾಸ್ಟಿಂಗ್‌ ಯಾರ್ಡ್‌’ನಲ್ಲಿ ಎಲಿಮೆಂಟ್‌ಗಳನ್ನು ನಿರ್ಮಿಸಿತ್ತು. ಅದನ್ನು ಬಳಸಲು ಹೊಸ ಗುತ್ತಿಗೆದಾರರಾದ ಬಿಎಸ್‌ಸಿಪಿಎಲ್‌ ಸಂಸ್ಥೆಗೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಹಿಂದಿನ ಗುತ್ತಿಗೆದಾರರು ‘ಕಾಸ್ಟಿಂಗ್‌ ಯಾರ್ಡ್’ಗೆ ಬಾಡಿಗೆ ನೀಡಿರಲಿಲ್ಲ. ರೂ.1.92 ಕೋಟಿ ಬಾಕಿ ಇದ್ದು, ಇದನ್ನು ಬಿಬಿಎಂಪಿ ಪಾವತಿಸಬೇಕಿದೆ. ಆದರೆ, ಬಿಬಿಎಂಪಿ ಪಾವತಿ ಮಾಡುತ್ತಿಲ್ಲ, ಈ ವಿಭಾಗಗಳನ್ನು ನಮಗೆ ಹಸ್ತಾಂತರಿಸಿದರೆ, ಕೆಲಸ ಪುನರಾರಂಭಿಸಬಹುದು ಎಂದು ತಿಳಿಸಿದರು.

ಯೋಜನೆ ಹಿರಿಯ ವ್ಯವಸ್ಥಾಪಕರೊಬ್ಬರು ಮಾತನಾಡಿ, ಕಳೆದ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಳಕ್ಕೆ ಭೇಟಿ ನೀಡಿದಾಗ ಬಿಬಿಎಂಪಿ ಅಧಿಕಾರಿಗಳು ಯೋಜನೆ ತಡವಾಗುತ್ತಿರುವುದಕ್ಕೆ ಸಂಸ್ಥೆಯನ್ನು ಬಲಿಪಶು ಮಾಡಿತ್ತು. ವಾಸ್ತವದಲ್ಲಿ, ಕೆಲಸ ಪುನರಾರಂಭಿಸಲು ಫಿಟ್‌ನೆಸ್ ವರದಿಯನ್ನು ಈ ವರ್ಷದ ಮೇ ತಿಂಗಳಲ್ಲಿಯೇ ಭಾರತೀಯ ವಿಜ್ಞಾನ ಸಂಸ್ಥೆಯ ಸಿವಿಲ್ ಎಂಜಿನಿಯರಿಂಗ್ ವಿಭಾಗವು ಬಿಬಿಎಂಪಿ ಮತ್ತು ಏಜೆನ್ಸಿಗೆ ಹಸ್ತಾಂತರಿಸಿದೆ. ಆದರೆ, ಇದೀಗ ಸಂಸ್ಥೆ ಮೇಲೆ ಆರೋಪ ಮಾಡಲಾಗುತ್ತಿದೆ. ಇದು ಸರಿಯಲ್ಲ ಎಂದು ಹೇಳಿದ್ದಾರೆ.

ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಯೋಜನಾ ವಿಭಾಗದ ಹಿರಿಯ ಬಿಬಿಎಂಪಿ ಅಧಿಕಾರಿ, ಕಾಮಗಾರಿಯನ್ನು ಆಗಾಗ್ಗೆ ಪರಿಶೀಲಿಸುವುದು ಹೊರತುಪಡಿಸಿ ಬಿಬಿಎಂಪಿಯ ಯಾವುದೇ ಪಾತ್ರ ಇದರಲ್ಲಿ ಇಲ್ಲ. ಯಾವುದೇ ಸಮಸ್ಯೆಗಳಿದ್ದಲ್ಲಿ, ವಿಷಯವನ್ನು ಮುಖ್ಯ ಆಯುಕ್ತರ ಗಮನಕ್ಕೆ ತರಲಾಗುವುದು. ಅವರೇ ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT