ತುಮಕೂರು: ನೀರಿಗೆ ಸೋಡಿಯಂ ಮೆಟಲ್ ಎಸೆದು ಬ್ಲಾಸ್ಟ್ ಮಾಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕನ್ನಡದ ಬಿಗ್ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಅವರನ್ನು ಮಧುಗಿರಿ ಕೋರ್ಟ್ ಮೂರು ದಿನ ಪೊಲೀಸ್ ವಶಕ್ಕೆ ನೀಡಿ ಶುಕ್ರವಾರ ಆದೇಶಿಸಿದೆ.
ನಿನ್ನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸರು ಡ್ರೋನ್ ಪ್ರತಾಪ್ನನ್ನು ಬಂಧಿಸಿದ್ದರು. ಇಂದು ಆರೋಪಿ ಡ್ರೋನ್ ಪ್ರತಾಪ್ ನನ್ನು ಮಧುಗಿರಿಯ ಪ್ರಧಾನ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ಸಿ ಕೋರ್ಟ್ಗೆ ಹಾಜರು ಪಡಿಸಿದರು. ಆರೋಪಿಯ ವಿಚಾರಣೆ ನಡೆಸಿದ ಕೋರ್ಟ್ ಹೆಚ್ಚಿನ ವಿಚಾರಣೆಗಾಗಿ ಡ್ರೋನ್ ಪ್ರತಾಪ್ನನ್ನು ಮೂರು ದಿನ ಪೊಲೀಸ್ ವಶಕ್ಕೆ ನೀಡಿ ಆದೇಶಿಸಿದೆ.
ಸೋಡಿಯಂ ಬಳಸಿ ಕೃಷಿ ಹೊಂಡಾದಲ್ಲಿ ಡ್ರೋಣ್ ಪ್ರತಾಪ್ ಸ್ಫೋಟಿಸಿದ್ದರು. ಅಲ್ಲದೆ ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಪೊಲೀಸರು ವಿಡಿಯೋ ಆಧರಿಸಿ ಪ್ರತಾಪ್, ಜಮೀನಿನ ಮಾಲೀಕ ಜಿತೇಂದ್ರ ಜೈನ್ ಮತ್ತು ಇತರರ ವಿರುದ್ಧ ಬಿಎನ್ಎಸ್ ಕಾಯ್ದೆ ಸೆಕ್ಷನ್ 176, ಸಿಆರ್ಪಿಸಿ 158 ಎ ಮತ್ತು ಬಿ ಹಾಗೂ ಸ್ಫೋಟಕ ವಸ್ತುಗಳ ನಿಯಂತ್ರಣ ಕಾಯ್ದೆಯಡಿ ಮಧುಗಿರಿಯ ಮಿಡಿಗೇಶಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರಿನಲ್ಲಿದ್ದ ಡ್ರೋನ್ ಪ್ರತಾಪ್ ಅವರನ್ನು ಮಿಡಿಗೇಶಿ ಪೊಲೀಸರು ಗುರುವಾರ ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ಮುಂದುವರೆಸಿದ್ದಾರೆ.
ಬ್ಲಾಸ್ಟ್ಗೆ ಬಳಸಿದ್ದ ವಸ್ತುಗಳನ್ನೇಲ್ಲಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದಾದ ಬಳಿಕ ಘಟನಾ ಸ್ಥಳಕ್ಕೆ ತೆರಳಲು ಬಳಸಿದ್ದ ಕಾರು, ಅಲ್ಲಿ ಬಳಸಿದ್ದ ಲ್ಯಾಪ್ಟಾಪ್, ಮೊಬೈಲ್ ಸೇರಿ ಎಲ್ಲಾ ವಸ್ತುಗಳನ್ನ ಸೀಜ್ ಮಾಡಿದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.