ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ 
ರಾಜ್ಯ

ಹಾಸನ: ಸರಪಳಿಯಲ್ಲಿ ಬಂಧಿಸಲ್ಪಟ್ಟಿದ್ದ ಮಾನಸಿಕ ಅಸ್ವಸ್ಥ ಬಾಲಕನ ರಕ್ಷಣೆ

Ramyashree GN

ಹಾಸನ: ಸಕಲೇಶಪುರ ತಾಲೂಕಿನ ಕ್ಯಾನಹಳ್ಳಿ ಗ್ರಾಮದಲ್ಲಿ ಕಾಫಿ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂನ ಕುಟುಂಬವೊಂದು ತಮ್ಮ ಮಾನಸಿಕ ಅಸ್ವಸ್ಥ ಮಗುವನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿ, ಆತನ ಕಾಲುಗಳನ್ನು ಸರಪಳಿಯಿಂದ ಕಟ್ಟಿ ಹಾಕಿರುವ ಘಟನೆ ವರದಿಯಾಗಿದೆ.

ಬುಧವಾರ ಕೊಠಡಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ಬಾಲಕ ರಸ್ತೆಬದಿಯಲ್ಲಿ ನಿಂತಾಗ ಘಟನೆ ಬೆಳಕಿಗೆ ಬಂದಿದೆ.

ಮಾಹಿತಿ ಮೇರೆಗೆ ಸಕಲೇಶಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಲಕನನ್ನು ರಕ್ಷಿಸಿದ್ದಾರೆ. ಉಮೇಶ್ ಎಂಬುವರಿಗೆ ಸೇರಿದ ಕಾಫಿ ಎಸ್ಟೇಟ್‌ನಲ್ಲಿ ಅಸ್ಸಾಂ ಮೂಲದ ದಂಪತಿ ಕಳೆದೆರಡು ತಿಂಗಳಿಂದ ಕೆಲಸ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದಂಪತಿ ತಮ್ಮ ದಿನನಿತ್ಯದ ಕೆಲಸಕ್ಕೆ ಹೊರಡುವ ಮುನ್ನ ಹುಡುಗನನ್ನು ಸರಪಳಿಯಲ್ಲಿ ಕಟ್ಟಿಹಾಕುತ್ತಿದ್ದರು ಮತ್ತು ಅವನಿಗೆ ಆಹಾರ ನೀಡಿದ ನಂತರ ಕೊಠಡಿಯಲ್ಲಿ ಕೂಡಿ ಹಾಕುತ್ತಿದ್ದರು. ಕಾಫಿ ಎಸ್ಟೇಟ್ ಮಾಲೀಕ ಉಮೇಶ್ ಹಲವು ಬಾರಿ ಎಚ್ಚರಿಕೆ ನೀಡಿದರೂ ದಂಪತಿ ಅದೇ ಅಭ್ಯಾಸ ಮುಂದುವರಿಸಿದ್ದರು ಎನ್ನಲಾಗಿದೆ.

ಪೊಲೀಸರು ಹಾಸನದ ಶಿಶುಪಾಲನಾ ಮತ್ತು ರಕ್ಷಣಾ ಕೇಂದ್ರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅವರು ಅಪ್ರಾಪ್ತ ಬಾಲಕನನ್ನು ವೈದ್ಯಕೀಯ ಪರೀಕ್ಷೆಗಾಗಿ ಕ್ರೌಫೋರ್ಡ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ದಂಪತಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಬಾಲಕ ಏನನ್ನೂ ಬಹಿರಂಗಪಡಿಸದ ಕಾರಣ ಆತನನ್ನು ಹಾಸನದ ಶಿಶುಪಾಲನಾ ಮತ್ತು ರಕ್ಷಣಾ ಕೇಂದ್ರಕ್ಕೆ ಕಳುಹಿಸಲಾಗಿದೆ.

SCROLL FOR NEXT