ಅರವಿಂದ್ ಬೆಲ್ಲದ್
ಅರವಿಂದ್ ಬೆಲ್ಲದ್ 
ರಾಜ್ಯ

ವಿವಿಧ ಜಾತಿಯ ನಿಗಮಗಳ ಅನುದಾನ ಕಡಿತಗೊಳಿಸಿ ಸಿದ್ದರಾಮಯ್ಯ ಅಲ್ಪಸಂಖ್ಯಾತರಿಗೆ ಹಂಚಿಕೆ: ಅರವಿಂದ್ ಬೆಲ್ಲದ್

Shilpa D

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಿಧ ಜಾತಿಯ ನಿಗಮಗಳಿಗೆ ಹಣ ಕಡಿತಗೊಳಿಸಿ ಅಲ್ಪಸಂಖ್ಯಾತರಿಗೆ ಹಂಚಿಕೆ ಮಾಡಿದ್ದಾರೆ ಎಂದು ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಆರೋಪಿಸಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ಒಂದು ಕಡೆ ಸಿಎಂ ಸಿದ್ದರಾಮಯ್ಯ ತಾವು ಮತ್ತು ತಮ್ಮ ಸರ್ಕಾರ ಹಿಂದುಳಿದ ವರ್ಗಗಳು, ಎಸ್‌ಸಿ, ಎಸ್‌ಟಿಗಳ ಪರ ಎಂದು ಹೇಳುತ್ತಿದ್ದರೂ ವಾಸ್ತವದಲ್ಲಿ ಈ ಸಮುದಾಯಗಳಿಗೆ ಅನುದಾನ ನೀಡುತ್ತಿಲ್ಲ ಎಂದು ಕಿಡಿಕಾರಿದರು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಬಜೆಟ್ ಅನ್ನು ಸಿದ್ದರಾಮಯ್ಯ ಅವರ ಬಜೆಟ್‌ಗೆ ಹೋಲಿಸಿದ ಬೆಲ್ಲದ್, ಬೊಮ್ಮಾಯಿ ಅವರು ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ 60 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಅದನ್ನು ಸಿದ್ದರಾಮಯ್ಯ ಅವರು 40 ಕೋಟಿ ರೂ.ಗೆ ಇಳಿಸಿದ್ದಾರೆ ಎಂದು ಹೇಳಿದರು.

ತಾಂಡಾ ಅಭಿವೃದ್ಧಿ ನಿಗಮಕ್ಕೆ ಬೊಮ್ಮಾಯಿ 100 ಕೋಟಿ ಮೀಸಲಿಟ್ಟರು, ಸಿದ್ದರಾಮಯ್ಯ ಅದನ್ನು 60 ಕೋಟಿಗೆ ಇಳಿಸಿದರು, ಬಿಜೆಪಿ ಸರಕಾರದ ಅವಧಿಯಲ್ಲಿ ಆದಿ ಜಾಂಬವ ನಿಗಮಕ್ಕೆ 110 ಕೋಟಿ ದೊರೆತಿದ್ದು, ಸಿದ್ದರಾಮಯ್ಯನವರು ಈಗ 60 ಕೋಟಿ ರೂ. ನೀಡಿದ್ದಾರೆ ಎಂದು ವಿವರ ನೀಡಿದರು.

ಅದೇ ರೀತಿ ಸಿದ್ದರಾಮಯ್ಯ ಅವರು ಲಿಂಗಾಯತ, ಕುರುಬ, ವಿಶ್ವಕರ್ಮ, ಇತರೆ ಹಿಂದುಳಿದ ವರ್ಗಗಳ ನಿಗಮಗಳಿಗೆ ಅನುದಾನವನ್ನು ತೀವ್ರವಾಗಿ ಕಡಿತಗೊಳಿಸಿದ್ದಾರೆ ಎಂದು ಆರೋಪಿಸಿದರು. ಈ ನಿಗಮಗಳಿಗೆ ಹಣ ಕಡಿತಗೊಳಿಸಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ 3000 ಕೋಟಿ ನೀಡಲಾಗಿದೆ ಎಂದು ಬೆಲ್ಲದ್ ಆರೋಪಿಸಿದರು.

ಅಲ್ಪಸಂಖ್ಯಾತರಿಗೆ ಹಣ ಮಂಜೂರು ಮಾಡುವುದನ್ನು ನಾವು ವಿರೋಧಿಸುವುದಿಲ್ಲ, ಆದರೆ ಹಿಂದುಳಿದ ವರ್ಗಗಳು ಮತ್ತು ಇತರ ಜಾತಿಗಳ ಕಲ್ಯಾಣಕ್ಕಾಗಿ ಹಂಚಿಕೆಯನ್ನು ಏಕೆ ಕಡಿತಗೊಳಿಸಿದ್ದೀರಿ ಎಂದು ಪ್ರಶ್ನಿಸಿದರು.

ಉತ್ತರ ಕರ್ನಾಟಕದ ಕಲ್ಯಾಣಕ್ಕೆ ಸರ್ಕಾರದ ಬಳಿ ಹಣವಿಲ್ಲ ಎಂದು ಬೆಲ್ಲದ್ ಹೇಳಿದರು. ಮಠಗಳಿಗೆ ಮತ್ತು ಹಿಂದೂ ಸ್ಮಶಾನಗಳ ನಿರ್ವಹಣೆಗೆ ಸಹ ಸಿಎಂ ಹಂಚಿಕೆಯನ್ನು ಕಡಿಮೆ ಮಾಡಿದ್ದಾರೆ, ಹುಬ್ಬಳ್ಳಿಯ ಗಂಗೂಬಾಯಿ ಹಾನಗಲ್ ಗುರುಕುಲಕ್ಕೆ ವಾರ್ಷಿಕ ಅನುದಾನ ಕಡಿತಗೊಳಿಸಲಾಗಿದೆ ಎಂದು ಬೆಲ್ಲದ್ ಆರೋಪಿಸಿದರು.

SCROLL FOR NEXT