ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ 
ರಾಜ್ಯ

ವರದಿ ಬಳಿಕ ಚರ್ಚಿಸಿ 7ನೇ ವೇತನ ಆಯೋಗ ಜಾರಿ ಕುರಿತು ತೀರ್ಮಾನ: ಸಿದ್ದರಾಮಯ್ಯ ಭರವಸೆ

Manjula VN

ಬೆಂಗಳೂರು: ವರದಿ ಬಂದ ಬಳಿಕ ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ವರದಿ ಮತ್ತು ಹಳೆ ಪಿಂಚಣಿ ಯೋಜನೆ (ಒಪಿಎಸ್) ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಭರವಸೆ ನೀಡಿದರು.

ಅರಮನೆ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ನಾನು ಉಪ ಮುಖ್ಯಮಂತ್ರಿಯಾಗಿದ್ದ ವೇಳೆ 1996ರಲ್ಲಿ 5ನೇ ವೇತನ ಆಯೋಗ, ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ವೇಳೆ 6ನೇ ವೇತನ ಆಯೋಗ ಜಾರಿ ಮಾಡಿದ್ಧೇವೆ. ಈಗ 7ನೇ ವೇತನ ಆಯೋಗ ಕೂಡ ನಾನು ಅಧಿಕಾರದಲ್ಲಿರುವಾಗಲೇ ಬಂದಿದೆ ಎಂದು ಹೇಳಿದರು.

ಮಾ.15ರೊಳಗೆ ಹಾಗೂ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ವರದಿ ನೀಡುವಂತೆ 7ನೇ ವೇತನ ಆಯೋಗದ ಅಧ್ಯಕ್ಷ ಕೆ. ಸುಧಾಕರ್ ರಾವ್ ಅವರಿಗೆ ತಿಳಿಸಿದ್ದೇವೆ. ವರದಿ ನೀಡಿದರೆ ಚರ್ಚಿಸಿ ಅನುಷ್ಠಾನ ಮಾಡಲಾಗುತ್ತದೆ. 6ನೇ ವೇತನ ಆಯೋಗದಲ್ಲಿ ಶೇ.30 ರಷ್ಟು ಹೆಚ್ಚಳ ಮಾಡಲಾಗಿತ್ತು. ಇದು ಇಡೀ ವೇತನ ಆಯೋಗದಲ್ಲಿಯೇ ಅತಿ ಹೆಚ್ಚಿನ ಮೊತ್ತವಾಗಿದೆ. ಈಗ ನೀವು ಶೇ.40 ಕೇಳುತ್ತಿದ್ದೀರಿ. ಆದರೆ, ಹಿಂದಿನ ಸರ್ಕಾರವು ನಿಗದಿ ಮಾಡಿರುವ ಶೇ.17ರಷ್ಟು ಹೆಚ್ಚಳ ಮಾಡಲಾಗುತ್ತದೆ. ನಾನು ಸರ್ಕಾರಿ ನೌಕರರ ಪರವಾಗಿದ್ದೇನೆ. ನಿಮ್ಮ ಬೇಡಿಕೆಗಳನ್ನು ಈಡೇರಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಎನ್‌ಪಿಎಸ್ ಬಲದಾಗಿ ಹಳೆ ಪಿಂಚಣಿ ಯೋಜನೆ (ಒಪಿಎಸ್) ಅನ್ನು ಕೇಂದ್ರ ಸರ್ಕಾರವು 2006ರಲ್ಲಿ ತೆಗೆದಿದೆ. ಸದ್ಯ ಹಿಮಾಚಲ ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ಅಸ್ಸಾಂ ಸೇರಿ 6 ರಾಜ್ಯಗಳಲ್ಲಿ ಜಾರಿಯಾಗಿದೆ ಎಂದು ಹೇಳುತ್ತಿದ್ದೀರಿ. ಇದಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ಮಾಡಲಾಗಿದೆ. ಈ ಸಮಿತಿ ವರದಿ ನೀಡಿದ ನಂತರ ತೀರ್ಮಾನಿಸಲಾಗುವುದು ಎಂದರು.

ಇದೇ ವೇಳೆ ಸರ್ಕಾರಿ ನೌಕರರ ಕುಟುಂಬದ ಆರೋಗ್ಯ ಕಾಪಾಡಲು ಕರ್ನಾಟಕ ಜ್ಯೋತಿ ಸಂಜೀವಿನಿ ಯೋಜನೆಯನ್ನು ಕೂಡಲೇ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿದರು.

SCROLL FOR NEXT