ರಾಜ್ಯ

ಹುಬ್ಬಳ್ಳಿ: ಮೂರು ದಶಕಗಳ ಹಿಂದೆ ರಾಮಮಂದಿರ ಚಳುವಳಿಯಲ್ಲಿ ಭಾಗಿಯಾಗಿದ್ದ ಹಿಂದೂ ಕಾರ್ಯಕರ್ತರಿಗೆ ಬಂಧನದ ಭೀತಿ!

Srinivas Rao BV

ಹುಬ್ಬಳ್ಳಿ: ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ದೇಶದಲ್ಲಿ ಸಂಭ್ರಮಾಚರಣೆ ಮನೆ ಮಾಡಿರುವಾಗ ಕರ್ನಾಟಕ ರಾಜ್ಯದಲ್ಲಿ ಪೊಲೀಸರು ರಾಮಮಂದಿರಕ್ಕಾಗಿ ಹೋರಾಟ ನಡೆಸಿದ್ದ ಕಾರ್ಯಕರ್ತರ ವಿರುದ್ಧದ ಹಳೆಯ ಪ್ರಕರಣಗಳಿಗೆ ಮರು ಜೀವ ನೀಡಿದೆ.

3 ದಶಕಗಳ ಹಿಂದೆ ರಾಮ ಮಂದಿರಕ್ಕಾಗಿ ನಡೆದ ಚಳುವಳಿಯಲ್ಲಿ ಭಾಗಿಯಾಗಿದ್ದ ಕಾರ್ಯಕರ್ತರ ವಿರುದ್ಧದ ಪ್ರಕರಣಗಳನ್ನು ತನಿಖೆ ನಡೆಸುತ್ತಿದೆ.

ಪೊಲೀಸ್ ಇಲಾಖೆ ವಿಶೇಷ ತಂಡವನ್ನು ರಚಿಸಿದ್ದು, ಹಿಂಸಾಚಾರ, ಕೋಮು ಘರ್ಷಣೆಗಳಿಗೆ ಕಾರಣವಾಗಿದ್ದ 1992 ರ ರಾಮ ಮಂದಿರ ಚಳುವಳಿಯಲ್ಲಿ ಭಾಗಿಯಾಗಿದ್ದ ಆರೋಪಿಗಳ ಪಟ್ಟಿಯನ್ನು ತಯಾರಿಸಿದೆ.

ಹುಬ್ಬಳ್ಳಿ ಪೊಲೀಸರು 1992 ರ ಡಿ.05 ರಂದು ಅಲ್ಪಸಂಖ್ಯಾತ ಸಮುದಾಯದವರಿಗೆ ಸೇರಿದ ಅಂಗಡಿಯೊಂದಕ್ಕೆ ಹುಬ್ಬಳ್ಳಿಯಲ್ಲಿ ಬೆಂಕಿ ಹಚ್ಚಿದ್ದ ಆರೋಪದಡಿ ಶ್ರೀಕಾಂತ್ ಪೂಜಾರಿ ಎಂಬಾತನನ್ನು ಬಂಧಿಸಲಾಗಿದೆ. ಪೂಜಾರಿ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇತರ ಎಂಟು ಆರೋಪಿಗಳಿಗಾಗಿ ಹುಡುಕುತ್ತಿದ್ದಾರೆ. ಪೂಜಾರಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಂತೆಯೇ, ಹುಬ್ಬಳ್ಳಿ ಪೊಲೀಸರು 1992 ಮತ್ತು 1996 ರ ನಡುವೆ ನಡೆದ ಕೋಮು ಘರ್ಷಣೆಗಳಲ್ಲಿ ಬೇಕಾಗಿದ್ದಾರೆ ಎನ್ನಲಾದ 300 ಆರೋಪಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಆರೋಪಿಗಳು ಈಗ 70 ರ ಆರಂಭದಲ್ಲಿ ಮತ್ತು 70 ರ ಆಸುಪಾಸಿನಲ್ಲಿದ್ದಾರೆ ಮತ್ತು ಅವರಲ್ಲಿ ಅನೇಕರು ದೂರ ಹೋಗಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಅನೇಕ ಆರೋಪಿಗಳು ಈಗ ಪ್ರಮುಖ ಹುದ್ದೆಗಳಲ್ಲಿದ್ದು, ಅವರ ವಿರುದ್ಧ ಕಾನೂನು ಕ್ರಮದ ಪರಿಣಾಮವನ್ನೂ ಪೊಲೀಸರು ಪರಿಗಣಿಸುತ್ತಿದ್ದಾರೆ. ಈ ಸಂಬಂಧ ಪ್ರಕರಣಗಳನ್ನು ತನಿಖೆಗೆ ವಹಿಸುವಂತೆ ಪೊಲೀಸ್ ಇಲಾಖೆಗೆ ಕಾಂಗ್ರೆಸ್ ಸರ್ಕಾರ ಸೂಚಿಸಿದೆ ಎನ್ನಲಾಗಿದೆ.

ರಾಮಜನ್ಮ ಭೂಮಿ ಆಂದೋಲನದ ಅನೇಕ ವ್ಯಕ್ತಿಗಳು ಈಗ ಪ್ರಮುಖ ಬಿಜೆಪಿ ನಾಯಕರಾಗಿದ್ದಾರೆ ಮತ್ತು ಬಿಜೆಪಿ ಅಧಿಕಾರದಲ್ಲಿದ್ದಾಗ ಪ್ರಮುಖ ನಾಯಕರ ಮೇಲಿನ ಪ್ರಕರಣಗಳನ್ನು ಕೈಬಿಡಲಾಯಿತು ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಸರ್ಕಾರದ ಈ ಕ್ರಮದ ವಿರುದ್ಧ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದು, ಪ್ರಚಾರ ಸಹಿಸದ ಕಾಂಗ್ರೆಸ್ ಸರ್ಕಾರ ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳಲು ಇಂತಹ ಕ್ರಮಕ್ಕೆ ಮುಂದಾಗಿದೆ ಎಂದು ಆರೋಪಿಸಿದ್ದಾರೆ. 

ಈ ಬೆಳವಣಿಗೆ ರಾಜ್ಯದಲ್ಲಿ ಭಾರೀ ವಿವಾದಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಇದೆ. 1990 ರ ದಶಕದಲ್ಲಿ ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಪ್ರಾರಂಭಿಸಿದ ರಾಮ ಜನ್ಮಭೂಮಿ ರಥ ಯಾತ್ರೆಯ ಚಳವಳಿಯಲ್ಲಿ ಕರ್ನಾಟಕವು ದೊಡ್ಡ ಹಿಂಸಾಚಾರಕ್ಕೆ ಸಾಕ್ಷಿಯಾಯಿತ್ತು.

SCROLL FOR NEXT