ವಿಜಯಪುರ: ಭಾರತವನ್ನು ಹಿಂದೂ ದೇಶವನ್ನಾಗಿ ಮಾಡಲಾಗುತ್ತಿದೆ ಎಂಬಂತಹ ಹೇಳಿಕೆಗಳನ್ನು ನೀಡುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಟ್ರಸ್ಟಿ, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ವಿಜಯಪುರದಲ್ಲಿ ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪೇಜಾವರ ಶ್ರೀಗಳು, ‘ಭಾರತ ಹಿಂದೂ ರಾಷ್ಟ್ರ ಮಾಡಲಾಗುತ್ತಿದೆ’ ಎಂದು ಹೇಳಿರುವ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಎಂಎಲ್ ಸಿ ಬಿ.ಕೆ. ಹರಿಪ್ರಸಾದ್ ಅವರು " ಗೋದ್ರಾ ಮಾದರಿಯ ಘಟನೆ ಮರುಕಳಿಸುತ್ತಿದೆ" ಎಂಬ ಹೇಳಿಕೆಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಬಿಜೆಪಿ ಹಾಗೂ ಆರ್ ಎಸ್ ಎಸ್ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುತ್ತಿದ್ದಾರೆ ಸಿಎಂ ಪುತ್ರ ಯತೀಂದ್ರ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು ಭಾರತವನ್ನು ಹಿಂದೂರಾಷ್ಟ್ರ ಮಾಡಿದರೆ ಪಾಕಿಸ್ತಾನ ಮಾಡಲು ಯಾರೋ ಸಿದ್ದತೆ ನಡೆಸುತ್ತಿದ್ದಾರೋ ಏನೋ? ಅಂತಹ ಸಿದ್ಧತೆ ಇಲ್ಲಿ ನಡೆಯುತ್ತಿದೆ ಎಂಬುದರ ಮುನ್ಸೂಚನೆ ಅವರು ಕೊಡುತ್ತಿದ್ದಾರೆ ಅವರು. ಈ ಹೇಳಿಕೆ ಸರಿಯಲ್ಲ. ಭಾರತ ಹಿಂದೂ ರಾಷ್ಟ್ರವಾಗಿಯೇ ಇತ್ತು. ಜಾತಿ ಧರ್ಮ ಪಂಗಡ ಎಂದು ಮೀಸಲಿರದೆ ಎಲ್ಲರನ್ನ ಅಪ್ಪಿ ಒಪ್ಪಿಕೊಂಡ ದೇಶ ಭಾರತ ಎಂದು ಪ್ರತಿಪಾದಿಸಿದರು.
ಇದನ್ನೂ ಓದಿ: ಧರ್ಮದ ಹಿಂದೆ ಹೋದರೆ ಪಾಕಿಸ್ತಾನ- ಆಫ್ಘಾನಿಸ್ತಾನದಂತೆ ಭಾರತವೂ ದಿವಾಳಿಯಾಗುತ್ತದೆ: ಯತೀಂದ್ರ ಸಿದ್ದರಾಮಯ್ಯ
ಮತ್ತೆ ಗೋದ್ರಾದಂತ ಘಟನೆ ನಡೆಯಬಹುದು ಎಂಬ ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ಮಾತನಾಡಿ ರಾಮ ಭಕ್ತರನ್ನ ಹೆದರಿಸುವ ಭರದಲ್ಲಿ ದೇಶವನ್ನೇ ಹೆದರಿಸುತ್ತಿರುವ ಇವರೇ ಭಯೋತ್ಪಾದಕರು. ಅಂತಹ ಘಟನೆ ನಡೆಯುವ ಬಗ್ಗೆ ಮಾಹಿತಿ ಇದ್ದರೆ ಇಲಾಖೆಗೆ ಹೋಗಿ ಯಾಕೆ ಹೇಳುತ್ತಿಲ್ಲ? ಇವರು ಯಾರನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ವಿದ್ವಂಸಕ ಕೃತ್ಯ ಮಾಡಲು ಹೊರಟಿರುವವರ ಬಗ್ಗೆ ಕೇಳಿದರೆ ಹೇಳುತ್ತೇವೆ ಎಂಬ ಹೇಳಿಕೆ ಸರಿಯಲ್ಲ. ಕಾರಣ ವಿದ್ವಂಸಕ ಕೃತ್ಯ ನಡೆಯಲಿ ಎಂಬ ಅರ್ಥ. ಹಾಗಾದ್ರೆ ಇವರು ಪ್ರಜೆಗಳನ್ನು ರಕ್ಷಣೆ ಮಾಡುತ್ತಿದ್ದಾರೋ ಅಥವಾ ವಿದ್ವಾಂಸಕ ಕೃತ್ಯಗಳನ್ನ ಮಾಡುವವರನ್ನು ರಕ್ಷಣೆ ಮಾಡುತ್ತಿದ್ದಾರೋ ಎಂದು ಕುಟುಕಿದರು.
ಇದನ್ನೂ ಓದಿ: ಗೋಧ್ರಾ ದುರಂತ ರೀತಿ ಮತ್ತೊಂದು ಘಟಿಸಬಹುದು, ಅಯೋಧ್ಯೆಗೆ ಹೋಗುವವರಿಗೆ ಸರ್ಕಾರವೇ ಭದ್ರತೆ ಒದಗಿಸಬೇಕು: ಬಿ ಕೆ ಹರಿಪ್ರಸಾದ್
ಶ್ರೀರಾಮ ಮಂದಿರ ನಿರ್ಮಾಣಕ್ಕೆ ಲಕ್ಷ ಲಕ್ಷ ದೇಣಿಗೆ ಕೊಟ್ಟ ಸಚಿವ, ಶಾಸಕರಿಗೆ ಗಣ್ಯರಿಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನವಿಲ್ಲ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಇಂತಹ ನಡವಳಿಕೆ ಅನಪೇಕ್ಷಿತ" ಎಂದು ಹೇಳಿದ್ದಾರೆ. ರಾಮಮಂದಿರ ವಿವಾದ 500 ವರ್ಷಗಳ ಹಿಂದೆಯೇ ಆರಂಭವಾಗಿದ್ದು, ಈ ಕುರಿತು ಹಲವು ಬಾರಿ ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಲಾಗಿದೆ ಎಂದರು.
ದಿವಂಗತ ಪ್ರಧಾನಿ ರಾಜೀವ್ ಗಾಂಧಿ ವಿವಾದಿತ ಭೂಮಿಯಲ್ಲಿ ಪೂಜೆಗೆ ಅವಕಾಶ ನೀಡಿದ ಬಗ್ಗೆ ವಾದಕ್ಕೆ ಪ್ರತಿಕ್ರಿಯಿಸಿದ ಪೇಜಾವರ ಶ್ರೀಗಳು, ಆ ಕ್ರಮದ ಮಹತ್ವವನ್ನು ಪ್ರಶ್ನಿಸಿದರು. ರಾಮರಾಜ್ಯವನ್ನು ಸ್ಥಾಪಿಸದಿದ್ದಕ್ಕಾಗಿ ಹೊಣೆ ಹೊರಲು ಸಿದ್ಧರಿದ್ದಾರಾ ಎಂದು ಸವಾಲು ಹಾಕಿದರು. ಲಾಭಕ್ಕಾಗಿ ಕ್ರೆಡಿಟ್ ತೆಗೆದುಕೊಳ್ಳುವ ಮತ್ತು ಇತರರನ್ನು ದೂಷಿಸುವ ಮನೋಭಾವ ಬಿಡಬೇಕೆಂದು ಸಲಹೆ ನೀಡಿದ್ದಾರೆ.
ರಾಮಮಂದಿರ ಉದ್ಘಾಟನೆ ವೇಳೆ ಕರಸೇವಕನ ಬಂಧನದ ಕುರಿತು ಪ್ರತಿಕ್ರಿಯಿಸಿದ ಪೇಜಾವರ ಶ್ರೀಗಳು, ತಪ್ಪಿತಸ್ಥರನ್ನು ಶಿಕ್ಷಿಸುವುದು ಸಮರ್ಥನೀಯ ಎಂದು ಒಪ್ಪಿಕೊಂಡರು, ಆದರೆ ಸಮಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಶ್ರೀಗಳು ಇದು ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ಹೇಳಿದ್ದಾರೆ.