ರಾಜ್ಯ

ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ: ಧಾರವಾಡ ರೈತರಿಂದ 110 ಇಂಚು ಉದ್ದದ ಎರಡು ಕಂಬಳಿಗಳ ಕಾಣಿಕೆ!

Nagaraja AB

ಹುಬ್ಬಳ್ಳಿ: ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆ ಇನ್ನೇನು ಕೆಲವೇ ದಿನಗಳಲ್ಲಿ ಸಮೀಪಿಸುತ್ತಿರುವಂತೆಯೇ ಭಕ್ತರು ಹೊಸ ದೇಗುಲಕ್ಕೆ ಕಾಣಿಕೆಗಳನ್ನು ನೀಡಲು ಮುಂದಾಗಿದ್ದಾರೆ.

ಧಾರವಾಡದಲ್ಲಿ ರೈತ ಕುಟುಂಬವೊಂದು ಕೈಯಿಂದ ನೇಯ್ದ ಎರಡು ಕಂಬಳಿಗಳನ್ನು ಸಿದ್ಧಪಡಿಸಿದ್ದು, ಉದ್ಘಾಟನಾ ಸಮಾರಂಭದಲ್ಲಿ ಹೊಸ ದೇವಾಲಯಕ್ಕೆ ಅರ್ಪಿಸಲು ಮುಂದಾಗಿದೆ. ಜನವರಿ 22 ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ದಿನದಂದು ಕೇಂದ್ರ ಸಚಿವ ಮತ್ತು ಧಾರವಾಡ ಸಂಸದ ಪ್ರಲ್ಹಾದ ಜೋಶಿ ಅವರು ಕಂಬಳಿಗಳನ್ನು ಅಯೋಧ್ಯೆಯಲ್ಲಿ ಧಾರ್ಮಿಕ ಸಮಿತಿಗೆ ಹಸ್ತಾಂತರಿಸಲಿದ್ದಾರೆ.

ಶನಿವಾರ ಧಾರವಾಡದ ಕಮಲಾಪುರ ಕ್ಷೇತ್ರದ ರೈತ ಸುಭಾಷ ರಾಯಣ್ಣ, ಕೇಂದ್ರ ಸಚಿವ ಜೋಶಿ ಅವರಿಗೆ ಕಂಬಳಿ ಹಸ್ತಾಂತರಿಸಲಿದ್ದಾರೆ. ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮದ ದಿನಾಂಕ ಘೋಷಿಸಿದಾಗಿನಿಂದ ನಮ್ಮ ಕಡೆಯಿಂದ ಏನನ್ನಾದರೂ ಕಾಣಿಕೆಯಾಗಿ ನೀಡಲು ಬಯಸಿದ್ದೆ. ನಾವು ನುರಿತ ಕಂಬಳಿ ನೇಕಾರರಾಗಿದ್ದು, ಮೂರು ತಲೆಮಾರುಗಳಿಂದ ನಾವು ಕೆಲಸ ಮಾಡುತ್ತಿದ್ದೇವೆ. ಕಾರ್ಖಾನೆಯಲ್ಲಿ ತಯಾರಿಸಿದ ಕಂಬಳಿಗಳಿಗಿಂತ ಭಿನ್ನವಾಗಿ, ಕೈಯಿಂದ ತಯಾರಿಸುವ ಕಂಬಳಿಗಳನ್ನು ಸ್ಥಳೀಯವಾಗಿ ಕರಿ ಕಂಬಳಿ ಎಂದು ಕರೆಯಲಾಗುತ್ತದೆ ಮತ್ತು ಸಾಂಪ್ರದಾಯಿಕವಾಗಿ ಕಾಲಕಾಲಕ್ಕೆ ವಿವಿಧ ಮಠಗಳು ಮತ್ತು ದೇವಾಲಯಗಳಿಗೆ ನೀಡಲಾಗುತ್ತದೆ ಎಂದು ಸುಭಾಷ್ ರಾಯಣ್ಣ ವಿವರಿಸಿದರು.

ಕಂಬಳಿಗಳು 110 ಇಂಚು ಉದ್ದ ಮತ್ತು 54 ಇಂಚು ಅಗಲವಿದೆ. ಹೊದಿಕೆಯ ಉದ್ದಕ್ಕೂ ಕೇಸರಿ ಬಣ್ಣದ ದಾರವನ್ನು ಕಟ್ಟಲಾಗುತ್ತದೆ, ಇದು ಸಾಮಾನ್ಯವಾದವುಗಳಿಗಿಂತ ಹೆಚ್ಚು ವಿಶೇಷವಾಗಿ ಕಾಣುತ್ತದೆ. ಸಾಮಾನ್ಯವಾಗಿ ದೇವರು ಮತ್ತು ದೇವತೆಗಳಿಗೆ ಅರ್ಪಿಸುವ ಕಂಬಳಿಗಳನ್ನು ರೈತರು ನಿರ್ದಿಷ್ಟ ದೇವರ ಹೆಸರನ್ನಿಟ್ಟು ನೇಯುತ್ತಾರೆ. ಕೇಂದ್ರ ಸಚಿವರಿಂದ ದೃಢೀಕರಣ ಪಡೆದ ನಂತರವೇ  ಕಂಬಳಿಗಳನ್ನು ನೇಯಲು ಪ್ರಾರಂಭಿಸಿದ್ದೇವೆ ಎಂದು ರಾಯಣ್ಣ ಹೇಳಿದರು.

SCROLL FOR NEXT