ಬೆಂಗಳೂರು: ರಾಜ್ಯದ ಎಲ್ಲಾ ಸಕಾಲ ಸೇವೆಗಳನ್ನು ಶೀಘ್ರದಲ್ಲೇ ಡಿಜಿಟಲೀಕರಣಗೊಳಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಬುಧವಾರ ಹೇಳಿದ್ದಾರೆ.
ಬುಧವಾರ ಸಕಾಲ ಸೇವೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ‘ಕಂದಾಯ ಇಲಾಖೆಯಲ್ಲಿ ಬಹುತೇಕ ಸೇವೆಗಳನ್ನು ಆನ್ಲೈನ್ ರೂಪದಲ್ಲಿ ಒದಗಿಸಲಾಗುತ್ತಿದೆ. ಆ ಮಾದರಿಯನ್ನು ಸಕಾಲ ಸೇವೆಗಳಲ್ಲಿ ಏಕೆ ಅನುಷ್ಠಾನಕ್ಕೆ ತರಬಾರದು? ಸಕಾಲ ಅರ್ಜಿಗಳನ್ನೂ ಆನ್ಲೈನ್ ಮೂಲಕ ಸ್ವೀಕರಿಸುವ ಪ್ರಕ್ರಿಯೆ ಆರಂಭಿಸಬೇಕು’ ಎಂದು ನಿರ್ದೇಶನ ನೀಡಿದರು.
ಸರ್ಕಾರ ಜನರ ತಲುಪಲು ಸಕಾಲ ಉತ್ತಮ ಮಾರ್ಗವಾಗಿದೆ. ಹೀಗಾಗಿ ಯಾವುದೇ ವಿಳಂಬವಿಲ್ಲದೆ ಸೇವೆಗಳನ್ನು ಡಿಜಿಟಲೀಕರಣಗೊಳಿಸಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಸಕಾಲ ಸೇವೆಗಳು ಡಿಜಿಟಲೀಕರಣಗೊಂಡರೆ ಜನರು ತಮ್ಮ ಸ್ಮಾರ್ಟ್ಫೋನ್ಗಳಿಂದ ಸಕಾಲ ಸೇವೆಗಳಿಗೆ ಅರ್ಜಿ ಸಲ್ಲಿಸಬಹುದು. ಎಂದು ಹೇಳಿದರು.
ಇದನ್ನೂ ಓದಿ: ಜಿಎಸ್ಟಿ ಸಂಗ್ರಹದಲ್ಲಿ ಕರ್ನಾಟಕ ವಾರ್ಷಿಕ 45,000 ಕೋಟಿ ರೂ. ಕಳೆದುಕೊಳ್ಳುತ್ತಿದೆ: ಸಚಿವ ಕೃಷ್ಣ ಬೈರೇಗೌಡ
ಮುಖ್ಯಮಂತ್ರಿಗಳ ಇತ್ತೀಚಿನ ಜನತಾದರ್ಶನ ಕಾರ್ಯಕ್ರಮದಲ್ಲಿ ಸಕಾಲ ಸೇವೆ ವಿಳಂಬವಾಗುತ್ತಿರುವ ಬಗ್ಗೆ ಹಲವರು ದೂರು ನೀಡಿದ್ದಾರೆ. ಸಕಾಲ ಸೇವೆಗಳು ನಿಗದಿತ ಸಮಯದಲ್ಲಿ ಜನರಿಗೆ ತಲುಪುವಂತೆ ಮಾಡಬೇಕು. ‘ಪ್ರತಿ ಹಳ್ಳಿಯಲ್ಲೂ ಈಗ ಸೈಬರ್ ಕೇಂದ್ರಗಳಿವೆ. ಗ್ರಾಮ-ಒನ್ ಸೇವೆಯನ್ನು ಮತ್ತಷ್ಟು ವಿಸ್ತರಿಸುವ ಮತ್ತು ಮೊಬೈಲ್ ಮೂಲಕವೂ ಸೇವೆ ಒದಗಿಸುವ ಉದ್ದೇಶವಿದೆ. ಜನರು ಮೊಬೈಲ್ ಮೂಲಕವೇ ಸಕಾಲ ಅರ್ಜಿ ಸಲ್ಲಿಸಿ ಸೇವೆಯನ್ನೂ ಪಡೆಯಬಹುದು. ಸಕಾಲ ಸೇವೆ ಡಿಜಿಟಲೀಕರಣಗೊಂಡರೆ ಡಿಜಿಟಲ್ ಹೆಜ್ಜೆ ಗುರುತಿನ ಮೂಲಕ ಅರ್ಜಿ ಎಲ್ಲಿದೆ? ವಿಳಂಬಕ್ಕೆ ಕಾರಣವೇನು? ಎಂಬ ಕುರಿತ ಮಾಹಿತಿ ನಮಗೂ ಲಭ್ಯವಾಗುತ್ತದೆ. ಹೀಗಾಗಿ ಮುಂದಿನ 5 ವರ್ಷದಲ್ಲಿ ಸಕಾಲ ಸಂಪೂರ್ಣ ಡಿಜಿಟಲಿಕರಣ ಆಗಬೇಕು’ ಎಂದು ಸೂಚಿಸಿದರು.
500 ಕ್ಕೂ ಹೆಚ್ಚು ಹೊಸ ಸೇವೆಗಳನ್ನು ಶೀಘ್ರದಲ್ಲೇ ಸಕಾಲದ ಅಡಿಯಲ್ಲಿ ಸೇರಿಸುವ ಕುರಿತು ಚಿಂತನೆಗಳು ನಡೆಯುತ್ತಿವೆ. ಈಗಾಗಲೇ ಹಲವು ಇಲಾಖೆಗಳು ಸರ್ಕಾರವನ್ನು ಸಂಪರ್ಕಿಸಿವೆ ಎಂದು ಹೇಳಿದರು.