ರಾಜ್ಯ

ಚಿಕ್ಕಮಗಳೂರು: ಗೇರುಮರಡಿಯಲ್ಲಿ ದೇವಾಲಯ ಪ್ರವೇಶಿಸಿ ದಲಿತರಿಂದ ಪೂಜೆ ಸಲ್ಲಿಕೆ!

Shilpa D

ಚಿಕ್ಕಮಗಳೂರು: ಗೇರುಮರಡಿ ಗ್ರಾಮಸ್ಥರು ದಲಿತರಿಗೆ ಗ್ರಾಮ ಪ್ರವೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ದಲಿತ ಸಂಘಟನೆಗಳ ಮುಖಂಡರು ಮಂಗಳವಾರ ತರೀಕೆರೆಗೆ ಆಗಮಿಸಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.  ಅದಾದ ನಂತರ ಬಿಗಿ ಪೊಲೀಸ್ ಭದ್ರತೆಯಲ್ಲಿ ಗ್ರಾಮಕ್ಕೆ ನುಗ್ಗಿ ರಂಗನಾಥ ಸ್ವಾಮಿ ದೇವಸ್ಥಾನದ ಬಾಗಿಲು ಒಡೆದು ಪೂಜೆ ಸಲ್ಲಿಸಿದರು.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಗೇರುಮರಡಿಯಲ್ಲಿ ಗೊಲ್ಲ ಸಮುದಾಯದ ಬೀದಿಗೆ ಬಂದಿದ್ದಕ್ಕೆ ದಲಿತ ಯುವಕನ ಮೇಲೆ ಹಲ್ಲೆ ನಡೆದಿತ್ತು. ಅಲ್ಲದೆ, ದಲಿತರು ತಮ್ಮ ಬೀದಿಗೆ ಪ್ರವೇಶಿಸಿದ್ದರಿಂದ ಅಶುದ್ಧವಾಗಿದೆ ಎಂದು ಗ್ರಾಮದ ರಂಗನಾಥ ಸ್ವಾಮಿ ದೇವಾಲಯಕ್ಕೆ ಗೊಲ್ಲ ಸಮುದಾಯದ ಮುಖಂಡರು ಬೀಗ ಹಾಕಿದ್ದರು. ಇದು, ದಲಿತರ ಮೇಲಿನ ದೌರ್ಜನ್ಯದ ಪರಮಾವಧಿಯಾಗಿ ಕಾಣಿಸಿಕೊಂಡಿತ್ತು.

ಘಟನೆಯಿಂದಾಗಿ ಗೊಲ್ಲ ಸಮುದಾಯದ ವಿರುದ್ಧ ತರೀಕೆರೆಯಲ್ಲಿ ದಲಿತ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದ್ದರು. ಬುಧವಾರ ಪೊಲೀಸ್ ಭದ್ರತೆಯಲ್ಲಿ ಗ್ರಾಮಕ್ಕೆ ಬಂದ ದಲಿತ ಮುಖಂಡರು, ಗ್ರಾಮದ ರಂಗನಾಥ ಸ್ವಾಮಿ ದೇವಸ್ಥಾನದ ಬಾಗಿಲು ತೆಗೆದು, ಪೂಜೆ ಸಲ್ಲಿಸಿದ್ದಾರೆ.

ಜನವರಿ 1ರಂದು ಗ್ರಾಮದಲ್ಲಿ ಹಳೆ ಮನೆ ಕೆಡವುವ ಕೆಲಸಕ್ಕೆ ದಲಿತ ಯುವಕ ಮಾರುತಿ ಬಂದಿದ್ದರು. ಈ ವೇಳೆ, ಕೇಬಲ್ ತಂತಿಗೆ ಜೆಸಿಬಿ ತಗುಲಿ ತಂತಿ ತುಂಡಾಗಿತ್ತು. ಇದನ್ನೇ ನೆಪವಾಗಿಟ್ಟುಕೊಂಡು ಗೊಲ್ಲ ಸಮುದಾಯದ ಗುಂಪೊಂದು ಮಾರುತಿ ಮೆಲೆ ಹಲ್ಲೆ ನಡೆಸಿ, ಜೇಬಿನಲ್ಲಿದ್ದ ಹಣವನ್ನು ಕಿತ್ತುಕೊಂಡಿದ್ದರು. ಮಾತ್ರವಲ್ಲದೆ, ಗ್ರಾಮಕ್ಕೆ ಬಂದಿದ್ದಕ್ಕಾಗಿ 1 ಲಕ್ಷ ರೂ. ದಂಡ ಪಾವತಿಸುವಂತೆ ಒತ್ತಾಯಿಸಿದ್ದರು.

ಪ್ರಕರಣ ಸಂಬಂಧ ತರೀಕೆರೆ ಪೊಲೀಸ್‌ ಠಾಣೆಯಲ್ಲಿ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ 15 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮೌಢ್ಯದಲ್ಲಿ ಗೊಲ್ಲ ಸಮುದಾಯ

ಗೊಲ್ಲ ಸಮುದಾಯದಲ್ಲಿ ಮೂಢನಂಬಿಕೆ ಮನೆ ಮಾಡಿದೆ. ಹಲವಾರು ಅನಿಷ್ಠ ಪದ್ದತಿಗಳನ್ನು ಇಂದಿಗೂ ಸಮುದಾಯ ಆಚರಿಸುತ್ತಿದೆ. ಇದರಲ್ಲಿ ಸಮುದಾಯ ಹೆಣ್ಣು ಮಕ್ಕಳ ಮೇಲಿನ ಶೋಷಣೆಯನ್ನೂ ಹೇಳತೀರದು. ಹೆಣ್ಣು ಮಕ್ಕಳು ಪ್ರೌಢಾವಸ್ಥೆಗೆ ಬಂದ ಸಮಯದಲ್ಲಿ, ಮುಟ್ಟಿನ ಸಂದರ್ಭದಲ್ಲಿ ಹಾಗೂ ಮಗುವಿಗೆ ಜನ್ಮವಿತ್ತ ಸಮಯದಲ್ಲಿ ಮಹಿಳೆಯರನ್ನು ಊರಿನ ಹೊರಡೆ ಗುಡಿಸಲಿನಲ್ಲಿ ಇರಿಸಲಾಗುತ್ತದೆ. ಹೆಣ್ಣು ಮಕ್ಕಳಲ್ಲಾಗುವ ನೈಸರ್ಗಿಕ ಕ್ರಿಯೆಯನ್ನು ಸಮುದಾಯವು ಅಶುದ್ಧವೆಂದು ಭಾವಿಸುತ್ತದೆ.

SCROLL FOR NEXT