ಬೆಂಗಳೂರು: ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕದ ಸ್ತಬ್ಧಚಿತ್ರ ನಿರಾಕರಣೆ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪತ್ರವನ್ನು ಫೋಸ್ಟ್ ಮಾಡಿರುವ ಮುಖ್ಯಮಂತ್ರಿ, 7 ಕೋಟಿ ಕನ್ನಡಿಗರ ಆಳವಾದ ಭಾವನೆಯನ್ನು ವ್ಯಕ್ತಪಡಿಸಿದ್ದೇನೆ. ಗಣರಾಜ್ಯೋತ್ಸವ ಪರೇಡ್ನಲ್ಲಿ ಕರ್ನಾಟಕದ ಸ್ತಬ್ಧಚಿತ್ರವನ್ನು ನಿರಾಕರಿಸುವುದು ಕೇವಲ ಪ್ರಮಾದವಲ್ಲ; ಇದು ನಮ್ಮ ರಾಜ್ಯದ ಹೆಮ್ಮೆಗೆ ಧಕ್ಕೆಯಾಗಿದೆ. ನಮ್ಮ ಸಾಧನೆಗಳು ರಾಷ್ಟ್ರೀಯ ವೇದಿಕೆಗೆ ಅರ್ಹವಾಗಿವೆ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.
ಸತತವಾಗಿ ಕಳೆದ 14 ವರ್ಷಗಳಿಂದ ದೆಹಲಿಯ ಕರ್ತವ್ಯಪಥದಲ್ಲಿ ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕ ಪಾಲ್ಗೊಂಡು ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ. 2005ರಲ್ಲಿ ಭಗವಾನ್ ಬಾಹುಬಲಿ ಮಸ್ತಾಭಿಷೇಕ, 2008ರಲ್ಲಿ ಹೊಯ್ಸಳ, 2011ರಲ್ಲಿ ಬೀದರ್ ನ ಬಿದರಿ ಕಲೆ, 2012ರಲ್ಲಿ ಭೂತಾರಾಧನೆ, 2015ರಲ್ಲಿ ಚನ್ನಪಟ್ಟಣದ ಅಟಿಕೆಗಳು, 2022ರಲ್ಲಿ ಸಾಂಪ್ರದಾಯಿಕ ಕಲೆಗಳ ಸ್ತಬ್ಧಚಿತ್ರಗಳಿಗೆ ಪ್ರತಿಷ್ಠಿತ ಬಹುಮಾನ ಸಿಕ್ಕಿದೆ. ಪ್ರತಿಯೊಂದು ಸ್ತಬ್ಧಚಿತ್ರಗಳು ನಾಡಿನ ಶ್ರೀಮಂತ ಸಂಸ್ಕೃತಿ, ಸಂಪ್ರದಾಯವನ್ನು ತೋರಿಸುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: 7 ಕೋಟಿ ಕನ್ನಡಿಗರಿಗೆ ಅವಮಾನ: ಗಣರಾಜ್ಯೋತ್ಸವ ಪರೇಡ್ಗೆ ರಾಜ್ಯದ ಟ್ಯಾಬ್ಲೋ ಸೇರಿಸದ ಕೇಂದ್ರದ ವಿರುದ್ಧ ಸಿಎಂ ವಾಗ್ದಾಳಿ
ಈ ಬಾರಿ (2024) ಬ್ರ್ಯಾಂಡ್ ಬೆಂಗಳೂರು ಥೀಮ್ ನಮ್ಮದಾಗಿತ್ತು. ರಕ್ಷಣಾ ಸಚಿವಾಲಯ ಕರೆದ ಎಲ್ಲ ಸಭೆಗಳಲ್ಲಿ ಕರ್ನಾಟಕದ ಪ್ರತಿನಿಧಿಗಳು ಭಾಗಿಯಾಗಿದ್ದರು. ಕೊನೆಯ ಸುತ್ತಿನ ಸಭೆ ಬಳಿಕ ಕರ್ನಾಟಕದ ಸ್ಥಬ್ತಚಿತ್ರ ಪರಿಗಣಿಸಿಲ್ಲ. ಸ್ತಬ್ಧ ಚಿತ್ರದ ಧ್ಯೇಯ ಅಪ್ರತಿಮ ನಗರ ಬೆಂಗಳೂರು ಹೇಗೆ ಅಭಿವೃದ್ಧಿಯಲ್ಲಿ ಪ್ರಗತಿ ಸಾಧಿಸಿದೆ ಮತ್ತು ಸಂಸ್ಕೃತಿ, ಸಂಪ್ರದಾಯದಲ್ಲಿ ದೃಢವಾಗಿ ಬೇರೂರಿದೆ ಎಂಬುದನ್ನು ಚಿತ್ರಿಸುತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.