ರಾಜ್ಯ

ಬೆಂಗಳೂರು: ಗವಿಗಂಗಾಧರೇಶ್ವರ ದೇಗುಲದ ಶಿವಲಿಂಗ ಸ್ಪರ್ಶಿಸಿದ ಸೂರ್ಯ ರಶ್ಮಿ!

Nagaraja AB

ಬೆಂಗಳೂರು: ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿಯಂದು ನಗರದ ಗವಿಪುರದ ಗವಿಗಂಗಾಧರೇಶ್ವರ ದೇಗುಲದಲ್ಲಿ ಇಂದು ಸಂಜೆ ವಿಸ್ಮಯವೊಂದು ನಡೆಯಿತು. ಸೂರ್ಯನ ಬೆಳಕು ನೇರವಾಗಿ ಶಿವಲಿಂಗದ ಮೇಲೆ ಬಿದ್ದಿತು. ಸೂರ್ಯ ದಕ್ಷಿಣ ಪಥದಿಂದ ಉತ್ತರಕ್ಕೆ ಪಥ ಸಂಚಲನ ಮಾಡುವ ವೇಳೆ  ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶಿಸಿತು. 

ಸಂಜೆ 5.20 ರಿಂದ 5.23 ನಿಮಿಷದವರೆಗೆ ಸೂರ್ಯರಶ್ಮಿ ನಂದಿಕೊಂಬಿನ ಮೂಲಕ ಹಾದುಹೋಗಿ ಶಿವನಿಗೆ ನಮಿಸಿತು. ಅಸಂಖ್ಯಾತ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಈ ಕೌತುಕವನ್ನು ಕಣ್ತುಂಬಿಕೊಂಡರು. ಈ ವಿಸ್ಮಯವನ್ನು ನೋಡಲು ದೇವಾಲಯದ ಹೊರಭಾಗದಲ್ಲಿ ಎರಡು ಎಲ್‌ಇಡಿ ಹಾಗೂ ಐದು ಟಿವಿಗಳ ವ್ಯವಸ್ಥೆ ಮಾಡಲಾಗಿತ್ತು. 

ಈ ವೇಳೆ ಅರ್ಚಕರನ್ನು ಬಿಟ್ಟರೆ ಇನ್ನುಳಿದ ಯಾರಿಗೂ ದೇವಸ್ಥಾನ ಒಳ ಪ್ರವೇಶಕ್ಕೆ ಅನುಮತಿ ನೀಡಲಾಗಿಲ್ಲ. ದೇವಸ್ಥಾನದಲ್ಲಿ ಹೋಮ, ಹವನಗಳು ನಡೆದವು. . ಅರ್ಚಕರು ಶಿವಲಿಂಗದ ಮೇಲೆ ಎಳನೀರು ಅಭಿಷೇಕ ಮಾಡಿದರು. ಕೆಲ ಸೆಕೆಂಡ್‌ಗಳ ಕಾಲ ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸಿ ಮರೆಯಾಯಿತು.

ಈ ವಿಶೇಷ ದಿನಕ್ಕಾಗಿ ಬೆಳ್ಳಗ್ಗೆ 5 ಗಂಟೆಯಿಂದಲೇ ಗಂಗಾಧರನಿಗೆ ವಿಶೇಷ ಪೂಜೆ ಆರಂಭವಾಗಿತ್ತು. ಗಂಗಾಧರನಿಗೆ ಪಂಚಾಭೀಷೇಕ, ಪುಷ್ಪಾಭಿಷೇಕ, ಮಹಮಂಗಳಾರತಿ‌ ಮಾಡಿದ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಸಾವಿರಾರು ಮಂದಿ ಭಕ್ತರು ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ, ಪುನಸ್ಕಾರಗಳೊಂದಿಗೆ ದೇವರ ದರ್ಶನ ಪಡೆದರು.
 

SCROLL FOR NEXT