ರಾಜ್ಯ

ಲೋಕಸಭೆ ಚುನಾವಣೆ ಮುಗಿದ ಕೂಡಲೇ ಬಿಬಿಎಂಪಿ ಚುನಾವಣೆ: ಡಿಕೆ.ಶಿವಕುಮಾರ್

Manjula VN

ಬೆಂಗಳೂರು: ಲೋಕಸಭೆ ಚುನಾವಣೆ ಮುಗಿದ ಕೂಡಲೇ ಬಿಬಿಎಂಪಿ ಹಾಗೂ ಇತರೆ ಚುನಾವಣೆಗಳನ್ನು ನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಮಂಗಳವಾರ ಹೇಳಿದರು.
 
ಅಸ್ಸಾಂನಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಅಡ್ಡಿಪಡಿಸಿದ್ದರ ವಿರುದ್ಧ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಡಿಕೆ.ಶಿವಕುಮಾರ್ ಅವರು, ಮೊದಲು ಲೋಕಸಭಾ ಚುನಾವಣೆ ನಡೆಯಲಿದೆ. ಈ ಚುನಾವಣೆ ಪೂರ್ಣಗೊಂಡ ಒಂದು ಅಥವಾ ಎರಡು ತಿಂಗಳುಗಳಲ್ಲಿ ಬಿಬಿಎಂಪಿ ಹಾಗೂ ಇತರೆ ಚುನಾವಣೆಗಳು ನಡೆಯಲಿವೆ. ಕಾರ್ಯಕರ್ತರು ಸಿದ್ಧರಾಗಿರಬೇಕು ಎಂದು ಹೇಳಿದರು.

ನಾವು 225 ವಾರ್ಡ್ ಗಳನ್ನು ರಚಿಸಿದ್ದೇವೆ. ಸಂಘಟನೆಯ ಆಧಾರದ ಮೇಲೆ ನ್ಯಾಯ ಒದಗಿಸಲಾಗುವುದು. ಕಾರ್ಯಕರ್ತರಿಗೂ ಅಧಿಕಾರ ನೀಡಲಾಗುವುದು. ಅದು ನಮ್ಮ ಕರ್ತವ್ಯ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. "ಬೆಂಗಳೂರಿನಲ್ಲಿ ನಾಲ್ಕು ಸ್ಥಾನಗಳಿದ್ದು, ಬೂತ್ ಮಟ್ಟದ ಏಜೆಂಟರನ್ನು ನೇಮಿಸಬೇಕು. ಪ್ರತಿ ಬೂತ್‌ನ ಏಜೆಂಟರು ಮನೆಗಳಿಗೆ ಹೋಗಿ. ಮತದಾರರ ಪಟ್ಟಿಗಳಲ್ಲಿನ ಅಕ್ರಮಗಳ ಬಗ್ಗೆ ತಿಳಿಸಬೇಕು. ಮತದಾರರ ಸಂಖ್ಯೆ ಹಲವಾರು ಲಕ್ಷಗಳಷ್ಟು ಹೆಚ್ಚಾಗಿದೆ. ಇದರ ನೈಜತೆ ಕುರಿತು ನಾನೂ ಪರಿಶೀಲನೆ ನಡೆಸುತ್ತೇನೆಂದು ಹೇಳಿದರು.

ಫೆಬ್ರವರಿ 16 ರಂದು ನಡೆಯಲಿರುವ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮಾಜಿ ಎಂಎಲ್ ಸಿ ಪುಟ್ಟಣ್ಣ ಅವರು ಪಕ್ಷದ ಅಭ್ಯರ್ಥಿಯಾಗಲಿದ್ದಾರೆ ಇದೇ ವೇಳೆ ಶಿವಕುಮಾರ್ ಅವರು ತಿಳಿಸಿದರು.

ಪುಟ್ಟಣ್ಣ ನಮ್ಮ ಅಭ್ಯರ್ಥಿ, ನೀವು ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಶಿಕ್ಷಕರನ್ನು ಭೇಟಿ ಮಾಡಬೇಕು, ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ಇದೇ ವೇಳೆ ಕರೆ ನೀಡಿದರು.

SCROLL FOR NEXT