ರಾಜ್ಯ

ಪಿಎಸ್ಐ ಆಯ್ಕೆ ಪ್ರಕ್ರಿಯೆ ನ್ಯಾಯಯುತವಾಗಿ ನಡೆಯಲಿದೆ: ಗೃಹ ಸಚಿವ ಡಾ. ಜಿ.ಪರಮೇಶ್ವರ್

Manjula VN

ಬೆಂಗಳೂರು: ಪಿಎಸ್‌ಐ ಪರೀಕ್ಷೆಗಳನ್ನು ನ್ಯಾಯಯುತವಾಗಿ ನಡೆಸಲು ರಾಜ್ಯ ಸರ್ಕಾರ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಪರೀಕ್ಷೆ ಬರೆಯುವವರು ಆತಂಕಪಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಮಂಗಳವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್‌ಐ ಹಗರಣದ ಕುರಿತು ನ್ಯಾಯಮೂರ್ತಿ ವೀರಪ್ಪ ಅವರ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗಿದೆ, ಮುಖ್ಯಮಂತ್ರಿಗಳು ವರದಿಯನ್ನು ಇನ್ನೂ ಪರಿಶೀಲಿಸಿಲ್ಲ. ಈ ಬಗ್ಗೆ ಚರ್ಚೆ ನಡೆಸಿ, ಅದರಂತೆ ಕಾರ್ಯನಿರ್ವಹಿಸಲಾಗುವುದು ಎಂದು ಹೇಳಿದರು.

ಹಲವು ದಿನಗಳಿಂದ ಪಿಎಸ್ಐ ಪರೀಕ್ಷೆ ಬಾಕಿ ಉಳಿದಿತ್ತು. ನಾವು ಎಲ್ಲಾ ಮುಂಜಾಗ್ರತಾ ಕ್ರಮಗಳ ಕೈಗೊಂಡಿದ್ದೇವೆ. ಹೈಕೋರ್ಟ್ ನಿರ್ದೇಶನದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ. ಅಡೆತಡೆಯಿಲ್ಲದೆ ಪರೀಕ್ಷೆ ನಡೆಸುವ ವಿಶ್ವಾಸವಿದೆ ಎಂದು ತಿಳಿಸಿದರು.

ಇದೇ ವೇಳೆ ಪಿಎಸ್‌ಐ ಪರೀಕ್ಷೆಯಲ್ಲಿನ ಅಕ್ರಮಗಳ ವಿರುದ್ಧ ಬಹಿರಂಗವಾಗಿ ಧ್ವನಿ ಎತ್ತಿದವರನ್ನು ವಿಚಾರಣೆಗೆ ಕರೆದರೂ ಅವರು ಹಾಜರಾಗಿಲ್ಲ . ಹೀಗಾಗಿ ವರದಿ ಹೇಗೆ ಪರಿಪೂರ್ಣ ಎಂಬ ಬಗ್ಗೆಯೂ ವಿಶ್ಲೇಷಣೆ ನಡೆಸಬೇಕಿದೆ ಎಂದು ಹೇಳಿದರು.

ಪಿಎಸ್‍ಐ ಪರೀಕ್ಷೆಯ ನೇಮಕಾತಿಗೆ ಸಂಬಂಧಪಟ್ಟಂತೆ ಸಬ್‍ಇನ್ಸ್‍ಪೆಕ್ಟರ್ ಲಿಂಗಯ್ಯ ಅವರ ಆಡಿಯೋ ಪ್ರಸ್ತುತ ನಡೆಯುತ್ತಿರುವ ಮರುಪರೀಕ್ಷೆಗೆ ಸಂಬಂಧಿಸಿಲ್ಲ. ಆದರೂ ಸಿಸಿಬಿ ಪೊಲೀಸರು ಪಿಎಸ್‍ಐ ಲಿಂಗಯ್ಯ ಅವರನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ತಾನು ಗುಪ್ತದಳದಲ್ಲಿರುವುದರಿಂದ ಯಾವುದಾದರೂ ರೀತಿಯ ಅಕ್ರಮಗಳು ನಡೆಯುತ್ತಿವೆಯೇ ಎಂಬ ಮಾಹಿತಿ ಕಲೆ ಹಾಕಲು ಕೆಲವರೊಂದಿಗೆ ಸಂಭಾಷಣೆ ನಡೆಸಿದ್ದಾಗಿ ಲಿಂಗಯ್ಯ ಹೇಳಿಕೆ ನೀಡಿದ್ದಾರೆ. ಅದರ ಸತ್ಯಾಸತ್ಯತೆ ಬಗ್ಗೆ ವಿಚಾರಣೆಗಳು ನಡೆಯುತ್ತಿವೆ ಎಂದರು.

SCROLL FOR NEXT