ರಾಜ್ಯ

ಸರ್ಕಾರಿ ಕಟ್ಟಡಗಳ ಮೇಲೆ ಕೇಸರಿ ಧ್ವಜ ಹಾರಿಸುವುದು ಅಕ್ರಮ: ಗೃಹ ಸಚಿವ ಪರಮೇಶ್ವರ್

Manjula VN

ತುಮಕೂರು: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ‘ಹನುಮಧ್ವಜ’ ಹಾರಿಸಿದವರ ವಿರುದ್ಧ ಪೊಲೀಸರು ಹಾಗೂ ಅಧಿಕಾರಿಗಳ ಕೈಗೊಂಡಿರುವ ಕ್ರಮವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಸಮರ್ಥಿಸಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಸರಿ ಧ್ವಜ ಹಾರಿಸಲು ಅನುಮತಿ‌ ನೀಡಿರಲಿಲ್ಲ. ಹಾಗಾಗಿ ಪಂಚಾಯಿತಿ ಅಧಿಕಾರಿಗಳು ಕೇಸರಿ ಧ್ವಜ ತೆಗೆದು, ರಾಷ್ಟ್ರಧ್ವಜ ಹಾರಿಸಿದ್ದಾರೆಂದು ಹೇಳಿದರು.

ಸರ್ಕಾರಿ ಕಟ್ಟಡಗಳ ಮೇಲೆ ಕೇಸರಿ ಧ್ವಜ ಹಾರಿಸುವುದು ಅಕ್ರಮ. ಇದರಿಂದ ಗಲಾಟೆಯಾಗಿದ್ದು, ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಸರ್ಕಾರಿ ಕಟ್ಟಡಗಳ ಬದಲಿಗೆ ದೇವಸ್ಥಾನಗಳು ಮತ್ತು ಖಾಸಗಿ ಸ್ಥಳಗಳಲ್ಲಿ ಜನರು ಕೇಸರಿ ಧ್ವಜ ಹಾರಿಸಲಿ. ಅದಕ್ಕೆ ಯಾವುದೇ ತಕರಾರು ಇರುವುದಿಲ್ಲ. ಆದರೆ, ಸರ್ಕಾರಿ ಜಾಗದಲ್ಲಿ ಹಾರಿಸಬಾರದು. ಇದು ಸಮಾಜದಲ್ಲಿ ಶಾಂತಿ ಕದಡುವ ಕೆಲಸವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌ನವರು ಹಿಂದೂ ವಿರೋಧಿಗಳು ಎಂದು ಬಿಂಬಿಸಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ. ಆದರೆ, ನಾವು ಕೂಡ ಹಿಂದೂಗಳೇ, ಕಾನೂನಿನ ಚೌಕಟ್ಟಿನಲ್ಲಿರಿ ಎಂದು ನಾವು ಹೇಳುತ್ತಿದ್ದೇವೆ. ಅಷ್ಟೇ ವ್ಯತ್ಯಾಸ ನಮಗೂ, ಅವರಿಗೂ. ಈ ರಾಜ್ಯದಲ್ಲಿ ಕಾನೂನಿದೆ, ಕಾನೂನನ್ನ ಮುರಿಯುವ ಕೆಲಸ ಮಾಡಬೇಡಿ ಎಂದು ನಾವು ಹೇಳುತ್ತಿದ್ದೇವೆ. ಅವರು ರಾಜಕೀಯ ಹೇಳಿಕೆಗಳನ್ನ ಕೊಡುತ್ತಿದ್ದಾರೆ. ಇದು ಕೂಡ ಅಂಥದ್ದೇ ಒಂದು ಘಟನೆ. ಅದು ಪೂರ್ವನಿಯೋಜಿತನೋ, ಏನೋ ಅನ್ನೋದು ನನಗೆ ಗೊತ್ತಿಲ್ಲ. ಅವರು ಅನುಮತಿ ಪಡೆದಿದ್ದೆ ಬೇರೆಯದಕ್ಕೆ, ಮಾಡಿದ್ದೆ ಬೇರೆ ಎಂದು ಹೇಳಿದರು.

ರಾಷ್ಟ್ರಧ್ವಜ ಹಾಕುತ್ತೇವೆ ಎಂದು ಊರಿನವರೆಲ್ಲ ಹೇಳಿದ್ದು ಒಳ್ಳೆಯದೇ. ಆದರೆ ನಂತರ ಬೇರೆಯ ಧ್ವಜವನ್ನ ಹಾಕಿದ್ದಾರೆ. ಅದಾದ ಬಳಿಕ ಬೇರೆ ಬೇರೆಯವರು ಬೇರೆ ಧ್ವಜ ಹಾಕುತ್ತೇವೆ ಎಂದು ಹೇಳಿದ್ದಾರೆ. ಕೆಲವರು ಅಂಬೇಡ್ಕರ್, ಕೆಲವರು ಕೆಂಪೇಗೌಡ ಧ್ವಜ ಹಾರಿಸುತ್ತೇವೆ ಎಂದಿದ್ದಾರೆ. ಹೀಗಾಗಿ ಶಾಂತಿ ಕದಡುವ ಕೆಲಸ ಆಗಬಾರದು ಎಂದು ತಿಳಿಸಿದರು.

SCROLL FOR NEXT