ಮಂಗಳೂರು: ಮಂಗಳೂರಿನ ಬಲ್ಮಠದಲ್ಲಿ ನಿರ್ಮಾಣ ಹಂತದ ಕಾಮಗಾರಿ ವೇಳೆ ಮಣ್ಣು ಕುಸಿದು ವಲಸೆ ಕಾರ್ಮಿಕನೊಬ್ಬ ಸಾವನ್ನಪ್ಪಿದ್ದು, ಮತ್ತೊಬ್ಬನನ್ನು ರಕ್ಷಿಸಲಾಗಿದೆ. ಮೃತನನ್ನು ಉತ್ತರ ಪ್ರದೇಶದ 30 ವರ್ಷದ ಚಂದನ್ ಕುಮಾರ್ ಎಂದು ಗುರುತಿಸಲಾಗಿದ್ದು ಪವಾಡಸದೃಶ್ಯ ರೀತಿ ಬದುಕುಳಿದ ಯುವಕ ಬಿಹಾರ ಮೂಲದ 18 ವರ್ಷದ ರಾಜ್ ಕುಮಾರ್ ಎಂದು ತಿಳಿದುಬಂದಿದೆ.
ಇಬ್ಬರು ಕಾರ್ಮಿಕರು ಖಾಸಗಿ ನಿರ್ಮಾಣ ಸಂಸ್ಥೆಗೆ ಸೇರಿದ ವಾಣಿಜ್ಯ ಕಟ್ಟಡದ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದಾಗ ಇಂದು ಮಧ್ಯಾಹ್ನ 12.30ರ ಸುಮಾರಿಗೆ ಅವರ ಮೇಲೆ ಮಣ್ಣು ಕುಸಿದು ಬಿದ್ದಿತ್ತು. ಘಟನೆ ನಡೆದ ಒಂದು ಗಂಟೆಯೊಳಗೆ ರಾಜ್ ಕುಮಾರ್ ಅವರನ್ನು ರಕ್ಷಿಸಲಾಗಿದ್ದು, ಅವರು ಸುರಕ್ಷಿತವಾಗಿ ಹೊರ ಬಂದಿದ್ದಾರೆ. ಏಳು ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ನಂತರ ಚಂದನ್ ಕುಮಾರ್ ಅವರನ್ನು ಹೊರತೆಗೆಯುವಷ್ಟರಲ್ಲಿ ಮೃತಪಟ್ಟಿದ್ದರು.
ಕೊನೆಯವರೆಗೂ ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಚಂದನ್ ಆಳದಲ್ಲಿ ಹೂತು ಹೋಗಿದ್ದರು. ಹೀಗಾಗಿ ಅವರ ಕಾರ್ಯಾಚರಣೆಗೆ ಹೆಚ್ಚು ಸಮಯ ತೆಗೆದುಕೊಂಡಿತ್ತು. ಈ ನಡುವೆ ಭಾರೀ ಮಳೆ ರಕ್ಷಣಾ ಕಾರ್ಯಾಚರಣೆಗೂ ಅಡ್ಡಿಯಾಗಿತ್ತು ಎಂದರು.
ನಿರ್ಮಾಣ ಸ್ಥಳದಲ್ಲಿ ಹೆಚ್ಚಿನ ಕಾರ್ಮಿಕರಿದ್ದರು ಆದರೆ ಘಟನೆ ಸಂಭವಿಸಿದಾಗ ಅವರು ಊಟಕ್ಕೆ ಹೋಗಿದ್ದರಿಂದ ಹೆಚ್ಚಿನ ಸಾವು ನೋವು ತಪ್ಪಿದೆ. ಕಟ್ಟಡವನ್ನು ನಿರ್ಮಿಸಲು ಭೂಮಿಯನ್ನು ಸುಮಾರು 25 ಅಡಿ ಆಳಕ್ಕೆ ಅಗೆಯಲಾಗಿತ್ತು. ಮತ್ತೊಂದೆಡೆ ಇಳಿಜಾರು ಇದ್ದಿದ್ದರಿಂದ ಭಾರೀ ಮಳೆಗೆ ಸಡಿಲಗೊಂಡು ಮಣ್ಣು ಕುಸಿದಿದೆ. ಎನ್ಡಿಆರ್ಎಫ್, ಎಸ್ಡಿಆರ್ಎಫ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ನಿರ್ಮಾಣ ಚಟುವಟಿಕೆಯನ್ನು ಮುಂದೂಡಿ: MCC
ಘಟನೆಯಿಂದ ಎಚ್ಚೆತ್ತ ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ಆಯುಕ್ತ ಆನಂದ್ ಅವರು, ಮುಂಗಾರು ಅವಧಿ ಮುಗಿಯುವವರೆಗೆ ನಗರದಲ್ಲಿ ನಿರ್ಮಾಣ ಚಟುವಟಿಕೆಗಳನ್ನು ಮುಂದೂಡುವಂತೆ ಸಾರ್ವಜನಿಕರಿಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಸಾಕಷ್ಟು ಸುರಕ್ಷತಾ ಕ್ರಮಗಳಿಲ್ಲದೆ ಅನೇಕರು ಭೂಮಿಯನ್ನು ಅಗೆಯುವುದು ಮತ್ತು ಕಟ್ಟಡಗಳನ್ನು ನಿರ್ಮಿಸುತ್ತಿರುವುದು ಕಂಡುಬಂದಿದೆ. ಇದು ಭೂಕುಸಿತಗಳಿಂದ ಖಾಸಗಿ ಮತ್ತು ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾಗುತ್ತಿದೆ ಎಂದು ತಿಳಿಸಿರುವ MCC, ಎಲ್ಲಾ ಹೊಸ ನಿರ್ಮಾಣಗಳನ್ನು ಮುಂದೂಡಲು ಸಲಹೆ ನೀಡಿದೆ. ಈಗಾಗಲೇ ನಿರ್ಮಾಣ ಕಾರ್ಯ ಆರಂಭಗೊಂಡಿದ್ದರೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು. ಯಾರಾದರೂ ಈ ನಿಯಮ ಉಲ್ಲಂಘಿಸಿದರೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.