ಬೆಂಗಳೂರು: ಬೆಂಗಳೂರು ಮೆಟ್ರೋ ನಿಲ್ದಾಣಗಳಿಗೆ ನಟ ಶಂಕರ್ ನಾಗ್ ಹಾಗೂ ಇತ್ತೀಚೆಗೆ ನಿಧನರಾದ ನಟಿ, ನಿರೂಪಕಿ ಅಪರ್ಣಾ ಹೆಸರು ನಾಮಕರಣ ಮಾಡುವಂತೆ ಸರ್ಕಾರಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ''ಕನ್ನಡ ಚಿತ್ರರಂಗದ ಮೇರು ನಟ ಶಂಕರ್ ನಾಗ್ ಹಾಗೂ ಕನ್ನಡಿಗರ ಮನದಲ್ಲಿ ಅಚ್ಚಳಿಯದೆ ಉಳಿದಿರುವ ಅಪರ್ಣಾ ಅವರ ಕೊಡುಗೆ ಕರ್ನಾಟಕಕ್ಕೆ ಹಾಗೂ ಕನ್ನಡಕ್ಕೆ ಅಪಾರವಾದುದು.
ಶಂಕರ್ ನಾಗ್ (Shankar Nag) ಹಾಗೂ ಅಪರ್ಣಾ (Aparna) ಅವರ ಹೆಸರುಗಳನ್ನು ಬೆಂಗಳೂರು ಮೆಟ್ರೋ ನಿಲ್ದಾಣಗಳಿಗೆ ಸರ್ಕಾರ ನಾಮಕರಣ ಮಾಡಲಿ'' ಎಂದು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ನಿಧನರಾಗಿದ್ದ ಅಪರ್ಣಾ
ಶ್ವಾಸಕೋಶ ಕ್ಯಾನ್ಸರ್ನಿಂದ ಬಳಲುತ್ತಿದ್ದ ನಿರೂಪಕಿ ಅಪರ್ಣಾ ಈಚೆಗೆ ನಿಧನರಾದರು. ಅಪರ್ಣಾ ಅವರ ನಿಧನಕ್ಕೆ ಗಣ್ಯರು, ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ನಮ್ಮ ಮೆಟ್ರೋ ದನಿಯಾಗಿದ್ದ ನಿರೂಪಕಿಗೆ ಮೆಟ್ರೋ ಕೂಡ ಗೌರವ ಸಲ್ಲಿಸಿತ್ತು. ರಾಜ್ಯ ಸರ್ಕಾರ ಸಕಲ ಗೌರವಗಳೊಂದಿಗೆ ಅಪರ್ಣಾ ಅಂತ್ಯ ಕ್ರಿಯೆ ನಡೆಸಿತ್ತು.