ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್ನಿಂದ ಶಾಸಕರು ಮತ್ತು ಇತರ ಜನಪ್ರತಿನಿಧಿಗಳಿಗೆ ಸಾಲ ಮಂಜೂರು ಮಾಡುವಲ್ಲಿ ಆರ್ಬಿಐ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಕಾಂಗ್ರೆಸ್ ಶಾಸಕರೊಬ್ಬರು ಹೇಳಿದ್ದು, ಲೋಪವಾಗಿರುವುದನ್ನು ಸರ್ಕಾರ ಸೋಮವಾರ ಒಪ್ಪಿಕೊಂಡಿದೆ.
ಸೋಮವಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಆನಂದ್ ಕೆ.ಎಸ್ ಅವರು ಅಪೆಕ್ಸ್ ಬ್ಯಾಂಕಿನಿಂದ ಸಾಲ ಪಡೆದಿರುವ ಹಾಲಿ, ಮಾಜಿ ಸಚಿವರು, ಶಾಸಕರು, ಸಂಸದರ ವಿವರವಾದ ಮಾಹಿತಿ ನೀಡುವಂತೆ ಗಮನ ಸೆಳೆದ ಸೂಚನೆಗೆ ಅವರು ಉತ್ತರಿಸಿದರು.
ಆರ್ಬಿಐ ಸುತ್ತೋಲೆಯಂತೆ ಬ್ಯಾಂಕ್ಗಳಲ್ಲಿ ಸಾಲ ಪಡೆದಿರುವವರ ಮಾಹಿತಿಯನ್ನು ಗ್ರಾಹಕರ ಒಪ್ಪಿಗೆ ಇಲ್ಲದೆ ಬಹಿರಂಗ ಮಾಡುವಂತಿಲ್ಲ ಎಂದು ರಾಜಣ್ಣ ನೀಡಿದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಆನಂದ್, ಅಪೆಕ್ಸ್ ಬ್ಯಾಂಕ್ಗೆ ನಬಾರ್ಡ್ನಿಂದ ಎರಡು ಸಾವಿರ ಕೋಟಿ ರೂ.ನೆರವು ಬಂದಿದೆ. ಬಹುತೇಕ ಶಾಸಕರು ಸಕ್ಕರೆ ಕಾರ್ಖಾನೆ ಮಾಡಲು ಅಪೆಕ್ಸ್ ಬ್ಯಾಂಕ್ನಿಂದ ಸಾಲ ಪಡೆದಿದ್ದಾರೆ ಎಂದರು.
ಕೆಲವು ಸಮರ್ಪಕವಾದ ದಾಖಲೆಗಳನ್ನು ನೀಡದೆ ಸಾಲ ಪಡೆದಿದ್ದಾರೆ. ಇದರಲ್ಲಿ ಭ್ರಷ್ಟಾಚಾರ ಆಗಿದೆ. ಹೈಕೋರ್ಟ್ ಸಹ ಈ ಬಗ್ಗೆ ಪ್ರಶ್ನೆ ಎತ್ತಿದೆ. ಡಿಸಿಸಿ ಬ್ಯಾಂಕ್ಗಳಲ್ಲಿ ನಲ್ಲಿ ರೈತರಿಗೆ, ಸಾಮಾನ್ಯ ಜನರಿಗೆ ಸಾಲ ಸಿಗುತ್ತಿಲ್ಲ. ಆದರೆ, ಉದ್ಯಮಿಗಳಿಗೆ ಮಾತ್ರ ಸಾಲ ನೀಡುತ್ತಿದ್ದಾರೆ. ಇಲ್ಲಿ ಸಾವಿರಾರು ಕೋಟಿ ರೂ. ಹಗರಣಗಳು ಆಗಿವೆ ಎಂದು ಆನಂದ್ ದೂರಿದರು.
ಸರ್ಕಾರ ಕಾರ್ಖಾನೆಗಳಿಗೆ ನೀಡಲಾಗಿರುವ ಸಾಲದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಲೆಕ್ಕಪರಿಶೋಧನಾ ವರದಿಯಿಂದ ತಿಳಿದುಬಂದಿದೆ ಎಂದು ನಬಾರ್ಡ್ ಮತ್ತು ಆರ್ಬಿಐ ಸರ್ಕಾರಕ್ಕೆ ಪತ್ರ ಬರೆದಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ರಾಜಣ್ಣ, ಅಪೇಕ್ಸ್ ಬ್ಯಾಂಕ್ ನಲ್ಲಿ ಯಾವುದೇ ಹಗರಣ ನಡೆದಿದ್ದರೂ ತನಿಖೆ ಮಾಡಿಸುತ್ತೇವೆ. ಒಂದು ವೇಳೆ ಅಂತಹ ಯಾವುದಾದರೂ ನಿರ್ದಿಷ್ಟ ಪ್ರಕರಣ ಗಮನಕ್ಕೆ ತಂದರೆ ತನಿಖೆ ಮಾಡಿಸುತ್ತೇವೆ ಎಂದರು.