ಬೆಂಗಳೂರು: ನಕಲಿ ಆಸ್ತಿ ದಾಖಲೆಗಳನ್ನು ಸೃಷ್ಟಿಸಿ ನಗರದಲ್ಲಿ 100 ಕ್ಕೂ ಹೆಚ್ಚು ನಿವೇಶನಗಳನ್ನು ಕಬಳಿಸಿದ ಆರೋಪದ ಮೇಲೆ ಕುಖ್ಯಾತ ಭೂಗಳ್ಳರ ವಿರುದ್ಧ ಸಿಐಡಿ ಕಠಿಣ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ, 2000 ರ ಅಡಿಯಲ್ಲಿ ಪ್ರಕರಣ ದಾಖಲಿಸಿದೆ.
ಮಾರುತಿ ಸೇವಾನಗರ ನಿವಾಸಿ ಜಾನ್ ಮೋಸೆಸ್ (49) ಬಂಧಿತ ಆರೋಪಿಯಾಗಿದ್ದು, ಸಿಐಡಿ ವಶಕ್ಕೆ ಪಡೆದಿದ್ದಾರೆ. KCOCA ಅಡಿಯಲ್ಲಿ ಪ್ರಕರಣ ದಾಖಲಿಸಿದ ನಂತರ ಮುಂದಿನ ಪ್ರಕ್ರಿಯೆಗಳನ್ನು ಪ್ರಾರಂಭಿಸಿದ್ದಾರೆ. ಸಿಐಡಿ ಅಧಿಕಾರಿಗಳು ಸೋಮವಾರ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೋಸೆಸ್ನ ಸಹಚರರನ್ನು ಬಂಧಿಸಬೇಕು ಮತ್ತು ಅವರ ವಿರುದ್ಧ ಕೋಕಾ ಅಡಿಯಲ್ಲಿ ಕೇಸ್ ದಾಖಲಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ,
ಮೋಸೆಸ್ ಮತ್ತು ಆತನ ಸಹಚರರು 2017 ರಿಂದ 2021 ರವರೆಗೆ ಅಪರಾಧ ಪ್ರಕರಣಗಳಲ್ಲಿ ಸಕ್ರಿಯರಾಗಿದ್ದರು. ಇವರ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಸಿಐಡಿ 51 ಪ್ರಕರಣಗಳ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಮಾರುತಿ ಸೇವಾ ನಗರದ ನಿವಾಸಿ ಜಾನ್ ಮೊಸೆಸ್ ತನ್ನದೇ ತಂಡ ಕಟ್ಟಿಕೊಂಡು ರಾಜಧಾನಿ ಹಾಗೂ ಹೊರವಲಯದಲ್ಲಿ ಖಾಲಿ ಇರುವ ನಿವೇಶನ, ಆಸ್ತಿ ಗುರುತಿಸುತ್ತಿದ್ದ. ಬಳಿಕ ತನ್ನದೇ ತಂಡದ ಸದಸ್ಯರ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದ. ಈ ಸ್ಥಳಗಳಿಗೆ ಸಂಬಂಧಿಸಿ ಮತ್ತೊಬ್ಬ ವ್ಯಕ್ತಿಯಿಂದ ಲಘು ವ್ಯವಹಾರಗಳ ನ್ಯಾಯಾಲಯಗಳಲ್ಲಿ ದಾವೆ ದಾಖಲಿಸುತ್ತಿದ್ದ. ನ್ಯಾಯಾಲಯದಲ್ಲಿ ರಾಜಿ ಸಂಧಾನದ ಅನ್ವಯ ಆದೇಶಗಳನ್ನು ಪಡೆದು ಅದರನ್ವಯ ಭೂ ಕಬಳಿಕೆ ಮಾಡುತ್ತಿದ್ದ. ಇದರಿಂದ ಭೂಮಿ/ ನಿವೇಶನದ ಮೂಲ ಮಾಲೀಕರಿಗೆ ಅನ್ಯಾಯವಾಗುತ್ತಿತ್ತು.
2020ರಲ್ಲಿ ಜಾನ್ ಮೊಸೆಸ್ನಿಂದ ಭೂಮಿ ಕಳೆದುಕೊಂಡವರು ಹಲಸೂರು ಗೇಟ್ನಲ್ಲಿ ದೂರು ದಾಖಲಿಸಿದ್ದರಿಂದ ಪ್ರಕರಣ ಬೆಳಕಿಗೆ ಬಂದಿತ್ತು. ಸಿಐಡಿ ಹೆಚ್ಚಿನ ತನಿಖೆ ನಡೆಸಿದ ವೇಳೆ ಆರೋಪಿ ವಿರುದ್ಧ 110 ಭೂ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಜತೆಗೆ, ನೂರಾರು ಮಂದಿ ಬಡವರು, ದುರ್ಬಲರು ನಿವೇಶನ, ಭೂಮಿ ಕಳೆದುಕೊಂಡಿರುವುದು ಪತ್ತೆಯಾಗಿತ್ತು ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.