ಬೆಂಗಳೂರು: ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಜನರ ಕಷ್ಟಗಳನ್ನು ಆಲಿಸಬೇಕು ಹಾಗೂ ಅಗತ್ಯ ನೆರವುಗಳನ್ನು ಒದಗಿಸಿಕೊಡಬೇಕು ಎಂದು ಸಚಿವರಿಗೆ ಸರ್ಕಾರ ಸೂಚನೆ ನೀಡಿದೆ.
ರಾಜ್ಯದ ಹಲವೆಡೆ ಮಳೆಯಿಂದ ಪ್ರವಾಹ ಉಂಟಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ರಾಜ್ಯದಲ್ಲಿ ಈ ವರ್ಷ ಭಾರಿ ಮಳೆಯಾಗುತ್ತಿದೆ ಮತ್ತು ಪ್ರವಾಹದಿಂದ ರಾಜ್ಯದ ನದಿಗಳು ಉಕ್ಕಿ ಹರಿಯುತ್ತಿದೆ. ಬಹುತೇಕ ಜಲಾಶಯಗಳು ಭರ್ತಿಯಾಗಿ ನೀರಿನ ಹೊರಹರಿವು ಹೆಚ್ಚಾದ ಪರಿಣಾಮ ನೆರೆ ಪರಿಸ್ಥಿತಿ ಎದುರಾಗಿದೆ. ನದಿ ಪಾತ್ರದ ಜನ, ಜಾನುವಾರು, ಆಸ್ತಿ, ಬೆಳೆಗಳಿಗೆ ಹಾನಿಗಳ ಬಗ್ಗೆ ವರದಿಯಾಗುತ್ತಿದೆ ಎಂದು ಹೇಳಿದರು.
ಇಂತಹ ಕಷ್ಟದ ಸಮಯದಲ್ಲಿ ಜನರ ಜೊತೆ ನಿಲ್ಲಬೇಕಿರುವುದು ನಮ್ಮ ಸರಕಾರದ ಕರ್ತವ್ಯ. ಹೀಗಾಗಿ ಸಚಿವ ಸಹೋದ್ಯೋಗಿಗಳು ತಮ್ಮ ಕ್ಷೇತ್ರ ವ್ಯಾಪ್ತಿ ಹಾಗೂ ಇತರೆ ಪ್ರವಾಹಪೀಡಿತ ಪ್ರದೇಶಗಳ ಶಾಸಕರ ಸಂಪರ್ಕದೊಂದಿಗೆ ಭೇಟಿ ಕೊಟ್ಟು, ಸಂತ್ರಸ್ತರ ಅಹವಾಲುಗಳನ್ನು ಸ್ವೀಕರಿಸಿ ಅವರ ನೆರವಿಗೆ ಧಾವಿಸಬೇಕಾಗಿ ಕೋರುತ್ತೇನೆ ಎಂದು ಮನವಿ ಮಾಡಿದರು.
ವರುಣನ ಕೃಪೆಯಿಂದ ಉತ್ತಮ ಮಳೆಯಾಗುತ್ತಿದೆ. ಇದೇ ವೇಳೆ ಉಂಟಾಗಿರುವ ಅವಘಡಗಳಿಂದ ಜನರು ಆತಂಕಕ್ಕೆ ಒಳಗಾಗಿದ್ದು, ಜನಪ್ರತಿನಿಧಿಗಳಾದ ನಾವು ಅವರ ಜೊತೆ ನಿಲ್ಲೋಣ ಎಂದು ಇದೇ ವೇಳೆ ಕರೆ ನೀಡಿದರು.