ಅರ್ಕಾವತಿ ಬಡಾವಣೆ  
ರಾಜ್ಯ

ಬೆಂಗಳೂರಿನ ಅರ್ಕಾವತಿ ಬಡಾವಣೆ ಸಮಸ್ಯೆಗಳ ಆಗರ; ಶಾಲಾ ಬಸ್‌ಗಳು ಸಹ ಬರುತ್ತಿಲ್ಲ!

ಮೂರನೇ ಎರಡರಷ್ಟು ನಿವೇಶನಗಳಲ್ಲಿ ಈಗಾಗಲೇ ಮನೆಗಳನ್ನು ನಿರ್ಮಿಸಲಾಗಿದ್ದು, ಜನ ವಾಸವಾಗಿದ್ದಾರೆ. ಆದರೆ, ಮೂಲ ಸೌಕರ್ಯಗಳ ಕೊರತೆಯಿಂದ 19ನೇ ಬ್ಲಾಕ್‌ನ ನಿವಾಸಿಗಳು ನಿತ್ಯವೂ ಪರದಾಡುವಂತಾಗಿದೆ.

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಅಭಿವೃದ್ಧಿ ಪಡಿಸಿರುವ ಅರ್ಕಾವತಿ ಬಡಾವಣೆಯ ಚಳ್ಳಕೆರೆ ಗ್ರಾಮದ 600 ನಿವೇಶನಗಳನ್ನು ಮಂಜೂರು ಮಾಡಿ 18 ವರ್ಷಗಳಾಗಿವೆ. ಮೂರನೇ ಎರಡರಷ್ಟು ನಿವೇಶನಗಳಲ್ಲಿ ಈಗಾಗಲೇ ಮನೆಗಳನ್ನು ನಿರ್ಮಿಸಲಾಗಿದ್ದು, ಜನ ವಾಸವಾಗಿದ್ದಾರೆ. ಆದರೆ, ಮೂಲ ಸೌಕರ್ಯಗಳ ಕೊರತೆಯಿಂದ 19ನೇ ಬ್ಲಾಕ್‌ನ ನಿವಾಸಿಗಳು ನಿತ್ಯವೂ ಪರದಾಡುವಂತಾಗಿದೆ.

ಟಾರ್ ರಸ್ತೆಗಳಿಲ್ಲ, ಕುಡಿಯುವ ನೀರು ಇಲ್ಲ. ನೈರ್ಮಲ್ಯ ಸೌಲಭ್ಯಗಳ ಕೊರತೆ ಇದೆ ಮತ್ತು ಅನಿಯಮಿತ ವಿದ್ಯುತ್ ಪೂರೈಕೆ ಇಲ್ಲಿನ ಪ್ರಮುಖ ಸಮಸ್ಯೆಗಳಾಗಿವೆ. ಒಟ್ಟಾರೆ ಅರ್ಕಾವತಿ ಬಡಾವಣೆ ಸಮಸ್ಯೆಗಳ ಆಗರವಾಗಿದ್ದು, ಇತರಪ್ರ ದೇಶಗಳಿಂದ ಹೋಟೆಲ್ ಸಿಬ್ಬಂದಿ ರಾತ್ರಿಯ ಸಮಯದಲ್ಲಿ ಬಂದು ತಮ್ಮ ಕಸವನ್ನು ಇಲ್ಲಿನ ಖಾಲಿ ಜಾಗಗಳಲ್ಲಿ ಸುರಿಯುತ್ತಿದ್ದಾರೆ ಎಂದು ನಿವಾಸಿಗಳು ಹೇಳಿದ್ದಾರೆ.

ಈ ಕುರಿತು ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ಜೊತೆ ಮಾತನಾಡಿದ ಅರ್ಕಾವತಿ ಲೇಔಟ್ ನ 19ನೇ ಬ್ಲಾಕ್ ನಿವಾಸಿಗಳ ಸಂಘದ ಪದಾಧಿಕಾರಿ ಎಚ್ ಬಿ ಪಾಟೀಲ್ ಕರಡಲ್ ಅವರು, ‘ಬಡಾವಣೆ ವ್ಯಾಪ್ತಿಯಲ್ಲಿರುವ ರಸ್ತೆಗಳು ಹಾಗೂ ಚಳ್ಳಕೆರೆ ಮುಖ್ಯರಸ್ತೆ ಮತ್ತು ಬಾಬುಸಾಪಾಳ್ಯದ ಎರಡು ಮುಖ್ಯ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಟಾರ್ ಹಾಕಿಲ್ಲ. ಕೆಸರಿನ ರಸ್ತೆಯಲ್ಲಿ ವಾಹನಗಳ ಚಕ್ರಗಳು ಸಿಲುಕಿಕೊಳ್ಳುತ್ತಿವೆ. ಶಾಲಾ ಬಸ್‌ಗಳು ಈ ಪ್ರದೇಶಕ್ಕೆ ಬರಲು ನಿರಾಕರಿಸುತ್ತವೆ ಮತ್ತು ಮುಖ್ಯ ರಸ್ತೆಯಲ್ಲಿಯೇ ಮಕ್ಕಳನ್ನು ಬಿಡುತ್ತವೆ. ಮಕ್ಕಳು ಮನೆ ತಲುಪಲು 500 ಮೀಟರ್‌ಗಳವರೆಗೆ ನಡೆಯಬೇಕು ಎಂದಿದ್ದಾರೆ.

30x40 ಚದರ ಅಡಿ ಅಳತೆಯ 600 ಸೈಟ್‌ಗಳಿಗೆ ವಿದ್ಯತ್ ಪೂರೈಕೆ ಮಾಡಲು ಮೂರು ಟ್ರಾನ್ಸ್‌ಫಾರ್ಮರ್‌ಗಳಿವೆ. ಆದರೆ ಇವು ಸಾಕಾಗುತ್ತಿಲ್ಲ. ಓವರ್‌ಲೋಡ್‌ನಿಂದಾಗಿ ಟ್ರಾನ್ಸ್‌ಫಾರ್ಮರ್‌ಗಳು ಆಗಾಗ್ಗೆ ಸಿಡಿಯುತ್ತಿವೆ ಅಥವಾ ಕಡಿಮೆ ವೋಲ್ಟೇಜ್ ಇರುತ್ತದೆ. ಇದರಿಂದ ಬಹುಮಹಡಿ ಮನೆಗಳಲ್ಲಿ ಲಿಫ್ಟ್‌ಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎಂದು ಎಚ್ ಬಿ ಪಾಟೀಲ್ ಕರಡಲಕ್ ಹೇಳಿದ್ದಾರೆ.

"ಇದು ಇಡೀ ಬೆಂಗಳೂರಿನ ಅತ್ಯಂತ ಕೆಟ್ಟ ಲೇಔಟ್ ಆಗಿದ್ದು, ಈ ಬಗ್ಗೆ ಬಿಡಿಎಗೆ ಪದೇ ಪದೇ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಈ ಸಂಬಂಧ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೂ ಮನವಿ ಮಾಡಿದ್ದೇವೆ ಎಂದು ವಿನ್ಯಾಸ ಸಲಹೆಗಾರ, ನಿವಾಸಿ ಸತೀಶ್ ಪಾಲ್ ಅಳಲು ತೋಡಿಕೊಂಡಿದ್ದಾರೆ.

''ಬಾಬುಸಾಪಾಳ್ಯದ ಪಕ್ಕದ ಬಿಬಿಎಂಪಿ ಬಡಾವಣೆಯ ಚರಂಡಿ ನೀರು ನೇರವಾಗಿ ನಮ್ಮ ಬಡಾವಣೆಯ ಚರಂಡಿಗೆ ಹರಿದು ಬರುತ್ತಿದ್ದು, ಸೊಳ್ಳೆ ಕಾಟ ಹೆಚ್ಚಾಗಿದೆ. ಹಲವು ಕುಟುಂಬಗಳಲ್ಲಿ ಕನಿಷ್ಠ ಒಬ್ಬರಾದರೂ ಡೆಂಗ್ಯೂ ಪೀಡಿತರಾಗಿದ್ದಾರೆ'' ಎಂದು ಅವರು ಹೇಳಿದ್ದಾರೆ.

19ನೇ ಬ್ಲಾಕ್ ಪರವಾಗಿ BWSSB ಮತ್ತು BDA ಯನ್ನು ಹಲವು ಬಾರಿ ಸಂಪರ್ಕಿಸಿದರೂ ಯಾವುದೇ ಸಮಸ್ಯೆಗಳನ್ನು ಪರಿಹರಿಸಿಲ್ಲ. ಕೆಸರು ತುಂಬಿದ ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವುದು ತುಂಬಾ ಕಷ್ಟವಾಗುತ್ತಿದೆ. ಇಂತಹ ದಯನೀಯ ರಸ್ತೆಗಳ ಬಗ್ಗೆ ಎಲ್ಲಾ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತ್ತೋರ್ವ ಮನೆ ಮಾಲೀಕ ಜಿ.ಎಚ್.ಮುರಳೀಧರ್ ಮಾತನಾಡಿ, ‘ಹೋಟೆಲ್‌ಗಳು ಮತ್ತು ಇತರ ಅಪಾರ್ಟ್‌ಮೆಂಟ್‌ಗಳು ರಾತ್ರಿಯ ವೇಳೆಯಲ್ಲಿ ಸುರಿಯುವ ಕಸದಿಂದ ಬೀದಿ ನಾಯಿಗಳ ಕಾಟವೂ ಹೆಚ್ಚಾಗಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT