ಬೆಂಗಳೂರು: ರಾಹುಲ್ ಗಾಂಧಿ ಸಮಕ್ಷಮ ಶುಕ್ರವಾರ ನಡೆದ ಸಭೆಯಲ್ಲಿ ಲೋಕಸಭೆ ಚುನಾವಣೆ ಕುರಿತು ಚರ್ಚೆಯಾಗಿದೆ. ಯಾವ್ಯಾವ ಜಿಲ್ಲೆಯಲ್ಲಿ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲು ತಿಳಿಸಿದ್ದಾರೆ. ರಾಹುಲ್ ಗಾಂಧಿಯವರು ನೀಡಿದ ಸೂಚನೆಗೆ ಬದ್ಧರಾಗಿ ವಿಶ್ಲೇಷಣೆ ಮಾಡುತ್ತೇವೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು.
ಬೆಂಗಳೂರಿನ ಮಾತನಾಡಿದ ಅವರು, ನಿನ್ನೆ ನಡೆದ ರಾಹುಲ್ ಗಾಂಧಿ ಸಭೆಯಲ್ಲಿ ಸಚಿವರಿಗೆ ತರಾಟೆ ವಿಚಾರವಾಗಿ ಪ್ರತಿಕ್ರಿಯಿಸಿ, ಸ್ವಾಭಾವಿಕವಾಗಿ ಚರ್ಚೆ ಮಾಡಬೇಕು. ಯಾಕೆ ಹೀಗಾಗಿದೆ ಅಂತ ವಿಶ್ಲೇಷಣೆ ಮಾಡಬೇಕು. ನನ್ನನ್ನೂ ಸೇರಿಸಿ ಯಾವೆಲ್ಲಾ ಜಿಲ್ಲೆಗಳಲ್ಲಿ ಹಿನ್ನಡೆಯಾಗಿದೆ ಎಂದು ವಿಶ್ಲೇಷಣೆ ಮಾಡಿ ತಿಳಿಸಲು ಸೂಚಿಸಿದ್ದಾರೆ ಹಾಗೆಯೇ ನಡೆದುಕೊಳ್ಳುತ್ತೇವೆ ಎಂದರು.
ವಾಲ್ಮೀಕಿ ನಿಗಮದಲ್ಲಿ ಆಗಿರುವ ಭ್ರಷ್ಟಾಚಾರದಲ್ಲಿ ಸಚಿವ ಶರಣ ಪ್ರಕಾಶ್ ಪಾಟೀಲ್ ಹೆಸರು ತಳುಕು ಹಾಕಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ತನಿಖೆ ನಡೆಯುತ್ತಿರುವಾಗ ಅನೇಕ ವಿಚಾರ ಬರುತ್ತವೆ. ಅಪರಾಧಿ ಸ್ಥಾನದಲ್ಲಿ ಇರುವವರು ತನಿಖೆ ವೇಳೆ ಹಲವು ಹೇಳಿಕೆಗಳನ್ನು ಕೊಡುತ್ತಾರೆ. ಆ ಹೇಳಿಕೆಯಲ್ಲಿ ಹಲವರ ಹೆಸರು ಬರುತ್ತದೆ. ಅದನ್ನು ಎಸ್ಐಟಿ ಅವರು ತನಿಖೆ ಹಾಗೂ ವಿಚಾರಣೆ ಮಾಡುತ್ತಾರೆ. ನಾವು ಅದರ ಬಗ್ಗೆ ವ್ಯಾಖ್ಯಾನ ಮಾಡುವುದು ಸರಿಯಲ್ಲ. ಅದಕ್ಕೆ ಸಂಬಂಧಪಟ್ಟ ಹೇಳಿಕೆ ಕೊಡಲು ಆಗಲ್ಲ ಎಂದರು.
ರಾಹುಲ್ ಗಾಂಧಿಯವರು ಲೋಕಸಭೆ ಪ್ರತಿಪಕ್ಷ ನಾಯಕರಾಗಲಿ ಎಂಬುದು ನಮ್ಮೆಲ್ಲರ ಆಸೆ. ಭಾರತ್ ಜೋಡೋ ಮೂಲಕ ದೇಶಾದ್ಯಂತ ಪಾದಯಾತ್ರೆ ಮಾಡಿದ್ದಾರೆ. ದೇಶದ ಪ್ರತಿಯೊಂದು ಸಮಸ್ಯೆಗಳನ್ನು ಅರಿತಿದ್ದು, ಪ್ರತಿಪಕ್ಷ ನಾಯಕರಾಗುವುದಕ್ಕೆ ಸೂಕ್ತ. ಆದರೆ ಈ ವಿಷಯದಲ್ಲಿ ಇಂಡಿಯಾ ಒಕ್ಕೂಟದ ತೀರ್ಮಾನವೇ ಅಂತಿಮವೆಂದು ಡಾ.ಜಿ.ಪರಮೇಶ್ವರ್ ಅಭಿಪ್ರಾಯ ವ್ಯಕ್ತಪಡಿಸಿದರು.