ವಿಜಯಪುರ: ಸಮಾಜದಲ್ಲಿನ ಜಾತಿ ವ್ಯವಸ್ಥೆ ತೊಡೆದುಹಾಕಲು ಅಂತರ್ಜಾತಿ ಮತ್ತು ಅಂತರ್ ಧರ್ಮೀಯ ವಿವಾಹಗಳು ಉತ್ತಮ ಪರಿಹಾರವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಹೇಳಿದರು.
ವಿಜಯಪುರ ಜಿಲ್ಲೆಯ ಇಂಚಗೇರಿ ಗ್ರಾಮದಲ್ಲಿ ಭಾನುವಾರ ಮಾಧವಾನಂದ ಸ್ವಾಮಿಗಳ ದೇವಸ್ಥಾನದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಮಾಜದಲ್ಲಿ ಜಾತಿ ವ್ಯವಸ್ಥೆ ಹೋಗಬೇಕಾದರೆ ಅಂತರ್ಜಾತಿ ವಿವಾಹ ಹೆಚ್ಚಾಗಬೇಕು. ಆ ಮೂಲಕ ಜಾತಿ ವ್ಯವಸ್ಥೆ ಅಳಿಸಲು ಸಾಧ್ಯ ಎಂದು ಹೇಳಿದರು.
ಜಾತಿ ವ್ಯವಸ್ಥೆಯಿಂದಾಗಿಯೇ ಬ್ರಿಟಿಷರು ಈ ದೇಶ ಆಳಿದರು. ಈ ದೇಶಕ್ಕೆ ವ್ಯಾಪಾರ ಮಾಡಲು ಬಂದ ಬ್ರಿಟಿಷರು ಇದೇ ದೇಶದಲ್ಲಿ ಠಿಕಾಣಿ ಹೂಡಿದರು. ಅಂದು ಸುಮಾರು 560 ಸಂಸ್ಥಾನಗಳಿದ್ದವು. ಅವರೆಲ್ಲ ಒಬ್ಬರಿಗೊಬ್ಬರು ಕಾದಾಡುತ್ತಿದ್ದರು. ಕಾರಣ ನಮ್ಮ ಜಾತಿ ವ್ಯವಸ್ಥೆ ಎಷ್ಟು ಪ್ರಬಲವಾಗಿತ್ತು. ಈ ಜಾತಿ ವ್ಯವಸ್ಥೆ ಮಾಡಿದವರಾರು? ಚಾತುರ್ವರ್ಣ ಮಾಡಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಇವರಿಗೆ ಎಲ್ಲ ಸವಲತ್ತು ಕೊಡಲಾಗಿತ್ತು. ಶಿಕ್ಷಣ, ಆಸ್ತಿ ಎಲ್ಲವೂ ಅವರಿಗಿತ್ತು. ಶೂದ್ರರಿಗೆ ಯಾವುದೇ ಸವಲತ್ತು ಇರಲಿಲ್ಲ. ಹೀಗಾಗಿ ಬ್ರಿಟಿಷರು ಈ ದೇಶ ಆಳಲು ಸುಲಭವಾಯಿತು. ಮಾಧವಾನಂದ ಸ್ವಾಮಿಜಿ ಇದನ್ನು ಅರಿತುಕೊಂಡೇ ಜಾತ್ಯತೀತ ತತ್ವ ಅಳವಡಿಸಿಕೊಂಡರು. ಹೀಗಾಗಿ ಅವರು ಪೂಜ್ಯನೀಯರಾದರು ಎಂದು ತಿಳಿಸಿದರು.
ಬಸವಣ್ಣ ಕೂಡ ಜಾತ್ಯತೀತ ತತ್ವ ಪ್ರತಿಪಾದನೆ ಮಾಡಿದರು. 12ನೇ ಶತಮಾನದಲ್ಲಿ ಬಸವಾದಿ ಶರಣರು ಹೇಳಿದ ಸಂದೇಶವನ್ನೇ 20ನೇ ಶತಮಾನದಲ್ಲಿ ಮಾಧವಾನಂದ ಸ್ವಾಮೀಜಿ ಹೇಳಿದರು. ಈ ಜಾತಿ ಪದ್ದತಿ ಹೋಗಲಾಡಿಸಬೇಕು. ಅದಕ್ಕಾಗಿ ಅಂತರ್ಜಾತಿ ವಿವಾಹ ಹೆಚ್ಚಾಗಬೇಕು. ಆರ್ಥಿಕ ಸಬಲೀಕರಣಗೊಳ್ಳಬೇಕು ಎಂದರು.
ಈ ದೇಶ ಬಹುತ್ವದ ದೇಶ. ಅನೇಕ ಜಾತಿ, ಧರ್ಮ, ಭಾಷೆಗಳಿರುವ ದೇಶ ಇದು. ಯಾರು ಬಹುತ್ವವನ್ನು ಪಾಲನೆ ಮಾಡುತ್ತಾರೆ, ಗೌರವಿಸುತ್ತಾರೆ ಅಂತವರು ಮಾತ್ರ ಸ್ಮರಣಾರ್ಹರು ಎಂದರು. ಬಸವಣ್ಣನವರ ಫೋಟೊ ಪೂಜೆ ಮಾಡುತ್ತೇವೆ, ಆದರೆ, ಅವರ ತತ್ವ ಪಾಲಿಸುತ್ತಿಲ್ಲ. ಜಾತಿ ವ್ಯವಸ್ಥೆಯ ಪರಿಣಾಮ, ಚಾತುರ್ವರ್ಣ ವ್ಯವಸ್ಥೆ ಪರಿಣಾಮ ಅಸಮಾನತೆ ಸೃಷ್ಠಿಯಾಗಿದೆ. ಹೀಗಾಗಿ ಸಮಾನತೆ ತರಲು ಅಂತರ್ಜಾತಿ ವಿವಾಹ, ಆರ್ಥಿಕ, ಸಾಮಾಜಿಕ ಸಮಾನತೆ ತರುವುದೇ ಮಾರ್ಗ ಎಂದು ಹೇಳಿದರು.
ಗ್ಯಾರಂಟಿ ಯೋಜನೆ ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಲ್ಲ. ಅದರ ಮೇಲೆ ಜಾತಿ ಲೆಕ್ಕ ಹಾಕಿದರೆ ಹೇಗೆ?. ಅಧಿಕಾರ ಕೇವಲ ಬಲಾಢ್ಯರ ಕೈಗೆ ಇರಬಾರದು ಎಂಬುದು ಅಂಬೇಡ್ಕರ್ ಅವರ ಸಿದ್ದಾಂತವಾಗಿತ್ತು. ಬಲಾಢ್ಯರ ಕೈಗೆ ಅಧಿಕಾರ ಇದ್ದರೆ ಶೋಷಣೆ ಹಾಗೂ ದಬ್ಬಾಳಿಕೆ ಆರಂಭವಾಗುತ್ತದೆ. ಹೀಗಾಗಿ ಅಧಿಕಾರ ಹಂಚಿಕೆಯಾಗಬೇಕು. ಮನುಷ್ಯ ಮನುಷ್ಯನಾಗಿರಬೇಕು. ಪರಸ್ಪರ ಪ್ರೀತಿ ಸಬೇಕು, ಗೌರವಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಚಿವರಾದ ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್, ಆರ್.ಬಿ.ತಿಮ್ಮಾಪುರ, ಶಾಸಕರು, ಎಂಎಲ್ಸಿಗಳು, ಪಕ್ಷದ ಮುಖಂಡರು ಉಪಸ್ಥಿತರಿದ್ದರು.