ಸಿಎಂ ಸಿದ್ದರಾಮಯ್ಯ(ಸಂಗ್ರಹ ಚಿತ್ರ)
ಸಿಎಂ ಸಿದ್ದರಾಮಯ್ಯ(ಸಂಗ್ರಹ ಚಿತ್ರ) 
ರಾಜ್ಯ

ಎಫ್ ಎಸ್ ಎಲ್ ವರದಿಗೆ ಕಾಯುತ್ತಿದ್ದೇವೆ, ಲೋಕಸಭೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲವಿಲ್ಲ: ಸಿಎಂ ಸಿದ್ದರಾಮಯ್ಯ

Sumana Upadhyaya

ಹಾಸನ: ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಗೊಂದಲವಿಲ್ಲ, ಎಲ್ಲರೂ ಒಗ್ಗಟ್ಟಾಗಿದ್ದಾರೆ, ಅಭ್ಯರ್ಥಿಗಳ ಆಯ್ಕೆಗೆ ಸಮಸ್ಯೆಯೇನಿಲ್ಲ, ಸದ್ಯದಲ್ಲಿಯೇ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನಾನಾ ಇಲಾಖೆ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ, ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸಲು ಹಾಸನಕ್ಕೆ ಬಂದಿಳಿದ ವೇಳೆ ಸುದ್ದಿಗಾರರ ಜೊತೆ ಮಾತನಾಡಿ, ಜಾತಿ ಗಣತಿ ವರದಿ ಬಗ್ಗೆ ಕೇಳಿಬರುತ್ತಿರುವ ವಿರೋಧ, ಅಪಸ್ವರದ ಬಗ್ಗೆ ಕೇಳಿದಾಗ ಎಲ್ಲರಲ್ಲಿಯೂ ಅಭಿಪ್ರಾಯ ಕೇಳಿ ವರದಿ ಸಿದ್ದ ಮಾಡಿದ್ದಾರೆ ಎಂದು ಹೇಳುತ್ತಾರೆ, ನನಗೆ ಗೊತ್ತಿಲ್ಲ. ವರದಿ ನನಗೆ ನೀಡಿದ್ದಾರೆ, ಆದರೆ ನಾನಿನ್ನೂ ಅದನ್ನು ಓದಿಲ್ಲ, ವರದಿಯಲ್ಲಿ ಏನಿದೆ ಎಂದು ಗೊತ್ತಿಲ್ಲ ಎಂದರು.

ದೇಶಭಕ್ತಿಯನ್ನು ಬಿಜೆಪಿಯವರಿಂದ ಕಲಿಯಬೇಕಿಲ್ಲ: ಬಿಜೆಪಿಯವರು ದೇಶಭಕ್ತಿಯ ಪಾಠವನ್ನು ಕಾಂಗ್ರೆಸ್‌ಗೆ ಹೇಳಿಕೊಡುವ ಅಗತ್ಯವಿಲ್ಲ. ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ್ದು ಕಾಂಗ್ರೆಸ್ ಹೊರತು ಬಿಜೆಪಿಯಲ್ಲ. ಎಫ್‌ಎಸ್‌ಎಲ್‌ ವರದಿ ಬಂದ ತಕ್ಷಣ ಬಹಿರಂಗಪಡಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಪ್ರಕರಣ ಸಂಬಂಧಿಸಿದಂತೆ ಎಫ್‌ಎಸ್‌ಎಲ್ ವರದಿ ಬೇಗ ಬಹಿರಂಗಪಡಿಸಬೇಕು ಎಂದು ವಿರೋಧಪಕ್ಷದ ನಾಯಕ ಅಶೋಕ್ ಒತ್ತಾಯಿಸಿರುವ ಬಗ್ಗೆ ಅವರು ಪ್ರತಿಕ್ರಿಯಿಸಿದರು. ವರದಿ ಬಂದ ತಕ್ಷಣವೇ ಬಹಿರಂಗ ಮಾಡುತ್ತೇವೆ. ಭಾರತದ ಪರವಾಗಿ ಇಲ್ಲದಿರುವವರು ಘೋಷಣೆ ಕೂಗಿದ್ದು ನಿಜವಾಗಿದ್ದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಪಾಕ್ ಪರ ಘೋಷಣೆ ಮಾಡಿದ್ದರೆ ಕಠಿಣ ಕ್ರಮ: ವಿಧಾನ ಸೌಧ ಆವರಣದಲ್ಲಿ ರಾಜ್ಯಸಭಾ ಸದಸ್ಯ ಡಾ ನಾಸಿರ್ ಹುಸೇನ್ ಅವರ ಪರ ಅಭಿಮಾನಿಗಳು ಘೋಷಣೆ ಕೂಗುವ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೂಡ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ. ಎಫ್ ಎಸ್ ಎಲ್ ವರದಿಗೆ ಕಾಯುತ್ತಿದ್ದೇವೆ. ವರದಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ಹೌದು ಎಂದಾದರೆ ಆ ರೀತಿ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ, ನಾವು ವರದಿಗಾಗಿ ಕಾಯುತ್ತಿದ್ದೇವೆ ಎಂದರು.

ಜಾತಿಗಣತಿ ವರದಿ ಅವೈಜ್ಞಾನಿಕ ಎಂದು ಕಾಂಗ್ರೆಸ್ ನ ಹಿರಿಯ ಶಾಸಕರೇ ಹೇಳುತ್ತಿದ್ದಾರಲ್ಲವೇ ಎಂದು ಕೇಳಿದಾಗ ಜಯಪ್ರಕಾಶ್ ಹೆಗ್ಡೆ ಅದಕ್ಕೆ ಅಧ್ಯಕ್ಷರಾಗಿ ನೀಡಿದ ವರದಿಯನ್ನು ತೆಗೆದುಕೊಂಡಿದ್ದೇವೆ. ವಿರೋಧ ಪಕ್ಷದವರು ರಾಜಕೀಯ ಮಾಡುತ್ತಿದ್ದಾರೆ. ಮೊನ್ನೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಒಬ್ಬ ಶಾಸಕರು ಕಾಂಗ್ರೆಸ್ ಗೆ ವೋಟ್ ಹಾಕಿದರು, ಮತ್ತೊಬ್ಬರು ಗೈರಾದರು. ಅವರ ಪಕ್ಷದೊಳಗಿನ ಭಿನ್ನಾಭಿಪ್ರಾಯ, ಸಮಸ್ಯೆಯನ್ನು ಮುಚ್ಚಿಹಾಕಲು ಜಾತಿ ಗಣತಿ ವರದಿ ಬಗ್ಗೆ ಮಾತನಾಡುತ್ತಿದ್ದಾರಷ್ಟೆ ಎಂದರು.

SCROLL FOR NEXT