ರಾಮೇಶ್ವರಂ ಕೆಫೆ
ರಾಮೇಶ್ವರಂ ಕೆಫೆ 
ರಾಜ್ಯ

ಬೇರೆ ಬ್ರಾಂಚ್ ನಲ್ಲೂ ಅನುಮಾನಾಸ್ಪದ ಬ್ಯಾಗ್ ಪತ್ತೆ, ಶಿವರಾತ್ರಿಗೇ ಪುನಾರಂಭ: ರಾಮೇಶ್ವರಂ ಕೆಫೆ ಮಾಲೀಕ

Srinivasamurthy VN

ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಹಸಿರಾಗಿರುವಂತೆಯೇ ಕೆಫೆಯ ಮತ್ತೊಂದು ಬ್ರಾಂಚ್ ನಲ್ಲೂ ಇಂತಹುದೇ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿತ್ತು ಎಂದು ರಾಮೇಶ್ವರಂ ಕೆಫೆ ಮಾಲೀಕ ಹಾಗೂ ಸಿಇಒ ರಾಘವೇಂದ್ರ ರಾವ್ ಹೇಳಿದ್ದಾರೆ.

ಸ್ಫೋಟ ಸಂಭವಿಸಿದ ವೈಟ್ ಫೀಲ್ಡ್ ನಲ್ಲಿರುವ ರಾಮೇಶ್ವರಂ ಕೆಫೆ ಬ್ರಾಂಚ್ ಗೆ ಭೇಟಿ ನೀಡಿದ್ದ ಸಿಇಒ ರಾಘವೇಂದ್ರ ರಾವ್ ಅವರು, ಇಂದು ಸಂಜೆಯಿಂದ ರಾಮೇಶ್ವರಂ ಕೆಫೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಲು ಪೊಲೀಸರು ಅನುಮತಿ ನೀಡಿದ್ದಾರೆ. ನಿನ್ನೆ ಘಟನೆ ಬಗ್ಗೆ ಎಲ್ಲರೂ ನನ್ನ ಜೊತೆಯಲ್ಲಿ ನಿಂತಿದ್ದು, ನಮ್ಮ ಸಂಸ್ಥೆಯ ಪರವಾಗಿ ಎಲ್ಲರಿಗೂ ವಂದನೆ ಹೇಳುತ್ತೇನೆ. ಇದು ನಿನ್ನೆ ಮೊನ್ನೆ ಹುಟ್ಟಿದ ಸಂಸ್ಥೆ ಅಲ್ಲ. 2012 ರಲ್ಲಿ ನಾಲ್ಕು ಜನ ಸೇರಿಕೊಂಡು ಕುಮಾರಪಾರ್ಕ್​ ಬಳಿಯ ಪುಟ್ ಪಾತ್ ಮೇಲೆ ಆರಂಭಿಸಿದ್ದೆವು. ಅವತ್ತಿಂದಲೇ ನಮಗೆ ಕಷ್ಟಗಳು ಎದುರಾದವು, ಇದು ನಮಗೆ ಹೊಸದೇನಲ್ಲ‌. ನಾನು ನಂಬಿರೋದು ಎಪಿಜೆ ಅಬ್ದುಲ್ ಕಲಾಂ. ಅವರ ಪ್ರೇರಣೆ ಮೇಲೆ ರಾಮೇಶ್ವರಂ ಕೆಫೆ ಶುರು ಮಾಡಲಾಗಿದೆ ಎಂದರು.

2 ಸಾವಿರ ಮಂದಿಗೆ ಕೆಲಸ ನೀಡಿದ್ದೇವೆ

ನಮ್ಮಲ್ಲಿ ಎಲ್ಲಾ ಬ್ರಾಂಚ್ ಸೇರಿ ಎರಡು ಸಾವಿರ ಜನ ಕೆಲಸ ಮಾಡ್ತಾರೆ. ಎಲ್ಲರೂ ಹಳ್ಳಿ ಕಡೆಯವರು. ಏನೂ ಮಾಡೋಕೆ ಆಗದವರು ದಿಕ್ಕು ತೋಚದೆ ಬರುವವರಿಗೆ ನಾವು ಕೆಲಸ ಕೊಡುತ್ತೇವೆ ಎಂದರು.

ಪೈಪೋಟಿ ಕೃತ್ಯ ಅಲ್ಲಗಳೆದ ಕೆಫೆ ಮಾಲೀಕ

ಇನ್ನು ಇತರೆ ಹೊಟೆಲ್ ಗಳ ಪೈಪೋಟಿಯಿಂದ ಈ ಕೃತ್ಯ ನಡೆದಿರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಮೇಶ್ವರಂ ಕೆಫೆ ಮಾಲೀಕ ರಾಘವೇಂದ್ರ ರಾವ್ ಅವರು, 'ಇಲ್ಲ ಅದು ಸಾಧ್ಯವಿಲ್ಲ.. ಹೊಟೇಲ್ ಬ್ಯುಸಿನೆಸ್ ಮಾಡುವವರು ಈ ರೀತಿ ಕೃತ್ಯ ಮಾಡುವುದಿಲ್ಲ. ಅನ್ನ ಹಾಕುವವರು ನಾವು ಇಂತಹ ಕೆಲಸ ಮಾಡಲ್ಲ ಎಂದರು. ಅಂತೆಯೇ ಪ್ರತಿ ಹಂತದಲ್ಲಿ ಹೊಡೆತ ಬಿದ್ದಿದೆ. ಶುಕ್ರವಾರ ನಡೆದ ಘಟನೆ ಸರಿಯಲ್ಲ. ಭಾರತೀಯರಾಗಿ ಇದನ್ನ ಖಂಡಿಸಬೇಕು. ಇದು ನಮಗೆಲ್ಲಾ ಮುನ್ನೆಚ್ಚರಿಕೆಯಾಗಿದ್ದು, ನಡೆದ ಘಟನೆಯನ್ನು ಎದುರಿಸಬೇಕಿದೆ ಎಂದರು.

ರಾಜಾಜಿನಗರ ಬ್ರಾಂಚ್ ನಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆ

ಇನ್ನು ಕೆಫೆಯಲ್ಲಿ ಅನ್ ಐಡೆಂಟಿಪೈಡ್ ಐಟಂ ಸಿಕ್ಕರೆ ನಾವು ಅದನ್ನ ನಮ್ಮ ಆಪ್ ನಲ್ಲಿ ಹಾಕುತ್ತೇವೆ. ಮೊನ್ನೆ ಕೆಲಸದ ಒತ್ತಡದಲ್ಲಿ ಅದನ್ನ ಹಾಕಿಲ್ಲ. ನಿನ್ನೆ ಘಟನೆ ವೇಳೆ ನಮ್ಮ ಸಿಬ್ಬಂದಿ ಗಮನಕ್ಕೆ ಬರಲು ಗ್ರಾಹಕರ ದಟ್ಟಣೆಯಿತ್ತು ಎಂದು ರಾಘವೇಂದ್ರ ರಾವ್ ಹೇಳಿದರು. ಆಂತೆಯೇ ಈ ಹಿಂದೆ ನವೆಂಬರ್ ನಲ್ಲೂ ಇಂತಹುದೇ ಅನುಮಾನಾಸ್ಪದ ಬ್ಯಾಗ್ ವೊಂದು ರಾಜಾಜಿನಗರ ಬ್ರಾಂಚ್ ನಲ್ಲಿ ಪತ್ತೆಯಾಗಿತ್ತು. ಪ್ರತಿದಿನ ಸಾವಿರಾರು ಜನರು ಕೆಫೆಗೆ ಭೇಟಿ ನೀಡುತ್ತಾರೆ. ಕೆಲವರು ತಪ್ಪಾಗಿ ಬ್ಯಾಗ್ ಮರೆತು ಹೋಗಿರಬಹುದು. ಅಂತಹ ಸಂದರ್ಭಗಳಲ್ಲಿ, ನಾವು ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುತ್ತೇವೆ. ಅವರು ಬಂದು ಬ್ಯಾಗ್ ಪರಿಶೀಲಿಸಿದ್ದರು ಎಂದು ರಾಘವೇಂದ್ರ ರಾವ್ ಹೇಳಿದರು.

ಪೊಲೀಸರ ಸಲಹೆ ಪಾಲಿಸುತ್ತೇವೆ

ಗಾಯಾಳುಗಳ ಜೊತೆ ನಾವು ಇರುತ್ತೇವೆ. ಸರ್ಕಾರವು ಚಿಕಿತ್ಸೆ ನೀಡೋದಾಗಿ ಹೇಳಿದೆ. ನಾವು ಚಿಕಿತ್ಸೆ ವೆಚ್ಚ ಭರಿಸುತ್ತೇವೆ. ಪೊಲೀಸರು ಮೆಟಲ್ ಡಿಟೆಕ್ಟರ್ ಇಟ್ಕೊಳಿ ಅಂತಾ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಅದನ್ನೂ ಅಳವಡಿಸಿಕೊಳ್ತೀವಿ ಎಂದು ರಾಮೇಶ್ವರಂ ಕೆಫೆ ಮಾಲೀಕರು ಹೇಳಿದರು.

ಶಿವರಾತ್ರಿಗೆ ಕೆಫೆ ಪುನಾರಂಭ

ಬಾಂಬ್ ಸ್ಪೋಟ ನಡೆದ ರಾಮೇಶ್ವರಂ ಕೆಫೆ (Rameshwaram Café) ಮುಂದಿನ ಶುಕ್ರವಾರ ಅಂದ್ರೆ ಶಿವರಾತ್ರಿಯಂದು ಪುನಾರಂಭವಾಗಲಿದೆ ಮಾಲೀಕರಾದ ರಾಘವೇಂದ್ರ ರಾವ್ (Raghavendra Rao, Rameshwaram Cafe Founder) ಮಾಹಿತಿ ನೀಡಿದರು. ನಾನು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಹುಳದೇನಹಳ್ಳಿ ಗ್ರಾಮದ ರೈತ ಕುಟುಂಬದಿಂದ ಬಂದವನು. ಇಂದು ಈ ಕಷ್ಟದ ಸಮಯದಲ್ಲಿ ಸಿಎಂ, ರಾಜ್ಯಪಾಲರು, ಸಚಿವರು, ಪೊಲೀಸರು ಎಲ್ಲರೂ ನನ್ನ ಜೊತೆಯಲ್ಲಿದ್ದರು. ನಮಗೆ ಬೆಂಬಲ ನೀಡಿದ ಎಲ್ಲರನ್ನು ಕಾರ್ಯಕ್ರಮ ಕರೆಯುತ್ತೇನೆ. ಹಾಗಾಗಿ ಪುನಾರಂಭ ಕಾರ್ಯಕ್ರಮಕ್ಕೆ ಎಲ್ಲರೂ ಬರಬೇಕು ಎಂದು ಆಹ್ವಾನಿಸಿದರು.

SCROLL FOR NEXT