BRT ಹುಲಿ ಸಂರಕ್ಷಿತಾರಣ್ಯದಲ್ಲಿ ಕಾಡ್ಗಿಚ್ಚು
BRT ಹುಲಿ ಸಂರಕ್ಷಿತಾರಣ್ಯದಲ್ಲಿ ಕಾಡ್ಗಿಚ್ಚು TNIE
ರಾಜ್ಯ

ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಭೀಕರ ಕಾಡ್ಗಿಚ್ಚು, ಹತ್ತಾರು ಎಕರೆ ಅರಣ್ಯ ನಾಶ

Srinivasamurthy VN

ಚಾಮರಾಜನಗರ: ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದ ಸೋಮವಾರ ಭಾರಿ ಪ್ರಮಾಣದ ಕಾಡ್ಗಿಚ್ಚು ಹೊತ್ತುಕೊಂಡಿದ್ದು, ಹತ್ತಾರು ಎಕರೆ ಅಮೂಲ್ಯ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ.

ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವಲಯದಲ್ಲಿ ಸೋಮವಾರ ಕಾಳ್ಗಿಚ್ಚು ಕಂಡು ಬಂದಿದ್ದು, ಪುಣಜನೂರಿನಿಂದ ಬೇಡಗುಳಿಗೆ ಹೋಗುವ ರಸ್ತೆಯ ವ್ಯಾಪ್ತಿಯ ಕುರಿಮಂದೆ, ಕುಂಬಳಕಾಯಿ ಗುಡ್ಡ ಪ್ರದೇಶದ ಮೂರ್ನಾಲ್ಕು ಕಡೆಗಳಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಿದ್ದು, ಬೆಂಕಿ ಆರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಬೆಳಿಗ್ಗೆಯೇ ಬೆಂಕಿ ಹೊತ್ತಿಕೊಂಡಿದ್ದು, ಸಂಜೆಯಾದರೂ ನಂದಿಸಲು ಸಾಧ್ಯವಾಗಿಲ್ಲ. ಬಿಸಿಲಿನಿಂದಾಗಿ ಕಾಡು ಒಣಗಿದ್ದು, ಹೀಗಾಗಿ ಬೆಂಕಿ ವೇಗವಾಗಿ ಹರಡುತ್ತಿದೆ. ಕನಿಷ್ಠ 50 ಎಕರೆ ಬೆಂಕಿಗೆ ಆಹುತಿಯಾಗಿದೆ ಎಂದು ಅರಣ್ಯ ಅಧಿಕಾರಿಗಳು ಹೇಳುತ್ತಿದ್ದಾರೆ. ನೂರಾರು ಎಕರೆ ಭಸ್ಮವಾಗಿದೆ ಎಂದು ಪುಣಜನೂರಿನ ನಿವಾಸಿಗಳು ಹೇಳುತ್ತಿದ್ದಾರೆ.

ಅರಣ್ಯ ಭಾಗದ ಮಧ್ಯಭಾಗದಲ್ಲೇ ಬೆಂಕಿ ಬಿದ್ದಿರುವುದರಿಂದ ಅರಣ್ಯ ನಾಶದ ಅಂದಾಜು ಸಿಗುತ್ತಿಲ್ಲ. ಆದರೆ, ದಟ್ಟ ಹೊಗೆ ಆವರಿಸಿದ್ದು, ದೂರದಿಂದಲೇ ಕಾಡ್ಗಿಚ್ಚು ಕಾಣಿಸುತ್ತಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್‌ ದೀಪ್‌ ಜೆ.ಕಾಂಟ್ರ್ಯಾಕ್ಟರ್‌ ಅವರು, ‘ಕನಿಷ್ಠ 50 ಎಕರೆ ನಾಶವಾಗಿರಬಹುದು. ಬೆಂಕಿ ಎತ್ತರಕ್ಕೆ ವ್ಯಾಪಿಸಿಲ್ಲ. ಬೆಂಕಿ ನಂದಿಸಲು ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಥಳೀಯರೇ ಬೆಂಕಿ ಹಾಕಿರುವ ಅನುಮಾನ ಇದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಿದ್ದೇವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದೇವೆ’ ಎಂದರು.

SCROLL FOR NEXT