ಸಂಗ್ರಹ ಚಿತ್ರ
ಸಂಗ್ರಹ ಚಿತ್ರ 
ರಾಜ್ಯ

ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ ಸರ್ಕಾರ: 1 ರಿಂದ 10 ನೇ ತರಗತಿವರೆಗೆ ಬದಲಾವಣೆ; ಕೆಲವು ಪಾಠಗಳಿಗೆ ಕೊಕ್!

Manjula VN

ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಕೊನೆಗೂ ಸದ್ದಿಲ್ಲದೇ 2024-25 ಸಾಲಿನ ಪಠ್ಯಪುಸ್ತಕವನ್ನು ಪರಿಷ್ಕರಿಸಿದೆ.

ಡಾ ಮಂಜುನಾಥ್ ಹೆಗಡೆ ನೇತೃತ್ವದ ಸಮಿತಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ ಶಾಲಾ ಶಿಕ್ಷಣ ಇಲಾಖೆ ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಪಠ್ಯಪುಸ್ತಕ ಪರಿಷ್ಕರಣೆ ಮಾಡುತ್ತೇವೆ ಎಂದು ಈ ಹಿಂದೆಯೇ ಕಾಂಗ್ರೆಸ್​ ಸರ್ಕಾರ ತಿಳಿಸಿತ್ತು. 2023-2024 ಸಾಲಿನಲ್ಲೂ ಹಲವು ತಿದ್ದುಪಡಿ ಮಾಡಿತ್ತು. ಇದರಂತೆ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲೂ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2005 ರ ಮಾರ್ಗಸೂಚಿಯಂತೆ ರಾಜ್ಯ ಪಠ್ಯಕ್ರಮದಲ್ಲಿ ಬದಲಾವಣೆ ಮಾಡಿದೆ.

01 ರಿಂದ 10 ನೇ ತರಗತಿವರೆಗಿನ ಕನ್ನಡ ಪ್ರಥಮ ಮತ್ತು ದ್ವಿತೀಯ ಭಾಷೆ ಹಾಗೂ 09 ಮತ್ತು 10 ನೇ ತರಗತಿಯ ಕನ್ನಡ ತೃತೀಯ ಭಾಷೆಯ ಪಠ್ಯಪುಸ್ತಕಗಳು ಪರಿಷ್ಕರಣೆ ಮಾಡಲಾಗಿದೆ. ಇದರ ಜೊತೆಗೆ 06 ರಿಂದ 10 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕಗಳ ಪರಿಷ್ಕರಣೆ ಮಾಡಲಾಗಿದೆ.

ಪರಿಷ್ಕರಣೆಗೆ ವಿಷಯವಾರು ತಜ್ಞರ ಸಮಿತಿಯನ್ನು ಹಾಗೂ ಪಠ್ಯಪುಸ್ತಕಗಳ ಪರಿಷ್ಕರಣಾ ಕಾರ್ಯನಿರ್ವಹಿಸುವ ಸಮಿತಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ಹಾಗೂ ಸಲಹೆ ನೀಡುವ ಉದ್ದೇಶಕ್ಕಾಗಿ ನಿವೃತ್ತ ಪ್ರಾಧ್ಯಾಪಕ ಮಂಜುನಾಥ. ಜಿ. ಹೆಗಡೆ ನೇತೃತ್ವದ ಪರಿಷ್ಕರಣಾ ಸಮಿತಿಯು ಮುಖ್ಯವಾಗಿ ಈ ಕೆಳಕಂಡ ಅಂಶಗಳಿಗೆ ಆದ್ಯತೆಯನ್ನು ನೀಡಿ, ಪಠ್ಯಪುಸ್ತಕಗಳನ್ನು ಪರಿಷ್ಕರಿಸಿದೆ.

  • ರಾಷ್ಟ್ರೀಯ ಹಾಗೂ ರಾಜ್ಯ ಪಠ್ಯಕ್ರಮ ಚೌಕಟ್ಟುಗಳು ಮತ್ತು ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತವಾಗದಂತೆ ಪರಿಷ್ಕರಣೆಗೆ ಒಳಪಟ್ಟ ಪಠ್ಯಪುಸ್ತಕಗಳ ಮೂಲ ಸ್ವರೂಪ ಬದಲಾಗದಂತೆ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗಳನ್ನಷ್ಟೇ ಗಮನದಲ್ಲಿರಿಸಿಕೊಂಡು ಈ ಪರಿಷ್ಕರಣೆಯನ್ನು ನಡೆಸಲಾಗಿದೆ.

  • ಪ್ರಸ್ತುತ ಪರಿಷ್ಕರಣ ಸಮಿತಿಗೆ ಪೂರ್ವದಲ್ಲಿಯೇ ಶಾಲಾ ಶಿಕ್ಷಣ ಇಲಾಖೆಯು ಹೊರಡಿಸಿದ್ದ 2023-24ನೇ ಸಾಲಿನ ಪಠ್ಯಪುಸ್ತಕಗಳ ತಿದ್ದೋಲೆ” ಯ ಅಂಶಗಳನ್ನು ಸಮಿತಿಯು ಅಳವಡಿಸಿಕೊಂಡಿದೆ.

  • ವಿವಿಧ ಸಂಘಟನೆಗಳು, ವ್ಯಕ್ತಿಗಳು ಹಾಗೂ ಸರ್ಕಾರದ ಇಲಾಖೆಗಳು ಪಠ್ಯಪುಸ್ತಕದಲ್ಲಿ ನಿರ್ದಿಷ್ಟ ವಿಷಯಾಂಶವನ್ನು ಆಳವಡಿಸುವ/ಕೈಬಿಡುವ/ಪರಿಷ್ಕರಿಸುವ ಕುರಿತು ಮಾಡಿದ ಎಲ್ಲಾ ಮನವಿಗಳನ್ನು ಪರಿಶೀಲಿಸಿ ಸೂಕ್ತವೆನಿಸಿದ ಸಲಹೆಗಳನ್ನು ಪರಿಷ್ಕರಣೆಯಲ್ಲಿ ಅಳವಡಿಸಿಕೊಳ್ಳಲಾಗಿದೆ.

  • ವಿಷಯಾಂಶಗಳಿಗೆ ಸಂಬಂಧಿಸಿದಂತೆ, ಪಠ್ಯಪುಸ್ತಕದಲ್ಲಿರುವ ಅಂಕಿ ಅಂಶಗಳನ್ನೂ ಮಾಹಿತಿಗಳನ್ನು, ನಕ್ಷೆಗಳನ್ನು, ಚಿತ್ರಗಳು ಮತ್ತು ವ್ಯಾಕಾರಣಾಂಶಗಳನ್ನು ಅಗತ್ಯವಿರುವ ಕಡೆ ಪರಿಷ್ಕರಿಸಲಾಗಿದೆ.

  • ಮಕ್ಕಳ ಪಠ್ಯಪುಸ್ತಕದ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಎಲ್ಲಾ ಪಠ್ಯಪುಸ್ತಕಗಳನ್ನು ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಎರಡು ಸಂಪುಟಗಳಾಗಿ ವಿಭಾಗಿಸುವ ಸರ್ಕಾರದ ನಿರ್ಣಯಕ್ಕೆ ಅನುಸಾರವಾಗಿ, ಎರಡೂ ಸಂಪುಟಗಳಲ್ಲಿನ ಕಲಿಕಾಂಶಗಳು/ಪಾತಗಳು ಸರಳತೆಯಿಂದ ಸಂಕೀರ್ಣತೆಯೆಡೆಗೆ ಸಾಗುವಂತೆ ವ್ಯವಸ್ಥಿತವಾಗಿ ಅಳವಡಿಸಲಾಗಿದೆ.

  • ಕನ್ನಡ ಭಾಷಾ ಪಠ್ಯಪುಸ್ತಕಗಳಲ್ಲಿ ಪ್ರಮುಖ ಸಾಹಿತಿಗಳಿಗೆ ಹಾಗೂ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗಳಿಗೂ ಪ್ರಾಶಸ್ತ್ಯ ನೀಡಲಾಗಿರುತ್ತದೆ.

  • ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ, ಸ್ಪರ್ಧಾತ್ಮಕ ಪರೀಕ್ಷಾ ದೃಷ್ಟಿಯಿಂದ ಮಕ್ಕಳ ಕಲಿಕೆಗೆ ಹೊರೆಯಾಗದಂತೆ ಕೆಲವು ಹೊಸ ಅಧ್ಯಾಯಗಳು, ವಿಷಯಾಂಶಗಳನ್ನು ಸೇರ್ಪಡೆ ಮಾಡಲಾಗಿದೆ ಶಿಕ್ಷಣ ಇಲಾಖೆ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪರಿಷ್ಕರಣೆ ಪಠ್ಯದ ಪ್ರಮುಖ ಅಂಶಗಳು ಇಂತಿವೆ...

  • 6ನೇ ತರಗತಿ ಸಮಾಜ ವಿಜ್ಞಾನ: ಪೌರ ಮತ್ತು ಪೌರತ್ವ ಪಾಠವನ್ನು ಲಿಂಗ ಸಮಾನತೆಯ ನೆಲೆಯಲ್ಲಿ ಪರಿಷ್ಕರಿಸಲಾಗಿದೆ.

  • 7ನೇ ತರಗತಿ ಸಮಾಜ ವಿಜ್ಞಾನ: ವಿಶ್ವಗುರು ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕ ಎಂದು ದಾಖಲಿಸಿದೆ

  • 8ನೇ ತರಗತಿ ಇತಿಹಾಸ: ಸನಾತನ ಧರ್ಮ ಎಂಬ ಅಧ್ಯಾಯದಲ್ಲಿಕೆಲವು ಅಂಶಗಳನ್ನು ಸೇರಿಸಿ ವ್ಯವಸ್ಥಿತವಾಗಿ ನಿರೂಪಣೆ ಮಾಡಿದೆ

  • 9ನೇ ತರಗತಿ ಇತಿಹಾಸ: ಭಕ್ತಿಪಂಥ ಅಧ್ಯಾಯದಲ್ಲಿಕನಕದಾಸರು, ಪುರಂದರದಾಸರು, ಸಂತ ಶಿಶುನಾಳ ಶರೀಫರ ಮಾಹಿತಿ ಸೇರ್ಪಡೆ

  • 10ನೇ ತರಗತಿ ಇತಿಹಾಸ: ಸಾರ್ವಜನಿಕ ಆಡಳಿತ ಎಂಬ ಹೊಸ ಅಧ್ಯಾಯ ಸೇರ್ಪಡೆ

  • 1-5ನೇ ತರಗತಿ ಕನ್ನಡ: ಕೆ.ವಿ.ತಿರುಮಲೇಶ್‌, ವಿ.ಜಿ.ಭಟ್ಟರ ಮಕ್ಕಳ ಕವನಗಳ ಸೇರ್ಪಡೆ

  • ಕಂಬಾರ-'ಸೀಮೆ', ಕಾರ್ನಾಡ್‌- 'ಅಧಿಕಾರ', ದೇವಿದಾಸ- 'ಚಕ್ರಗ್ರಹಣ', ಮರಿಯಪ್ಪ ಭಟ್ಟ- 'ನಮ್ಮ ಭಾಷೆ', ಎ.ಎನ್‌.ಮೂರ್ತಿರಾವ್‌- 'ವ್ಯಾಘ್ರ ಗೀತೆ', ದೇವನೂರು ಮಹಾದೇವ- 'ಎದೆಗೆ ಬಿದ್ದ ಅಕ್ಷರ', ಅಕ್ಕಮಹಾದೇವಿ- 'ವಚನಗಳು' ಸೇರ್ಪಡೆ

  • 9-10ನೇ ತರಗತಿ ಕನ್ನಡ: ಕೈಬಿಟ್ಟಿದ್ದ ನಾಗೇಶ್‌ ಹೆಗಡೆ, ಪಿ.ಲಂಕೇಶ್‌, ಶ್ರೀನಿವಾಸ ಉಡುಪ ಅವರ ಕವನ ಹೊಸದಾಗಿ ಸೇರ್ಪಡೆ ಮಾಡಲಾಗಿದೆ.

SCROLL FOR NEXT