ಗೃಹ ಸಚಿವ ಪರಮೇಶ್ವರ್
ಗೃಹ ಸಚಿವ ಪರಮೇಶ್ವರ್ 
ರಾಜ್ಯ

ರಾಜ್ಯದಲ್ಲಿ ಶೀಘ್ರದಲ್ಲೇ ಸೈಬರ್ ಭದ್ರತಾ ನೀತಿ ಜಾರಿ: ಗೃಹ ಸಚಿವ ಪರಮೇಶ್ವರ್

Manjula VN

ಬೆಂಗಳೂರು: ರಾಜ್ಯ ಸರ್ಕಾರ ಶೀಘ್ರದಲ್ಲೇ ಸೈಬರ್ ಭದ್ರತಾ ನೀತಿಯನ್ನು ಜಾರಿಗೆ ತರಲಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅವರು ಬುಧವಾರ ಹೇಳಿದರು.

ಅನೇಕ ಸರ್ಕಾರಿ ಇಲಾಖೆಗಳು ತಮ್ಮ ಸೇವೆಗಳನ್ನು ಜನರಿಗೆ ಸುಲಭವಾಗಿ ಒದಗಿಸಲು ಡಿಜಿಟಲೀಕರಣಗೊಳ್ಳುತ್ತಿವೆ. ಸೇವಾ ಸಿಂಧು ಮೊಬೈಲ್ ಬ್ಯಾಂಕಿಂಗ್ ಮತ್ತು ವರ್ಚುವಲ್ ತರಗತಿಗಳು ಸೇರಿದಂತೆ ವಿವಿಧ ಡಿಜಿಟಲ್ ಸೇವೆಗಳನ್ನು ಅಳವಡಿಸಿಕೊಂಡಿದ್ದಾರೆ. ಡಿಜಿಟಲ್ ಸೇವೆಗಳನ್ನು ಅಳವಡಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೈಬರ್ ಸುರಕ್ಷತೆ ಮತ್ತು ಭದ್ರತೆಯ ಮೇಲೆ ಗಮನಹರಿಸುವುದು ಮುಖ್ಯವಾಗಿದೆ ಎಂದರು.

ಡೀಪ್‌ಫೇಕ್, ಅಕ್ರಮ ಹಣ ವರ್ಗಾವಣೆ, ಆನ್‌ಲೈನ್ ಬ್ಯಾಂಕಿಂಗ್, ಲೋನ್ ಆ್ಯಪ್ ವಂಚನೆ ಮತ್ತು ಇತರ ಪ್ರಕರಣಗಳು ಹೆಚ್ಚುತ್ತಿವೆ. ಗಂಭೀರ ಪ್ರಕರಣಗಳಲ್ಲಿ ವಿದೇಶಿ ಕಂಪನಿಗಳ ನೆರವು ಸಿಗದಿದ್ದರೆ ತನಿಖೆ ಕಷ್ಟವಾಗುತ್ತದೆ. ಸೈಬರ್ ಕ್ರೈಮ್ ಜಾಗತಿಕ ಸವಾಲು ಮತ್ತು ಸಮಸ್ಯೆಯಾಗಿದೆ . ಸೈಬರ್ ಅಪರಾಧವನ್ನು ತಡೆಯಲು ಅನೇಕ ಕಂಪನಿಗಳು ಸಂಶೋಧನೆಯನ್ನು ಪ್ರಾರಂಭಿಸಿವೆ. ಸೈಬರ್ ಅಪರಾಧಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ.

ಸೈಬರ್ ಅಪರಾಧ ವಿಭಾಗವನ್ನು ಬಲಪಡಿಸಲು ರಾಜ್ಯ ಸರ್ಕಾರ ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ ಮತ್ತು ಕ್ಲೌಡ್ ಕಂಪ್ಯೂಟಿಂಗ್‌ನೊಂದಿಗೆ ವ್ಯವಹರಿಸುವ ಕಂಪನಿಗಳಿಂದ ಸಹಾಯವನ್ನು ಪಡೆಯಲಿದೆ. ಸೈಬರ್ ಕ್ರೈಂ ಕಡಿಮೆ ಮಾಡುವ ಮತ್ತು ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಸಿಐಡಿ ಕಚೇರಿಯಲ್ಲಿ ಸ್ಥಾಪಿಸಲಾದ ಸೈಬರ್ ಅಪರಾಧ ತನಿಖಾ ತರಬೇತಿ ಮತ್ತು ಸಂಶೋಧನೆಯಲ್ಲಿ (ಸಿಸಿಐಟಿಆರ್) ತರಬೇತಿ ಕಾರ್ಯಕ್ರಮಗಳಿಂದ ಪೊಲೀಸ್, ನ್ಯಾಯಾಂಗ ಮತ್ತು ಭಾರತೀಯ ರಕ್ಷಣಾ ಪಡೆಗಳ 33,000 ಕ್ಕೂ ಹೆಚ್ಚು ಸಿಬ್ಬಂದಿ ಪ್ರಯೋಜನ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ಸೈಬರ್ ದಾಳಿಗಳು ಮತ್ತು ಸೈಬರ್ ಅಪರಾಧಿಗಳಿಂದ ಬೆದರಿಕೆಗಳು ವಿವಿಧ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತವೆ. ಇಂತಹ ದಾಳಿಗಳನ್ನು ತಡೆಯಲು ಜಾಗತಿಕ ಮಟ್ಟದಲ್ಲಿ ಸಹಕಾರ ಅಗತ್ಯವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಎಸ್‌ಆರ್ ಉಮಾಶಂಕರ್, ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಡಿಜಿಪಿ ಎಂಎ ಸಲೀಂ, ಎಡಿಜಿಪಿ ಪ್ರಣಬ್ ಮೊಹಾಂತಿ, ಇನ್ಫೋಸಿಸ್ ಫೌಂಡೇಶನ್ ಟ್ರಸ್ಟಿ ಸುನಿಲ್ ಕುಮಾರ್ ಧಾರೇಶ್ವರ್ ಮತ್ತು ಡಾಟಾ ಸೆಕ್ಯುರಿಟಿ ಕೌನ್ಸಿಲ್ ಆಫ್ ಇಂಡಿಯಾ ಸಿಇಒ ವಿನಾಯಕ್ ಗೋಡ್ಸೆ ಉಪಸ್ಥಿತರಿದ್ದರು.

SCROLL FOR NEXT